ಪದ್ಯ ೪೫: ಧೃತರಾಷ್ಟ್ರನು ಯಾರನ್ನು ಸಂತೈಸಿಸಲು ಧರ್ಮಜನಿಗೆ ಹೇಳಿದನು?

ಸಾಕಿದಂತಿರಲಬಲೆಯರೊಳು
ದ್ರೇಕಿ ನಿಮ್ಮಯ ಹಿರಿಯ ತಾಯು
ದ್ರೇಕವನು ಪರಿಹರಿಸು ಶೋಕಕ್ರೋಧದುಪಟಳಕೆ
ಆಕೆ ಸೈರಿಸಲರಿಯಳರಿವಿನೊ
ಳಾಕೆವಾಳರು ತಿಳಿಹಿ ತಮ್ಮನ
ನಾಕೆಯನು ಕಾಣಿಸುವುದೆಂದನು ವ್ಯಾಸ ವಿದುರರಿಗೆ (ಗದಾ ಪರ್ವ, ೧೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಧರ್ಮಜನನ್ನು ಉದ್ದೇಶಿಸುತ್ತಾ, ಧರ್ಮಜ ನೀನಾಡಿದ ಮಾತು ಒಳಿತಾಗಿದೆ, ಇದು ನಮಗೆ ಸಾಕು, ನಿಮ್ಮ ತಾಯಿಯ ಉದ್ರೇಕವನ್ನು ನಿವಾರಿಸು. ಶೋಕವೊಂದು ಕಡೆ, ಕೋಪವೊಂಡುಕಡೆ, ಅವುಗಳ ಉಪಟಲವನ್ನು ಆಕೆ ತಡೆದುಕೊಳ್ಳಲಾರಳು ಎಂದು ಹೇಳಿ ವ್ಯಾಸ ವಿದುರರಿಗೆ ಇವರನ್ನು ಕರೆದುಕೊಂಡು ಹೋಗಿ ಆಕೆಯನ್ನು ತೋರಿಸಿರಿ ಎಂದನು.

ಅರ್ಥ:
ಸಾಕು: ನಿಲ್ಲು; ಅಬಲೆ: ಹೆಣ್ಣು; ಉದ್ರೇಕ: ಉದ್ವೇಗ, ತಳಮಳ; ಹಿರಿಯ: ದೊಡ್ಡ; ತಾಯಿ: ಅಮ್ಮ; ಪರಿಹರಿಸು: ಶಮನಗೊಳಿಸು; ಶೋಕ: ದುಃಖ; ಕ್ರೋಧ: ಕೋಪ; ಉಪಟಳ: ಕಿರುಕುಳ; ಸೈರಿಸು: ಸಮಾಧಾನ ಪಡಿಸು; ಅರಿ: ತಿಳಿ; ಆಕೆವಾಳ: ವೀರ, ಪರಾಕ್ರಮಿ; ಕಾಣಿಸು: ನೋದು;

ಪದವಿಂಗಡಣೆ:
ಸಾಕ್+ಇದಂತಿರಲ್+ಅಬಲೆಯರೊಳ್
ಉದ್ರೇಕಿ +ನಿಮ್ಮಯ +ಹಿರಿಯ +ತಾಯ್
ಉದ್ರೇಕವನು +ಪರಿಹರಿಸು +ಶೋಕ+ಕ್ರೋಧದ್+ಉಪಟಳಕೆ
ಆಕೆ +ಸೈರಿಸಲ್+ಅರಿಯಳ್+ಅರಿವಿನೊಳ್
ಆಕೆವಾಳರು+ ತಿಳಿಹಿ +ತಮ್ಮನನ್
ಆಕೆಯನು +ಕಾಣಿಸುವುದೆಂದನು +ವ್ಯಾಸ +ವಿದುರರಿಗೆ

ಅಚ್ಚರಿ:
(೧) ಆಕೆ, ಆಕೆವಾಳ, ಆಕೆಯನು – ಆಕೆ ಪದದ ಬಳಕೆ
(೨) ಗಾಂಧಾರಿಯ ಸ್ಥಿತಿ – ನಿಮ್ಮಯ ಹಿರಿಯ ತಾಯುದ್ರೇಕವನು ಪರಿಹರಿಸು ಶೋಕಕ್ರೋಧದುಪಟಳಕೆ
ಆಕೆ ಸೈರಿಸಲರಿಯಳ್

ಪದ್ಯ ೨೭: ಕರ್ಣನಿಗೆ ಯಾರನ್ನು ಸಂಹರಿಸಲು ಹೇಳಿದನು?

