ಪದ್ಯ ೪೬: ಕೊಪ್ಪರಿಗೆಯನ್ನು ಎಷ್ಟು ದಿನ ರಕ್ಷಿಸಲು ವ್ಯಾಸರು ಹೇಳಿದರು?

ಚಿಂತೆಯಿಲ್ಲದೆ ನೂರುದಿನ ಪರಿ
ಯಂತ ರಕ್ಷಿಸು ಬಳಿಕ ನಿನ್ನಯ
ಸಂತತಿಯ ಸಾಮರ್ಥ್ಯವನು ಗಾಂಧಾರಿ ನೋಡೆಂದು
ಕಂತುಪಿತ ಸನ್ನಿಭನು ಸತಿಯನು
ಸಂತವಿಸಿ ಮರಳಿದನು ಧರಣೀ
ಕಾಂತ ಕೇಳೈ ಬನದೊಳಿತ್ತಲು ಭೀಮನುದ್ಭವವ (ಆದಿ ಪರ್ವ, ೪ ಸಂಧಿ, ೪೬ ಪದ್ಯ)

ತಾತ್ಪರ್ಯ:
ಅಯ್ಯೋ ಮರುಳೇ, ಗಾಂಧಾರಿ, ನೀನು ಚಿಂತೆ ಮಾಡದೇ ನೂರು ದಿನಗಳ ಕಾಲ ಈ ಕೊಪ್ಪರಿಗಳನ್ನು ರಕ್ಷಿಸು ಆಮೇಲೆ ನಿನ್ನ ಮಕ್ಕಳ ಸಾಮರ್ಥ್ಯವನ್ನು ನೋಡು ಎಂದು ಹೇಳಿ ವಿಷ್ಣು ಸದೃಶನಾದ ವೇದವ್ಯಾಸರು ಗಾಂಧಾರಿಯನ್ನು ಸಂತೈಸಿ ಹಿಂದಿರುಗಿ ಹೋದನು. ಇತ್ತ ರಾಜ ಜನಮೇಜಯ ಕಾಡಿನಲ್ಲಿ ಭೀಮನ ಆಗಮನವನ್ನು ಕೇಳು ಎಂದು ವೈಶಂಪಾಯನರು ಕಥೆಯನ್ನು ಮುಂದುವರೆಸಿದರು.

ಅರ್ಥ:
ಚಿಂತೆ: ಯೋಚನೆ; ನೂರು: ಶತ; ದಿನ: ವಾರ; ಪರಿಯಂತ: ಅಲ್ಲಿಯವರೆಗೆ; ರಕ್ಷಿಸು: ಕಾಪಾಡು; ಬಳಿಕ: ನಂತರ; ಸಂತತಿ: ವಂಶ; ಸಾಮರ್ಥ್ಯ: ಶಕ್ತಿ; ನೋಡು: ವೀಕ್ಷಿಸು; ಕಂತುಪಿತ: ವಿಷ್ಣು; ಸನ್ನಿಭ: ಸದೃಶ; ಸತಿ: ಹೆಣ್ಣು; ಸಂತವಿಸು: ಸಮಾಧಾನ ಪಡಿಸು; ಮರಳು: ಹಿಂದಿರುಗು; ಧರಣೀಕಾಂತ: ರಾಜ; ಕೇಳು: ಆಲಿಸು; ಬನ: ಕಾಡು; ಉದ್ಭವ: ಹುಟ್ಟು;

ಪದವಿಂಗಡಣೆ:
ಚಿಂತೆಯಿಲ್ಲದೆ+ ನೂರುದಿನ+ ಪರಿ
ಯಂತ +ರಕ್ಷಿಸು +ಬಳಿಕ +ನಿನ್ನಯ
ಸಂತತಿಯ +ಸಾಮರ್ಥ್ಯವನು +ಗಾಂಧಾರಿ +ನೋಡೆಂದು
ಕಂತುಪಿತ +ಸನ್ನಿಭನು +ಸತಿಯನು
ಸಂತವಿಸಿ +ಮರಳಿದನು +ಧರಣೀ
ಕಾಂತ +ಕೇಳೈ +ಬನದೊಳ್+ಇತ್ತಲು +ಭೀಮನ್+ಉದ್ಭವವ

