ಪದ್ಯ ೧: ಅಶ್ವತ್ಥಾಮ ರಥವನ್ನು ಎಲ್ಲಿ ನಿಲ್ಲಿಸಿದನು?

ಕೇಳು ಧೃತರಾಷ್ಟ್ರವನಿಪ ನಿ
ನ್ನಾಳ ಚಿತ್ತದ ಚಟುಳ ಪಣದ ಚ
ಡಾಳತನವನು ಸಂಗರದೊಳುದ್ದಾಮ ಸತ್ವದಲಿ
ಪಾಳೆಯವ ಸಾರಿದರು ವಿಟಪಲ
ತಾಳಿವಿಶ್ರಮ ತಿಮಿರಗಹನವಿ
ಶಾಲ ವಟಕುಜವಿರಲು ಕಂಡರು ನಿಲಿಸಿದರು ರಥವ (ಗದಾ ಪರ್ವ, ೯ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಮಹಾಸತ್ವರಾದ ನಿನ್ನ ವೀರರು ಶಪಥವನ್ನು ಮಾಡಿ ಪಾಂಡವರ ಪಾಳೆಯಕ್ಕೆ ಬಂದರು. ಚಿಗುರಿದ ಉಪಶಾಖೆಗಳು, ಬಳ್ಳಿಗಳು ಸುತ್ತಿಕೊಂಡಿದ್ದ ಒಂದಾನೊಂದು ದೊಡ್ಡ ಆಲದ ಮರವನ್ನು ಕಂಡು ಅದರ ಕೆಳಗೆ ರಥಗಳನ್ನು ನಿಲ್ಲಿಸಿದರು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಆಳು: ವೀರ, ಸೈನಿಕ; ಚಿತ್ತ: ಮನಸ್ಸು; ಚಟುಲ: ವೇಗ; ಪಣ: ಸಂಕಲ್ಪ, ಶಪಥ; ಚಡಾಳ: ಹೆಚ್ಚಳ, ಆಧಿಕ್ಯ; ಸಂಗರ: ಯುದ್ಧ; ಉದ್ದಾಮ: ಶ್ರೇಷ್ಠ; ಸತ್ವ: ಸಾರ; ಪಾಳೆಯ: ಬಿಡಾರ; ಸಾರು: ಹರಡು; ವಿಟಪ: ಮರದ ಕೊಂಬೆ, ಟಿಸಿಲು; ಲತ: ಬಳ್ಳಿ; ಆಳಿ: ಸಾಲು, ಗುಂಪು; ವಿಶ್ರಮ: ವಿರಾಮ, ವಿಶ್ರಾಂತಿ; ತಿಮಿರ: ಅಂಧಕಾರ; ಗಹನ: ದಟ್ಟವಾದ, ಕಾಡು, ಅಡವಿ; ವಿಶಾಲ: ದೊಡ್ಡ; ವಟ: ಆಲದ ಮರ; ಕುಜ:ಗಿಡ, ಮರ; ಕಂಡು: ನೋಡು; ನಿಲಿಸು: ತಡೆ; ರಥ: ಬಂಡಿ;

ಪದವಿಂಗಡಣೆ:
ಕೇಳು+ ಧೃತರಾಷ್ಟ್ರ + ಅವನಿಪ +ನಿನ್ನ್
ಆಳ +ಚಿತ್ತದ +ಚಟುಳ +ಪಣದ +ಚ
ಡಾಳತನವನು +ಸಂಗರದೊಳ್+ಉದ್ದಾಮ +ಸತ್ವದಲಿ
ಪಾಳೆಯವ +ಸಾರಿದರು +ವಿಟಪ+ಲ
ತಾಳಿ+ವಿಶ್ರಮ+ ತಿಮಿರ+ಗಹನ+ವಿ
ಶಾಲ +ವಟಕುಜವಿರಲು +ಕಂಡರು +ನಿಲಿಸಿದರು +ರಥವ

ಅಚ್ಚರಿ:
(೧) ವಿಪಟ, ವಿಶಾಲ, ವಿಶ್ರಮ – ವ ಕಾರದ ಪದಗಳು
(೨) ಚ ಕಾರದ ಪದಗಳು – ಚಿತ್ತದ, ಚಟುಳ, ಚಡಾಳತನ

ಪದ್ಯ ೩೬: ನಾರದರು ಕಂಪನನನ್ನು ಹೇಗೆ ಸಂತೈಸಿದರು?