ತಾಗಿ ವಜ್ರವ ಮುಕ್ಕುಗಳೆವಡೆ
ಸಾಗರವ ಹೊಗಳೇಕ ಗಿರಿಗಳು
ಹೋಗಲಿನ್ನಾ ಮಾತು ಮೀರಿದ ದೈತ್ಯನುಪಟಳವ
ಈಗ ಮಾಣಿಸು ನಮ್ಮ ಸುಭಟರು
ಯೋಗಿಗಳವೊಲು ದಂಡಹೀನರು
ಬೇಗ ಮಾಡಿನ್ನಮರವೈರಿಯ ತರಿದು ಬಿಸುಡೆಂದ (ದ್ರೋಣ ಪರ್ವ, ೧೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಉತ್ತರಿಸುತ್ತಾ, ಆಗಲಿ, ಇನ್ನು ನಮ್ಮ ವೀರರನ್ನು ನಿಂದಿಸುವುದಿಲ್ಲ. ವಜ್ರಾಯುಧವನ್ನು ನಿಷ್ಕ್ರಿಯಗೊಳಿಸಲು, ಪರ್ವತಗಳು ಸಮುದ್ರವನ್ನೇಕೆ ಹೊಗಬೇಕು. ಈಗ ಈ ರಾಕ್ಷಸನ ಉಪಟಳವನ್ನು ನಿಲ್ಲಿಸು. ಉಳಿದ ವೀರರೆಲ್ಲಾ ಯೋಗಿಗಳಂತೆ ಪ್ರತೀಕಾರಕ್ಕಾಗಿ ದಂಡೋಪಾಯವನ್ನು ತ್ಯಜಿಸಿದ್ದಾರೆ. ಬಹುಬೇಗ ಘಟೋತ್ಕಚನನ್ನು ಸಂಹರಿಸು ಎಂದು ಕರ್ಣನಿಗೆ ಹೇಳಿದನು.

ಅರ್ಥ:
ತಾಗು: ಮುಟ್ಟು; ವಜ್ರ: ಗಟ್ಟಿಯಾದ; ಮುಕ್ಕು: ಸೊಕ್ಕು, ಗರ್ವ; ಕಳೆ: ತೀರಿಸು; ಸಾಗರ: ಸಮುದ್ರ; ಹೊಗಲು: ತೆರಳಲು; ಗಿರಿ: ಬೆಟ್ಟ; ಮಾತು: ನುಡಿ; ಮೀರು: ದಾಟು; ದೈತ್ಯ: ರಾಕ್ಷಸ; ಉಪಟಳ: ಕಿರುಕುಳ; ಮಾಣಿಸು: ನಿಲ್ಲಿಸು; ಸುಭಟ: ಪರಾಕ್ರಮಿ; ಯೋಗಿ: ಋಷಿ; ದಂಡ: ಕೋಲು, ಆಯುಧ; ಹೀನ: ತೊರೆದ; ಬೇಗ: ರಭಸ; ಅಮರವೈರಿ: ರಾಕ್ಷಸ; ಅಮರ: ದೇವತೆ; ವೈರಿ: ಶತ್ರು; ತರಿ: ಕಡಿ, ಕತ್ತರಿಸು; ಬಿಸುಡು: ಬಿಸಾಡು, ಹೊರಹಾಕು;