ಅಚ್ಚರಿ:
(೧) ವ್ಯಾಸರನ್ನು ಕಂತುಪಿತ ಸನ್ನಿಭ ಎಂದು ಕರೆದಿರುವುದು
(೨) ಜನಮೇಜಯನನ್ನು ಧರಣೀಕಾಂತ ಎಂದು ಕರೆದಿರುವುದು

ಪದ್ಯ ೨೬: ಕರ್ಣನು ಯಾವ ಹೆಸರಿನಿಂದ ಪ್ರಖ್ಯಾತನಾದ?

ಆದರಿಸಿದನು ರಾಧೆಯಲಿ ಮಗ
ನಾದನೆಂದುತ್ಸವದ ಮಾಡಿ ಮ
ಹೀದಿವಿಜರನು ದಾನಮಾನಂಗಲಲಿ ಸತ್ಕರಿಸಿ
ಆ ದಿನಂ ಮೊದಲಾಗಿ ಉದ್ಭವ
ವಾದುದವನೈಶ್ವರ್ಯ ಉನ್ನತ
ವಾದನಾ ರವಿನಂದನನು ರಾಧೇಯ ನಾಮದಲಿ (ಆದಿ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಸೂತನ ಹೆಂಡತಿಯ ಹೆಸರು ರಾಧೆ, ರಾಧೆಗೆ ಮಗನು ಜನಿಸಿದನೆಂದು ಉತ್ಸವವನ್ನು ಮಾಡಿ, ಬ್ರಾಹ್ಮಣರನ್ನು ದಾನಾದಿಗಳಿಂದ ಸತ್ಕರಿಸಿದನು. ಅಂದಿನಿಂದ ಸೂತನ ಐಶ್ವರ್ಯವು ಅಭಿವೃದ್ಧಿ ಹೊಂದಿತು ಸೂರನ ಪುತ್ರನಾದ ಆ ಮಗನು ರಾಧೇಯನೆಂಬ ಹೆಸರಿನಿಂದ ಪ್ರಸಿದ್ಧನಾದನು.

ಅರ್ಥ:
ಆದರ: ಗೌರವ; ಮಗ: ಸುತ; ಉತ್ಸವ: ಸಂಭ್ರಮ; ಮಹೀದಿವಿಜ: ಬ್ರಾಹ್ಮಣ; ಮಹೀ: ಭೂಮಿ; ದಾನ: ನೀಡು; ಸತ್ಕರಿಸು: ಗೌರವಿಸು; ದಿನ: ವಾರ; ಉದ್ಭವ: ಹುಟ್ಟು; ಐಶ್ವರ್ಯ: ಸಂಪತ್ತು; ಉನ್ನತ: ಹೆಚ್ಚು; ರವಿ: ಸೂರ್ಯ; ನಂದನ: ಮಗ; ನಾಮ: ಹೆಸರು;

ಪದವಿಂಗಡಣೆ:
ಆದರಿಸಿದನು+ ರಾಧೆಯಲಿ +ಮಗ
ನಾದನೆಂದ್+ಉತ್ಸವದ+ ಮಾಡಿ +ಮ
ಹೀ+ದಿವಿಜರನು +ದಾನ+ಮಾನಂಗಳಲಿ +ಸತ್ಕರಿಸಿ
ಆ +ದಿನಂ +ಮೊದಲಾಗಿ +ಉದ್ಭವ
ವಾದುದ್+ಅವನ್+ಐಶ್ವರ್ಯ+ ಉನ್ನತ
ವಾದನಾ +ರವಿನಂದನನು +ರಾಧೇಯ +ನಾಮದಲಿ

ಅಚ್ಚರಿ:
(೧) ಮಗ, ನಂದನ – ಸಮಾನಾರ್ಥಕ ಪದ
(೨) ಮ ಕಾರದ ಸಾಲು ಪದ – ಮಗನಾದನೆಂದುತ್ಸವದ ಮಾಡಿ ಮಹೀದಿವಿಜರನು