ಕುಲದಲಧಿಕರು ಶೌರ್ಯದಲಿ ವೆ
ಗ್ಗಳರು ಶೀಲದಲುನ್ನತರು ನಿ
ರ್ಮಲಿನರಾಚಾರದಲಿ ಕೋವಿದರಖಿಳಕಳೆಗಳಲಿ
ಇಳೆಯವಲ್ಲಭರಿನಿಬರನು ನೀ
ಕಳೆದು ನೋಣ ನೆರೆ ಹೂತ ವನವನು
ಹಳಿದು ಹಗಿನಿಂಗೆರಗುವವೊಲಾಯ್ತೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೪೭ ಪದ್ಯ)
ತಾತ್ಪರ್ಯ:
ಉತ್ತಮ ಕುಲ, ಅಧಿಕ ಶೌರ್ಯ, ಉನ್ನತಶೀಲ, ನಿರ್ಮಲವಾದ ಆಚಾರ, ಅಖಿಲಲೆಗಲಲ್ಲೂ ಕೌಶಲ್ಯಗಳಿರುವ ಎಲ್ಲ ರಾಜರನ್ನೂ ಬಿಟ್ಟು ಕೃಷ್ಣನನ್ನು ಅಗ್ರಪೂಜೆಗೆ ಆಯ್ಕೆಮಾಡಿದ್ದು, ಸುಗಂಧಮಯ ಹೂವಿನ ತೋಟವನ್ನು ಬಿಟ್ಟು ನೊಣವು ಬಗಿನಿ ಮರದ ಮೇಲೆ ಕುಳಿತ ಹಾಗಾಯಿತು ಎಂದು ಶಿಶುಪಾಲನು ಹೇಳಿದನು.
ಅರ್ಥ:
ಕುಲ: ವಂಶ; ಅಧಿಕ: ಹೆಚ್ಚು, ಮೇಲೆ; ಶೌರ್ಯ: ಪರಾಕ್ರಮ; ವೆಗ್ಗಳ: ಅಧಿಕ, ಹೆಚ್ಚು; ಶೀಲ: ನಡತೆ, ಸ್ವಭಾವ; ಉನ್ನತ: ಹಿರಿಯ, ಉತ್ತಮ; ನಿರ್ಮಲ: ಶುದ್ಧತೆ, ಸ್ವಚ್ಛತೆ; ಮಲಿನ: ಕೊಳೆ, ಹೊಲಸು; ಆಚಾರ: ಕಟ್ಟುಪಾಡು, ಸಂಪ್ರದಾಯ; ಕೋವಿದ: ಪಂಡಿತ; ಅಖಿಳ: ಎಲ್ಲಾ, ಸರ್ವ; ಕಲೆ: ಲಲಿತವಿದ್ಯೆ, ಕುಶಲವಿದ್ಯೆ; ಇಳೆ: ಭೂಮಿ; ವಲ್ಲಭ: ಒಡೆಯ; ಇನಿಬರು: ಇಷ್ಟುಜನ; ಕಳೆ: ಹೋಗ ಲಾಡಿಸು; ನೆರೆ: ಗುಂಪು; ಹೂತ: ಹೂಬಿಟ್ಟಿರುವ; ವನ: ಬನ, ಕಾಡು, ತೋಟ; ಹಳಿ: ನಿಂದೆ; ಹಗಿನು: ಗೊಂದು, ಅಂಟು; ಎರಗು: ಬಾಗು; ಚೈದ್ಯ: ಶಿಶುಪಾಲ;
ಪದವಿಂಗಡಣೆ:
ಕುಲದಲ್+ಅಧಿಕರು +ಶೌರ್ಯದಲಿ +ವೆ
ಗ್ಗಳರು +ಶೀಲದಲ್+ಉನ್ನತರು +ನಿ
ರ್ಮಲಿನರ್+ಆಚಾರದಲಿ+ ಕೋವಿದರ್+ಅಖಿಳ +ಕಳೆಗಳಲಿ
ಇಳೆಯ+ವಲ್ಲಭರ್+ಇನಿಬರನು +ನೀ
ಕಳೆದು +ನೋಣ +ನೆರೆ +ಹೂತ +ವನವನು
ಹಳಿದು +ಹಗಿನಿಂಗ್+ಎರಗುವವೊಲಾಯ್ತೆಂದನಾ +ಚೈದ್ಯ
ಅಚ್ಚರಿ:
(೧) ಉಪಮಾನದ ಪ್ರಯೋಗ – ನೋಣ ನೆರೆ ಹೂತ ವನವನು ಹಳಿದು ಹಗಿನಿಂಗೆರಗುವವೊಲಾಯ್ತೆಂದನಾ ಚೈದ್ಯ
(೨) ಅಧಿಕರು, ವೆಗ್ಗಳರು, ಉನ್ನತರು, ಕೋವಿದ, ವಲ್ಲಭರು – ಪ್ರಶಂಶಿಸುವ ಪದಗಳ ಪ್ರಯೋಗ