ಪದವಿಂಗಡಣೆ:
ತಾಗಿ +ವಜ್ರವ +ಮುಕ್ಕು+ಕಳೆವಡೆ
ಸಾಗರವ +ಹೊಗಲೇಕ +ಗಿರಿಗಳು
ಹೋಗಲಿನ್ನಾ + ಮಾತು +ಮೀರಿದ +ದೈತ್ಯನ್+ಉಪಟಳವ
ಈಗ+ ಮಾಣಿಸು +ನಮ್ಮ +ಸುಭಟರು
ಯೋಗಿಗಳವೊಲು +ದಂಡಹೀನರು
ಬೇಗ +ಮಾಡಿನ್+ಅಮರವೈರಿಯ +ತರಿದು +ಬಿಸುಡೆಂದ

ಅಚ್ಚರಿ:
(೧) ಸಾಯಿಸು ಎಂದು ಹೇಳಲು – ಬೇಗ ಮಾಡಿನ್ನಮರವೈರಿಯ ತರಿದು ಬಿಸುಡೆಂದ
(೨) ಕೌರವ ರಾಜರನ್ನು ತೆಗಳುವ ಪರಿ – ನಮ್ಮ ಸುಭಟರು ಯೋಗಿಗಳವೊಲು ದಂಡಹೀನರು

ಪದ್ಯ ೩೭: ಬಾಣಗಳು ಅರ್ಜುನನ ಮೇಲೆ ಹೇಗೆ ಆಕ್ರಮಣ ಮಾಡಿದವು?

ಹನುಮ ಮಸೆಗಂಡನು ಮುರಾಂತಕ
ಕನಲಿದನು ಕಡುನೊಂದು ಪಾರ್ಥನ
ತನುವಿನಲಿ ಹೆಬ್ಬಟ್ಟೆಯಾದುದು ಬಾಣಪಥಿಕರಿಗೆ
ಮೊನೆಯಲಗು ಮುಕ್ಕುರುಕೆ ರಥವನು
ತನಿಗೊಡಹಿ ಮುಗ್ಗಿದವು ತೇಜಿಗ
ಳನುವರಕೆ ಮುಖದಿರುಹಿದವು ಕಲಿ ಭೀಷ್ಮನುಪಟಳಕೆ (ಭೀಷ್ಮ ಪರ್ವ, ೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಭೀಷ್ಮನ ಬಾಣಗಲ ಕಾಟಕ್ಕೆ ಹನುಮಮ್ತನು ಗಾಯಗೊಂಡನು. ಶ್ರೀಕೃಷ್ಣನು ತುಂಬಾನೊಂದು ಕೋಪಗೊಂಡನು. ಬಾಣಗಳೆಂಬ ಪ್ರಯಾಣಿಕರು ಅರ್ಜುನನ ದೇಹದೊಳಗೆ ದಾರಿಮಾಡಿಕೊಂಡು ಹೋದರು. ಕೂರಂಬುಗಳು ಮುತ್ತಿ ಮೈಕೊಡವಿ ಮುಗ್ಗುರಿಸಿ ಮುಖತಿರುವಿ ಹಿಂದಕ್ಕೆ ಹೋದವು.

ಅರ್ಥ:
ಹನುಮ: ಆಂಜನೇಯ; ಮಸೆ: ಒರಸು; ಹೋರಾಡು, ಕಾದು; ಮುರಾಂತಕ: ಕೃಷ್ಣ; ಕನಲು: ಸಿಟ್ಟಿಗೇಳು, ಕೆರಳು; ಕದುನೊಂದು: ತುಂಬ ನೋವುನ್ನುಂಡು; ತನು: ದೇಹ; ಹೆಬ್ಬಟ್ಟೆ: ದೊಡ್ಡದಾದ ದಾರಿ; ಬಾಣ: ಸರಳು; ಪಥಿಕ: ದಾರಿಗ, ಪ್ರಯಾಣಿಕ; ಮೊನೆ: ಚೂಪಾದ; ಅಲಗು: ಆಯುಧದ ಮೊನೆ, ಕತ್ತಿ; ಮುಕ್ಕು: ನಾಶಮಾಡು,ತಿಣುಕು; ರಥ: ಬಂಡಿ; ತನಿ: ಚೆನ್ನಾಗಿ ಬೆಳೆದುದು, ಹೆಚ್ಚಾಗು; ಕೊಡಹು: ಅಲ್ಲಾಡಿಸು; ಮುಗ್ಗು: ಬಾಗು, ಮಣಿ; ತೇಜಿ: ಕುದುರೆ; ಅನುವರ: ಯುದ್ಧ; ಮುಖ: ಆನನ; ತಿರುಹು: ಅಲೆದಾಡು, ಸುತ್ತು; ಕಲಿ: ಶೂರ; ಉಪಟಳ: ತೊಂದರೆ, ಹಿಂಸೆ;