ಆ ಮಹಾಮೃತ್ಯುವನು ಹುಟ್ಟಿಸಿ
ದಾ ಮಹಾದೇವಾದಿ ದೇವರು
ಕಾಮಿನಿಯ ಕಳುಹಲ್ಕೆ ಬಾರದೆನುತ್ತ ಬೋಧಿಸಲು
ಭೂಮಿಪತಿ ನಿಜಸುತನ ಮೃತಿಯು
ದ್ದಾಮ ತಾಪವ ಕಳೆಯಬೇಕೆಂ
ದಾ ಮುನೀಶ್ವರ ಸಂತವಿಟ್ಟನು ಕಂಪಭೂಪತಿಯ (ದ್ರೋಣ ಪರ್ವ, ೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಎಲೈ ರಾಜನೇ ಆ ಮಹಾ ಮೃತ್ಯುವನ್ನು ಹುಟ್ಟಿಸಿದ ಮಹಾದೇವನೇ ಮೊದಲಾದವರು ಅವಳನ್ನು ಕಳುಹಿಸಿ ಕೊಡಲಾರರು. ನಿನ್ನ ಮಗನ ಮರಣದ ತಾಪವನ್ನು ಕಳೆದುಕೋ ಎಂದು ಹೇಳಿ ಕಂಪನನನ್ನು ಸಂತೈಸಿದನು.

ಅರ್ಥ:
ಮೃತ್ಯು: ಸಾವು; ಹುಟ್ಟು: ಜನಿಸು; ಆದಿ: ಮುಂತಾದ; ದೇವ: ಭಗವಂತ; ಕಾಮಿನಿ: ಹೆಣ್ಣು; ಕಳುಹು: ಕಳಿಸು; ಬೋಧಿಸು: ತಿಳಿಸು; ಭೂಮಿಪತಿ: ರಾಜ; ಸುತ: ಮಗ; ಮೃತಿ: ಸಾವು; ಉದ್ದಾಮ: ಶ್ರೇಷ್ಠ; ತಾಪ: ಬಿಸಿ, ಬೇನೆ; ಕಳೆ: ನಿವಾರಿಸು; ಮುನಿ: ಋಷಿ; ಸಂತವಿಡು: ಸಂತೈಸು; ಭೂಪತಿ: ರಾಜ;

ಪದವಿಂಗಡಣೆ:
ಆ +ಮಹಾ+ಮೃತ್ಯುವನು +ಹುಟ್ಟಿಸಿದ
ಆ+ ಮಹಾದೇವಾದಿ +ದೇವರು
ಕಾಮಿನಿಯ +ಕಳುಹಲ್ಕೆ+ ಬಾರದೆನುತ್ತ+ ಬೋಧಿಸಲು
ಭೂಮಿಪತಿ +ನಿಜಸುತನ +ಮೃತಿ+
ಉದ್ದಾಮ +ತಾಪವ+ ಕಳೆಯಬೇಕೆಂದ್
ಆ+ ಮುನೀಶ್ವರ +ಸಂತವಿಟ್ಟನು +ಕಂಪ+ಭೂಪತಿಯ

ಅಚ್ಚರಿ:
(೧) ಭೂಮಿಪತಿ, ಭೂಪತಿ – ಸಮಾನಾರ್ಥಕ ಪದ
(೨) ಮಹಾಮೃತ್ಯು, ಮಹಾದೇವ – ಮಹಾ ಪದದ ಬಳಕೆ

ಪದ್ಯ ೭೯: ಭೀಮನು ನಾಟ್ಯ ಮಂದಿರಕ್ಕೆ ತೆರಳಲು ಹೇಗೆ ಸಿದ್ಧನಾದನು?

