ಪದ್ಯ ೮೫: ಅರ್ಜುನನು ಕೃಷ್ಣನಲ್ಲಿ ಏನು ಬೇಡಿದನು?

ಮರೆದು ನಾಲಗೆಗೊನೆಗೆ ನಾಮದ
ನಿರುಗೆ ನೆಲೆಗೊಳೆ ನಿನ್ನನೇ ಸಲೆ
ತೆರುವ ಬಿರುದನು ಬಲ್ಲೆನೊರಲಿದು ನಿನ್ನ ಹಲುಬಿದರೆ
ಉರುವ ಹೆಂಗುಸಿನುನ್ನತಿಕೆಯಲಿ
ಸೆರಗು ಬೆಳೆದುದ ಕಂಡೆನೈ ಸೈ
ಗರೆವುದೈ ಕಾರಣ್ಯವರುಷವನೆನ್ನ ಮೇಲೆಂದ (ಭೀಷ್ಮ ಪರ್ವ, ೩ ಸಂಧಿ, ೮೫ ಪದ್ಯ)

ತಾತ್ಪರ್ಯ:
ನಾಲಗೆಯ ತುದಿಗೆ ಮರೆತು ನಿನ್ನ ನಾಮವು ಬಂದರೂ, ಸ್ಮರಿಸಿದವನಿಗೆ ನಿನ್ನನ್ನೇ ತೆರುವೆ ಎನ್ನುವುದು ನಿನ್ನ ಬಿರುದು, ನಿನ್ನನ್ನು ನೆನೆದು ಹಲುಬಿದ ದ್ರೌಪದಿಯ ಸೆರಗು ಬೆಳೆದು ಅಕ್ಷಯವಾದುದನ್ನು ನಾನೇ ಕಂಡಿದ್ದೇನೆ, ನನ್ನ ಮೇಲೆ ಕಾರುಣ್ಯದ ಮಳೆಯನ್ನು ಸುರಿಸಬೇಕೆಂದು ಬೇಡಿದನು.

ಅರ್ಥ:
ಮರೆ: ಜ್ಞಾಪಕವಿಲ್ಲದ ಸ್ಥಿತಿ; ನಾಲಗೆ: ಜಿಹ್ವೆ; ಕೊನೆ: ತುದಿ; ನಾಮ: ಹೆಸರು; ನಿರುಗೆ: ಕೋರಿಕೆ; ನೆಲೆ: ಸ್ಥಾನ; ಸಲೆ: ಒಂದೇ ಸಮನೆ; ಬಿರುದು: ಹೆಗ್ಗಳಿಕೆ; ಬಲ್ಲೆ: ತಿಳಿ; ಒರಲು: ಹೇಳು; ಹಲುಬು: ಬೇಡಿಕೋ; ಉರುವ: ಶ್ರೇಷ್ಠ; ಹೆಂಗುಸು: ಹೆಣ್ಣು; ಉನ್ನತಿ: ಅಧಿಕ; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಬೆಳೆದು: ಹೆಚ್ಚಾಗು; ಕಂಡು: ನೋದು; ಸೈಗರೆ: ಬರೆಮಾಡು; ಕಾರುಣ್ಯ: ದಯೆ; ವರುಷ: ಮಳೆ;

ಪದವಿಂಗಡಣೆ:
ಮರೆದು +ನಾಲಗೆ+ಕೊನೆಗೆ +ನಾಮದ
ನಿರುಗೆ +ನೆಲೆಗೊಳೆ+ ನಿನ್ನನೇ+ ಸಲೆ
ತೆರುವ+ ಬಿರುದನು+ ಬಲ್ಲೆನ್+ಒರಲಿದು +ನಿನ್ನ +ಹಲುಬಿದರೆ
ಉರುವ +ಹೆಂಗುಸಿನ್+ಉನ್ನತಿಕೆಯಲಿ
ಸೆರಗು +ಬೆಳೆದುದ+ ಕಂಡೆನೈ +ಸೈ
ಕರೆವುದೈ +ಕಾರಣ್ಯ+ವರುಷವನ್+ಎನ್ನ +ಮೇಲೆಂದ

ಅಚ್ಚರಿ:
(೧) ಕೃಷ್ಣನ ಬಿರುದು – ಮರೆದು ನಾಲಗೆಗೊನೆಗೆ ನಾಮದ ನಿರುಗೆ ನೆಲೆಗೊಳೆ ನಿನ್ನನೇ ಸಲೆ ತೆರುವ