ಪದವಿಂಗಡಣೆ:
ಹನುಮ +ಮಸೆಗಂಡನು+ ಮುರಾಂತಕ
ಕನಲಿದನು +ಕಡುನೊಂದು +ಪಾರ್ಥನ
ತನುವಿನಲಿ+ ಹೆಬ್ಬಟ್ಟೆಯಾದುದು +ಬಾಣ+ಪಥಿಕರಿಗೆ
ಮೊನೆ+ಅಲಗು +ಮುಕ್ಕುರುಕೆ +ರಥವನು
ತನಿ+ಕೊಡಹಿ+ ಮುಗ್ಗಿದವು +ತೇಜಿಗಳ್
ಅನುವರಕೆ+ ಮುಖದ್+ಇರುಹಿದವು +ಕಲಿ +ಭೀಷ್ಮನ್+ಉಪಟಳಕೆ

ಅಚ್ಚರಿ:
(೧) ರೂಪಕದ ಪ್ರಯೋಗ – ಬಾಣದ ಹೆದ್ದಾರಿ ಎಂದು ವಿವರಿಸುವ ಪರಿ – ಪಾರ್ಥನ
ತನುವಿನಲಿ ಹೆಬ್ಬಟ್ಟೆಯಾದುದು ಬಾಣಪಥಿಕರಿಗೆ

ಪದ್ಯ ೧೧: ಧರ್ಮಜನು ಕೃಷ್ಣನಲ್ಲಿ ಏನು ಕೇಳಿದ?

ಹರಿದುದಿಂದಿನ ದಿನಕೆ ಶತ ಸಾ
ವಿರ ಮಹೀಶರು ಯಮನ ನಗರಿಗೆ
ಸರಿದುದುಳಿದರ ದಿಟ್ಟತನ ಗಾಂಗೇಯನುಪಟಳಕೆ
ಅರಿಪಯೋನಿಧಿ ಬಡಬನನು ಗೆಲ
ಲರಿದು ಜೀಯ ಮುಕುಂದ ನೀನೇ
ಕರುಣಿಸೈ ವನವಾಸವೋ ನಮಗೇನು ಗತಿಯೆಂದ (ಭೀಷ್ಮ ಪರ್ವ, ೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಇಲ್ಲಿಯವರೆಗೆ ಒಂದು ಲಕ್ಷ ರಾಜರು ಯಮನಗರಕ್ಕೆ ಹೋದರು. ಉಳಿದವರ ಪರಾಕ್ರಮವು ಶತ್ರುಸಾಗರ ಬಡಬಾನಲನಾದ ಭೀಷ್ಮನನ್ನು ಗೆಲ್ಲಲಾರದು. ಒಡೆಯ ಅಪ್ಪಣೆಕೊಡಿಸು, ನಾವು ಮತ್ತೆ ವನವಾಸಕ್ಕೆ ಹೋಗಬೇಕೇ ಹೇಗೆ, ನಮ್ಮ ಗತಿಯೇನು ಎಂದು ಧರ್ಮಜನು ಶ್ರೀಕೃಷ್ಣನನ್ನು ಕೇಳಿದನು.