ಭೀಮ ನಿಂದಿರು ನಾಟ್ಯ ನಿಲಯವ
ನಾ ಮದಾಂಧಗೆ ನುಡಿದು ಬಂದೆನು
ತಾಮಸದ ಮಾಡದಿರು ಹೂಡದಿರಲ್ಪಬುದ್ಧಿಗಳ
ಕಾಮುಕನನಡೆಗೆಡಹಿ ನಿಜಸು
ಪ್ರೇಮವನು ತೋರೆನಲು ನಗುತು
ದ್ದಾಮನೆದ್ದನು ಫಳಿಯನುಟ್ಟನು ಮಲ್ಲಗಂಟಿನಲಿ (ವಿರಾಟ ಪರ್ವ, ೩ ಸಂಧಿ, ೭೯ ಪದ್ಯ)

ತಾತ್ಪರ್ಯ:
ಭೀಮ ನೀನು ನಾಟ್ಯ ಮಂದಿರದಲ್ಲಿ ನಿಲ್ಲು, ನಾಟ್ಯ ನಿಲಯಕ್ಕೆ ಬಾಯೆಂದು ಆ ಮದಾಂಧನಿಗೆ ಹೇಳಿ ಬಂದಿದ್ದೇನೆ. ಸೋಮಾರಿತನ ಮಾಡಬೇಡ, ಅಲ್ಪ ಬುದ್ಧಿಗಲನ್ನು ತೀಗ್ಯಬೇಡ. ಕಾಮುಕನಾದ ಕೀಚಕನನ್ನು ಸಂಹರಿಸಿ, ನನ್ನ ಮೇಲಿರುವ ನಿನ್ನ ಪ್ರೇಮವನ್ನು ತೋರಿಸು, ಎಂದು ದ್ರೌಪದಿಯು ಹೇಳಲು, ಭೀಮನು ನಗುತ್ತಾ ಎದ್ದು ಮಲ್ಲಗಂಟಿನ ಮಡಿಕೆಯನ್ನು ಹಾಕಿ ವಸ್ತ್ರವನ್ನುಟ್ಟನು.

ಅರ್ಥ:
ನಿಲ್ಲು: ಕಾಯು, ಎದುರು ನೋಡು; ನಾಟ್ಯ: ನೃತ್ಯ; ನಿಲಯ: ಮನೆ, ಮಂದಿರ; ಮದಾಂಧ: ಗರ್ವದಿಂದ ವಿವೇಕವನ್ನು ಕಳೆದುಕೊಂಡವನು; ನುಡಿ: ಮಾತಾದು; ಬಂದೆ: ಆಗಮನ; ತಾಮಸ: ಜಾಡ್ಯ, ಮೂಢತನ; ಹೂಡು: ಅಣಿಗೊಳಿಸು; ಅಲ್ಪ: ಸಣ್ಣದಾದ; ಬುದ್ಧಿ: ತಿಳಿವು, ಅರಿವು; ಕಾಮುಕ: ಕಾಮಾಸಕ್ತನಾದವನು, ಲಂಪಟ; ಪ್ರೇಮ: ಒಲವು; ತೋರು: ಪ್ರದರ್ಶಿಸು; ನಗು: ಸಂತಸ; ಉದ್ದಾಮ: ಶ್ರೇಷ್ಠ; ಘಳಿ: ಮಡಿಕೆ, ನೆರಿಗೆ ಸೀರೆ; ಮಲ್ಲಗಂಟು: ಕಾಸಿಯನ್ನು ಕಟ್ಟುವುದು; ಕೆಡಹು: ಕೆಳಕ್ಕೆ ತಳ್ಳು, ಸೋಲಿಸು; ಅಡೆಕೆಡಹು: ಅಡ್ಡಹಾಕಿ ಸೋಲಿಸು;

