ಎನಲು ನಗುತೆಂದನು ಮಹೀಪತಿ
ವಿನಯ ಮಧುರಸಾಭಿಷೇಕವ
ನೆನಗೆ ಮಾಡಿದೆ ಸಾಕು ಪುನರುಕ್ತಾಭಿಷೇಚನವೆ
ಜನವಿದೆಮ್ಮದು ನೀನು ನಮ್ಮಾ
ತನು ಧರಿತ್ರಿಯಿದೆಮ್ಮದೆಂಬೀ
ನೆನಹು ಸಾಕುಪಚಾರ ನಮಗೇಕೆಂದನಾ ಭೂಪ (ವಿರಾಟ ಪರ್ವ, ೧೧ ಸಂಧಿ, ೨೩ ಪದ್ಯ)
ತಾತ್ಪರ್ಯ:
ಧರ್ಮರಾಯನು ನಗುತ್ತಾ, ದೊರೆಯೇ ಮಧುರವಾದ ವಿನಯರಸದಿಮ್ದ ಅಭಿಷೇಕ ಮಾಡಿದೆ, ಮತ್ತೆ ಪಟ್ಟಾಭಿಷೇಕದ ಅಗತ್ಯವಿಲ್ಲ (ಅದು ದ್ವಿರುಕ್ತಿಯಾಗುತ್ತದೆ), ನೀನು ನಮ್ಮವನು, ಈ ದೇಶ ನಮ್ಮದು, ಈ ಜನರು ನಮ್ಮವರು ಎನ್ನುವ ಮಾತೇ ಸಾಕು, ಉಪಚಾರದ ಅಗತ್ಯವಿಲ್ಲ ಎಂದು ವಿರಾಟನಿಗೆ ಹೇಳಿದನು.
ಅರ್ಥ:
ನಗು: ಸಂತಸ; ಮಹೀಪತಿ: ರಾಜ; ವಿನಯ: ಸೌಜನ್ಯ; ಮಧುರ: ಸಿಹಿಯಾದ; ರಸ: ಅಮೃತ; ಅಭಿಷೇಕ: ಮಂಗಳ ಸ್ನಾನ; ಉಕ್ತ: ಮಾತು; ಅಭಿಷೇಚನ: ಅಭಿಷೇಕ; ಜನ: ಮನುಷ್ಯ; ಧರಿತ್ರಿ: ಭೂಮಿ; ನೆನಹು: ನೆನಪು; ಸಾಕು: ನಿಲ್ಲಿಸು; ಉಪಚಾರ: ಸತ್ಕಾರ; ಭೂಪ: ರಾಜ;
ಪದವಿಂಗಡಣೆ:
ಎನಲು +ನಗುತ್+ಎಂದನು+ ಮಹೀಪತಿ
ವಿನಯ+ ಮಧು+ರಸಾಭಿಷೇಕವನ್
ಎನಗೆ +ಮಾಡಿದೆ +ಸಾಕು +ಪುನರ್+ಉಕ್ತಾಭಿಷೇಚನವೆ
ಜನವಿದ್+ಎಮ್ಮದು+ ನೀನು+ ನಮ್ಮಾ
ತನು +ಧರಿತ್ರಿಯಿದ್+ಎಮ್ಮದ್+ಎಂಬೀ
ನೆನಹು+ ಸಾಕ್+ಉಪಚಾರ +ನಮಗೇಕೆಂದನಾ+ ಭೂಪ
ಅಚ್ಚರಿ:
(೧) ಮಹೀಪತಿ, ಭೂಪ – ೧, ೬ ಸಾಲಿನ ಕೊನೆ ಪದ, ಸಮನಾರ್ಥಕ ಪದ
(೨) ರಸಾಭಿಷೇಕ, ಉಕ್ತಾಭಿಷೇಚನ – ಪದಗಳ ಬಳಕೆ