ಅರ್ಥ:
ಹರಿ: ಕಳೆ, ಸಾಗು; ದಿನ: ದಿವಸ; ಶತ: ನೂರು; ಸಾವಿರ: ಸರಸ್ರ; ಮಹೀಶ: ರಾಜ; ಯಮ: ಕಾಲ; ನಗರ: ಊರು; ಸರಿ: ಹೋಗು, ಗಮಿಸು; ಉಳಿದ: ಮಿಕ್ಕ; ದಿಟ್ಟ: ಧೀರ; ಗಾಂಗೇಯ: ಭೀಷ್ಮ; ಉಪಟಳ: ತೊಂದರೆ, ಹಿಂಸೆ; ಅರಿ: ಶತ್ರು; ಪಯೋನಿಧಿ: ಸಾಗರ; ವಡಬ: ಸಮುದ್ರದಲ್ಲಿರುವ ಬೆಂಕಿ, ಬಡಬಾಗ್ನಿ; ಗೆಲುವು: ಜಯ; ಜೀಯ: ಒಡೆಯ; ಮುಕುಂದ: ಕೃಷ್ಣ; ಕರುಣಿಸು: ದಯೆ ತೋರು; ವನವಾಸ: ಕಾಡಿನ ಜೀವನ; ಗತಿ: ಸ್ಥಿತಿ;

ಪದವಿಂಗಡಣೆ:
ಹರಿದುದ್+ಇಂದಿನ +ದಿನಕೆ+ ಶತ+ ಸಾ
ವಿರ +ಮಹೀಶರು +ಯಮನ +ನಗರಿಗೆ
ಸರಿದುದ್+ಉಳಿದರ +ದಿಟ್ಟತನ +ಗಾಂಗೇಯನ್+ಉಪಟಳಕೆ
ಅರಿ+ಪಯೋನಿಧಿ+ ಬಡಬನನು +ಗೆಲಲ್
ಅರಿದು +ಜೀಯ +ಮುಕುಂದ +ನೀನೇ
ಕರುಣಿಸೈ +ವನವಾಸವೋ +ನಮಗೇನು +ಗತಿಯೆಂದ

ಅಚ್ಚರಿ:
(೧) ಕೃಷ್ಣನನ್ನು ಕರೆದ ಪರಿ – ಜೀಯ, ಮುಕುಂದ
(೨) ಸತ್ತರು ಎಂದು ಹೇಳುವ ಪರಿ – ಶತ ಸಾವಿರ ಮಹೀಶರು ಯಮನ ನಗರಿಗೆ ಸರಿದುದ್

ಪದ್ಯ ೨೫: ಬಾಣವು ಕೃಷ್ಣನಿಗೆ ಎಲ್ಲಿ ತಾಗಿತು?

ಕೆಂಗರಿಯ ಮರಿದುಂಬಿ ತಾವರೆ
ಗಂಗವಿಸುವವೊಲಸುರರಿಪುವಿನ
ಮಂಗಳಾನನಕಮಲದಲಿ ಶರವಾಳೆ ಗರಿಗಡಿಯೆ
ತುಂಗವಿಕ್ರಮನಂಬ ಕಿತ್ತು ತ
ದಂಗರಕ್ತವಿಷೇಕರೌದ್ರಾ
ಲಿಂಗಿತನು ಬಲುಖತಿಯ ಹಿಡಿದನು ಭೀಷ್ಮನುಪಟಳಕೆ (ಭೀಷ್ಮ ಪರ್ವ, ೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ಭೀಷ್ಮನು ಬಿಟ್ಟ ಬಾಣವು ಕೆಂಗರಿಯ ಮರಿದುಂಬಿಯು ಕಮಲದೊಳಕ್ಕೆ ವೇಗವಾಗಿ ಹೋಗುವಂತೆ, ಶ್ರೀಕೃಷ್ಣನ ಮಂಗಳಕರವಾದ ಮುಖಕಮಲದತ್ತ ಹೋಗಿ, ಅವನ ಹಣೆಗೆ ನಟ್ಟಿತು. ಮಹಾಪರಾಕ್ರಮಿಯಾದ ಶ್ರೀಕೃಷ್ಣನು ಆ ಬಾಣವನ್ನು ಕೀಳಲು ಹೊರಚಿಮ್ಮಿದ ರಕ್ತಧಾರೆಯು ಅವನ ದೇಹಕ್ಕೆ ಅಭಿಷೇಕ ಮಾಡಿತು. ಆಗ ಶ್ರೀಕೃಷ್ಣನು ಭೀಷ್ಮನ ಉಪಟಳದಿಂದ ಮಹಾ ಕೋಪಾದ್ರಿಕನಾದನು.