ಪದವಿಂಗಡಣೆ:
ಭೀಮ+ ನಿಂದಿರು +ನಾಟ್ಯ +ನಿಲಯವ
ನಾ +ಮದಾಂಧಗೆ+ ನುಡಿದು+ ಬಂದೆನು
ತಾಮಸದ+ ಮಾಡದಿರು +ಹೂಡದಿರ್+ಅಲ್ಪಬುದ್ಧಿಗಳ
ಕಾಮುಕನನ್+ಅಡೆಗೆಡಹಿ+ ನಿಜಸು
ಪ್ರೇಮವನು +ತೋರೆನಲು +ನಗುತ್
ಉದ್ದಾಮನೆದ್ದನು+ ಫಳಿಯನುಟ್ಟನು +ಮಲ್ಲಗಂಟಿನಲಿ

ಅಚ್ಚರಿ:
(೧) ಭೀಮನು ಸಿದ್ಧನಾದ ಪರಿ – ಉದ್ದಾಮನೆದ್ದನು ಫಳಿಯನುಟ್ಟನು ಮಲ್ಲಗಂಟನಲಿ

ಪದ್ಯ ೬೫: ದ್ರೌಪದಿಯು ಕೊನೆಯದಾಗಿ ಏನು ಹೇಳಿದಳು?

ಭೀಮ ಕೊಟ್ಟೆ ತನಗೆ ಸಾವಿನ
ನೇಮವನು ನಿಮ್ಮಣ್ಣನಾಜ್ಞೆ ವಿ
ರಾಮವಾಗದೆ ಬದುಕೆ ಧರ್ಮದ ಮೈಸಿರಿಯನರಿದು
ಕಾಮಿನಿಯ ಕೇಳಿಯಲಿ ನೆನೆವುದು
ತಾಮಸದಿ ತಾ ಮೀರಿ ನುಡಿದು
ದ್ದಾಮತೆಯ ಸೈರಿಸುವುದೆಂದೆರಗಿದಳು ಚರಣದಲಿ (ವಿರಾಟ ಪರ್ವ, ೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ಭೀಮಸೇನ, ನಿಮ್ಮಣ್ಣನ ಆಜ್ಞೆ ಆಭಾಧಿತವಾಗಿ ನಡೆಯಲು, ಧರ್ಮದ ಮಹಿಮೆಯನ್ನು ಧರ್ಮ ಸೂಕ್ಷ್ಮವನ್ನು ಚೆನ್ನಾಗಿ ಪರಿಶೀಲಿಸಿ, ಸಾಯಲು ನನಗೆ ಅಪ್ಪಣೆ ಕೊಟ್ಟಿರುವೆ, ಆದರೊಂದು ಪ್ರಾರ್ಥನೆ, ಹೆಣ್ಣಿನೊಂದಿನ ವಿನೋದ ಕ್ರೀಡೆಯಲ್ಲಿ ನನ್ನನ್ನು ನೆನೆಸಿಕೋ, ಕೋಪದ ಅಂಧಕಾರದಿಂದ ಮಿತಿಮೀರಿ ನಾನಾಡಿದ ಮಾತನ್ನು ಕ್ಷಮಿಸು, ಎನ್ನುತ್ತಾ ದ್ರೌಪದಿಯು ಭೀಮನ ಪಾದಗಳ ಮೇಲೆ ಬಿದ್ದಳು.

