ಪದ್ಯ ೭೪: ಧರ್ಮಜನು ಕೃಷ್ಣನಿಗೆ ಏನು ಹೇಳಿದ?

ಕೊಳುಕೊಡೆಗೆ ಸೇರುವೊಡೆ ಮದುವೆಯ
ನೊಲಿದು ದೇವರು ಮಾಡುವುದು ಮೇ
ಲಿಳೆಯ ಕಾರ್ಯವ ಬುದ್ಧಿಗಲಿಸುವುದೆಮ್ಮನುದ್ದರಿಸಿ
ಬಳಿಕ ಬಿಜಯಂಗೈವುದಿದು ಹದ
ನೆಲೆ ದಯಾಂಬುಧಿ ಕೇಳೆನಲು ನೃಪ
ತಿಲಕನುಚಿತದ ಬಿನ್ನಹಕೆ ಮನವೊಲಿದು ಹರಿ ನುಡಿದ (ವಿರಾಟ ಪರ್ವ, ೧೧ ಸಂಧಿ, ೭೪ ಪದ್ಯ)

ತಾತ್ಪರ್ಯ:
ದೇವಾ, ಈ ಸಂಬಂಧವು ಉಚಿತವೆಂದು ನೀವು ಹೇಳುವಿರಾದರೆ ಮದುವೆಯನ್ನು ಮಾಡಿಸಿ, ನಮ್ಮ ರಾಜ್ಯದ ಬಗೆಗೆ ಏನು ಮಾಡಬೇಕೆಂದು ಬುದ್ಧಿ ಹೇಳಬೇಕು, ಆಮೇಲೆ ನಿಮ್ಮ ಇಚ್ಛೆ. ಆದುದರಿಂದ ಎಲೈ ದಯಾಸಾಗರನೆ ಏನು ಮಾಡಬೇಕೆಂದು ಹೇಳಿ, ಎಂದು ಧರ್ಮಜನು ಕೇಳಲು, ಅವನ ಉಚಿತ ವಾಕ್ಯಗಳಿಗೆ ಮೆಚ್ಚಿ ಶ್ರೀಕೃಷ್ಣನು ನುಡಿದನು.

ಅರ್ಥ:
ಕೊಳು: ತೆಗೆದುಕೋ;ಕೊಡು: ನೀಡು; ಸೇರು: ಜೊತೆಯಾಗು; ಮದುವೆ: ವಿವಾಹ; ಒಲಿ: ಪ್ರೀತಿ; ದೇವರು: ಭಗವಂತ; ಇಳೆ: ಭೂಮಿ; ಕಾರ್ಯ: ಕೆಲಸ; ಬುದ್ಧಿ: ತಿಳಿವು, ಅರಿವು; ಆಲಿಸು: ಕೇಳು; ಉದ್ಧಾರ: ಮೇಲಕ್ಕೆ ಎತ್ತುವುದು; ಬಳಿಕ: ನಂತರ; ಬಿಜಯಂಗೈ: ದಯಮಾಡು; ಹದ: ಸರಿಯಾದ ಸ್ಥಿತಿ; ನೆಲೆ: ಭೂಮಿ; ದಯಾಂಬುಧಿ: ಕರುಣಾ ಸಾಗರ; ಕೇಳು: ಆಲಿಸು; ನೃಪ: ರಾಜ; ತಿಲಕ: ಶ್ರೇಷ್ಠ; ಉಚಿತ: ಸರಿಯಾದ; ಬಿನ್ನಹ: ಕೋರಿಕೆ; ಮನ: ಮನಸ್ಸು; ಒಲಿ: ಒಪ್ಪು; ನುಡಿ: ಮಾತಾಡು;

ಪದವಿಂಗಡಣೆ:
ಕೊಳು+ಕೊಡೆಗೆ +ಸೇರುವೊಡೆ +ಮದುವೆಯನ್
ಒಲಿದು+ ದೇವರು +ಮಾಡುವುದು +ಮೇಲ್
ಇಳೆಯ +ಕಾರ್ಯವ +ಬುದ್ಧಿಗಲಿಸುವುದೆಮ್ಮನ್+ಉದ್ಧರಿಸಿ
ಬಳಿಕ +ಬಿಜಯಂಗೈವುದಿದು +ಹದ
ನೆಲೆ +ದಯಾಂಬುಧಿ +ಕೇಳೆನಲು +ನೃಪ
ತಿಲಕನ್+ಉಚಿತದ +ಬಿನ್ನಹಕೆ +ಮನವೊಲಿದು +ಹರಿ+ ನುಡಿದ

ಅಚ್ಚರಿ:
(೧) ದಯಾಂಬುಧಿ, ಹರಿ, ದೇವರು – ಕೃಷ್ಣನನ್ನು ಕರೆದ ಪರಿ