ಅರ್ಥ:
ಕೆಂಗರಿ: ಕೆಂಪಾದ ರೆಕ್ಕೆ; ಮರಿ: ಚಿಕ್ಕ; ದುಂಬಿ: ಭ್ರಮರ; ತಾವರೆ: ಕಮಲ; ಅಂಗವಿಸು: ಬಯಸು, ಒಪ್ಪು; ಅಸುರರಿಪು: ರಾಕ್ಷಸನ ವೈರಿ (ಕೃಷ್ಣ); ಮಂಗಳ: ಶುಭ; ಆನನ: ಮುಖ; ಕಮಲ: ತಾವರೆ; ಶರವಾಳೆ: ಬಾಣಗಳ ಮಳೆ; ಗರಿ: ಬಾಣ; ಕಡಿ: ಸೀಳೂ; ತುಂಗ: ದೊಡ್ಡ, ಶ್ರೇಷ್ಠ; ವಿಕ್ರಮ: ಶೂರ, ಸಾಹಸ; ಅಂಬು: ಬಾಣ; ಕಿತ್ತು: ಕೀಳು; ರಕ್ತ: ನೆತ್ತರು; ವಿಷೇಕ: ಅಭಿಷೇಕ, ಮಜ್ಜನ; ರೌದ್ರ: ಕೋಪ; ಆಲಿಂಗಿತ: ತಬ್ಬಿಕೋ; ಬಲು: ಬಹಳ; ಖತಿ: ಕೋಪ; ಹಿಡಿ: ಗ್ರಹಿಸು; ಉಪಟಳ: ತೊಂದರೆ, ಹಿಂಸೆ;

ಪದವಿಂಗಡಣೆ:
ಕೆಂಗರಿಯ +ಮರಿದುಂಬಿ +ತಾವರೆಗ್
ಅಂಗವಿಸುವವೊಲ್+ಅಸುರರಿಪುವಿನ
ಮಂಗಳಾನನ+ಕಮಲದಲಿ +ಶರವಾಳೆ+ ಗರಿಗಡಿಯೆ
ತುಂಗವಿಕ್ರಮನ್+ಅಂಬ +ಕಿತ್ತು +ತದ್
ಅಂಗರಕ್ತ್ + ಅವಿಷೇಕ+ರೌದ್ರಾ
ಲಿಂಗಿತನು+ ಬಲುಖತಿಯ+ ಹಿಡಿದನು+ ಭೀಷ್ಮನ್+ಉಪಟಳಕೆ

ಅಚ್ಚರಿ:
(೧) ಅಸುರರಿಪು, ಮಂಗಳಾನನಕಮಲ, ತುಂಗವಿಕ್ರಮ – ಕೃಷ್ಣನನ್ನು ಕರೆದ ಪರಿ
(೨) ಉಪಮಾನ ಪ್ರಯೋಗ – ಕೆಂಗರಿಯ ಮರಿದುಂಬಿ ತಾವರೆಗಂಗವಿಸುವವೊಲ
(೩) ಕೃಷ್ಣನ ಮುಖಭಾವ – ತದಂಗರಕ್ತವಿಷೇಕರೌದ್ರಾಲಿಂಗಿತನು ಬಲುಖತಿಯ ಹಿಡಿದನು ಭೀಷ್ಮನುಪಟಳಕೆ

ಪದ್ಯ ೧೨: ಭೀಷ್ಮನ ಬಗ್ಗೆ ಪಾಂಡವ ಸೈನ್ಯದವರು ಏನೆಂದು ದೂರಿದರು?

