ಪದ್ಯ ೮೦: ಧೃತರಾಷ್ಟ್ರನು ವಿದುರನಿಗೆ ಯಾವ ಕಾರ್ಯವನ್ನು ನೀಡಿದನು?

ಕರೆದುತಾನೀನವರ ನಾನುಪ
ಚರಿಸುವಂದವ ನೋಡು ನಿನ್ನಯ
ಕರಣವೃತ್ತಿಗೆ ಕಠಿಣವಹವೇ ನಮ್ಮ ಮಾತುಗಳು
ದುರುಳರವರಿವರೆಂಬರದನಾ
ದರಿಸದಿರು ನೀ ಹೋಗು ಪಾಂಡವ
ಧರಣಿಪರನೊಡಗೊಂಡು ಬಾಯೆಂದಟ್ಟಿದನು ನೃಪತಿ (ಸಭಾ ಪರ್ವ, ೧೩ ಸಂಧಿ, ೮೦ ಪದ್ಯ)

ತಾತ್ಪರ್ಯ:
ವಿದುರ ನೀನು ಪಾಂಡವರನ್ನು ಇಲ್ಲಿಗೆ ಕರೆದುಕೊಂಡು ಬಾ, ನಾನು ಅವರನ್ನು ಉಪಚರಿಸುವ ಬಗೆಯನ್ನು ನೀನೇ ನೋಡುವೆ, ನಿನ್ನ ಕಿವಿಗೆ ನಮ್ಮ ಮಾತುಗಳು ಕಠಿಣವೆನಿಸುತ್ತಿದೆಯೇ? ದುಷ್ಟರು ಏನೇನನ್ನೋ ಆಡುತ್ತಾರೆ ಅವನ್ನು ನಂಬಬೇಡ. ನೀನು ಹೋಗಿ ಪಾಂಡವರನ್ನು ಕರೆದುಕೊಂಡು ಬಾ ಎಂದು ವಿದುರನನ್ನು ಕಳುಹಿಸಿದನು.

ಅರ್ಥ:
ಕರೆ: ಬರೆಮಾಡು; ಉಪಚಾರ: ಸತ್ಕಾರ, ಶುಶ್ರೂಷೆ; ಅಂದವ: ರೀತಿಯ; ನೋಡು: ವೀಕ್ಷಿಸು; ಕರಣ: ಕಿವಿ; ವೃತ್ತಿ: ಕೆಲಸ; ಕಠಿಣ: ಕಷ್ಟ; ಮಾತು: ವಾಣಿ; ದುರುಳ: ದುಷ್ಟ; ಆದರ: ಗೌರವ, ಸತ್ಕಾರ; ಹೋಗು: ತೆರಳು; ಧರಣಿಪ: ರಾಜ; ಒಡಗೊಂಡು: ಜೊತೆ; ಬಾ: ಆಗಮಿಸು; ಅಟ್ಟು: ಕಳುಹಿಸು; ನೃಪತಿ: ರಾಜ;

ಪದವಿಂಗಡಣೆ:
ಕರೆದುತಾ+ ನೀನ್+ಅವರ +ನಾನ್+ಉಪ
ಚರಿಸುವ್+ಅಂದವ +ನೋಡು +ನಿನ್ನಯ
ಕರಣವೃತ್ತಿಗೆ +ಕಠಿಣವಹವೇ+ ನಮ್ಮ+ ಮಾತುಗಳು
ದುರುಳರ್+ಅವರಿವರ್+ಎಂಬರ್+ಅದನ್
ಆದರಿಸದಿರು+ ನೀ +ಹೋಗು +ಪಾಂಡವ
ಧರಣಿಪರನ್+ಒಡಗೊಂಡು +ಬಾ+ಎಂದ್+ಅಟ್ಟಿದನು +ನೃಪತಿ

ಅಚ್ಚರಿ:
(೧) ಕಳುಹಿಸಿದನು ಎಂಬದನ್ನು ಹೇಳಲು – ಅಟ್ಟಿದನು ಪದದ ಬಳಕೆ
(೨) ಕೇಳು ಎಂದು ತಿಳಿಸಲು – ಕರಣವೃತ್ತಿ ಪದದ ಬಳಕೆ