ಕಾಲಯಮನೋ ಭೀಷ್ಮನೋ ಫಡ
ಮೇಳವೇ ಮಝ ಭಾಪು ಮಾರಿಯ
ತಾಳಿಗೆಗೆ ತುತ್ತಾದವೇ ತಡವೇಕೆ ತೆಗೆಯೆನುತ
ಆಳು ಮುರಿದುದು ಮೋಹರದ ಭೂ
ಪಾಲಕರು ಹುರಿಯೊಡೆದು ದೊರೆಗಳ
ಮೇಲೆ ಬಿಸುಟರು ವೀರಗಂಗಾತನುಜನುಪಟಳವ (ಭೀಷ್ಮ ಪರ್ವ, ೬ ಸಂಧಿ, ೧೨ ಪದ್ಯ)

ತಾತ್ಪರ್ಯ:
ಪಾಂಡವ ಸೇನಾನಾಯಕರು ಭೀಷ್ಮರ ಠೀವಿಯನ್ನು ನೋಡುತ್ತಾ, ಇವನೇನು ಭೀಷ್ಮನೋ, ಪ್ರಳಯಕಾಲದ ಯಮನೋ, ಭಲೇ ನಾವಿಂದು ಮಾರಿಗೆ ಬಲಿಯಾದ ಹಾಗಾಯಿತು, ನಾವೆಲ್ಲಿ ಅವನೆಲ್ಲಿ, ಎನ್ನುತ್ತಾ ಹೋಗಿ ತಮ್ಮ ದೊರೆಗಳಿಗೆ ಭೀಷ್ಮನ ಪರಾಕ್ರಮದ ತಾಪ ನಮಗೆ ಬಹಳ ದುಸ್ಸಾಧ್ಯವಾಗಿದೆ ಎಂದು ದೂರಿದರು.

ಅರ್ಥ:
ಕಾಲ: ಪ್ರಳಯಕಾಲ, ಸಮಯ; ಯಮ: ಮೃತ್ಯುದೇವತೆ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಮೇಳ: ಗುಂಪು; ಮಝ: ಕೊಂಡಾಟದ ಒಂದು ಮಾತು; ಭಾಪು: ಭಲೇ; ಮಾರಿ: ಕ್ಷುದ್ರ ದೇವತೆ; ತಾಳಿಗೆ: ಗಂಟಲು; ತುತ್ತು: ಆಹಾರ; ತಡ: ನಿಧಾನ; ತೆಗೆ: ಹೊರತರು; ಆಳು: ಸೈನಿಕ; ಮುರಿ: ಸೀಳು; ಮೋಹರ: ಯುದ್ಧ; ಭೂಪಾಲಕ: ರಾಜ; ಹುರಿ: ನಾಶವಾಗು; ದೊರೆ: ರಾಜ; ಒಡೆ: ಸೀಳು; ಬಿಸುಟು: ಹೊರಹಾಕು; ವೀರ: ಶೂರ; ತನುಜ: ಮಗ; ಉಪಟಳ: ಹಿಂಸೆ, ಕಿರುಕುಳ;

ಪದವಿಂಗಡಣೆ:
ಕಾಲಯಮನೋ +ಭೀಷ್ಮನೋ +ಫಡ
ಮೇಳವೇ+ ಮಝ+ ಭಾಪು+ ಮಾರಿಯ
ತಾಳಿಗೆಗೆ +ತುತ್ತಾದವೇ +ತಡವೇಕೆ+ ತೆಗೆಯೆನುತ
ಆಳು+ ಮುರಿದುದು +ಮೋಹರದ+ ಭೂ
ಪಾಲಕರು +ಹುರಿಯೊಡೆದು+ ದೊರೆಗಳ
ಮೇಲೆ +ಬಿಸುಟರು +ವೀರ+ಗಂಗಾತನುಜನ್+ಉಪಟಳವ

ಅಚ್ಚರಿ:
(೧) ತ ಕಾರದ ಸಾಲು ಪದ – ತಾಳಿಗೆಗೆ ತುತ್ತಾದವೇ ತಡವೇಕೆ ತೆಗೆಯೆನುತ
(೨) ಪ ವರ್ಗದ ಸಾಲು ಪದಗಳು – ಭೀಷ್ಮನೋ ಫಡ ಮೇಳವೇ ಮಝ ಭಾಪು ಮಾರಿಯ
(೩) ಭೂಪಾಲಕ, ದೊರೆ – ಸಮನಾರ್ಥಕ ಪದ