ಅರ್ಥ:
ಕೊಟ್ಟೆ: ನೀಡು; ಸಾವು: ಮರಣ; ನೇಮ: ನಿಯಮ; ಆಜ್ಞೆ: ಅನುಮತಿ, ಕಟ್ಟಳೆ; ವಿರಾಮ: ಬಿಡುವು, ವಿಶ್ರಾಂತಿ; ಬದುಕು: ಜೀವಿಸು; ಧರ್ಮ: ನಿಯಮ, ಧಾರಣ ಮಾಡಿದುದು; ಮೈಸಿರಿ: ದೇಹ ಸೌಂದರ್ಯ; ಅರಿ: ತಿಳಿ; ಕಾಮಿನಿ: ಹೆಣ್ಣು; ಕೇಳಿ: ವಿನೋದ, ಕ್ರೀಡೆ; ನೆನೆ: ಜ್ಞಾಪಿಸು; ತಾಮಸ: ಕತ್ತಲೆ, ಅಂಧಕಾರ; ಮೀರು: ಉಲ್ಲಂಘಿಸು; ನುಡಿ: ಮಾತು; ಉದ್ದಾಮ: ಶ್ರೇಷ್ಠವಾದ; ಸೈರಿಸು: ತಾಳು, ಸಹಿಸು; ಎರಗು: ನಮಸ್ಕರಿಸು; ಚರಣ: ಪಾದ;

ಪದವಿಂಗಡಣೆ:
ಭೀಮ +ಕೊಟ್ಟೆ +ತನಗೆ +ಸಾವಿನ
ನೇಮವನು +ನಿಮ್ಮಣ್ಣನಾಜ್ಞೆ +ವಿ
ರಾಮವಾಗದೆ+ ಬದುಕೆ+ ಧರ್ಮದ +ಮೈಸಿರಿಯನರಿದು
ಕಾಮಿನಿಯ +ಕೇಳಿಯಲಿ +ನೆನೆವುದು
ತಾಮಸದಿ+ ತಾ +ಮೀರಿ +ನುಡಿದ್
ಉದ್ದಾಮತೆಯ +ಸೈರಿಸುವುದೆಂದ್+ಎರಗಿದಳು +ಚರಣದಲಿ

ಅಚ್ಚರಿ:
(೧) ದ್ರೌಪದಿಯ ನೋವಿನ ನುಡಿ – ಕಾಮಿನಿಯ ಕೇಳಿಯಲಿ ನೆನೆವುದು ತಾಮಸದಿ ತಾ ಮೀರಿ ನುಡಿದು
ದ್ದಾಮತೆಯ ಸೈರಿಸುವುದು

ಪದ್ಯ ೯೬: ರಾಜಸೂಯ ಯಾಗದ ಮಹತ್ವವೇನು?

ಆ ಮಹಾಕ್ರತುವರವ ನೀ ಮಾ
ಡಾ ಮಹೀಶ್ವರ ಪಂಕ್ತಿಯಲ್ಲಿ ನಿ
ರಾಮಯನು ನಿಮ್ಮಯ್ಯನಿಹನು ಸತೇಜದಲಿ ಬಳಿಕ
ಸೋಮವಂಶದ ರಾಯರೊಳಗು
ದ್ದಾಮರಹ ಬಲುಗೈ ಕುಮಾರ
ಸ್ತೋಮ ನೀವಿರಲಯ್ಯಗೇನರಿದೆಂದನಾ ಮುನಿಪ (ಸಭಾ ಪರ್ವ, ೧ ಸಂಧಿ, ೯೬ ಪದ್ಯ)

ತಾತ್ಪರ್ಯ:
ನಾರದರು ಯುಧಿಷ್ಠಿರನಿಗೆ ರಾಜಸೂಯ ಯಾಗವನ್ನು ಮಾಡಲು ಪ್ರೇರೇಪಿಸುತ್ತಾರೆ. ರಾಜನೆ, ನೀನು ಶ್ರೇಷ್ಠವಾದ ಈ ರಾಜಸೂಯ ಮಹಾಯಾಗವನ್ನು ಮಾಡಿದರೆ, ನಿನ್ನ ತಂದೆಯು ಇಂದ್ರನ ಆಸ್ಥಾನದಲ್ಲಿ ಮಹಾಸುಕೃತಿಗಳಾದ ರಾಜರ ಪಂಕ್ತಿಯಲ್ಲಿರುತ್ತಾರೆ, ಚಂದ್ರವಂಶದ ರಾಜಕುಮಾರರಲ್ಲಿ ಮಹಾಶಕ್ತರಾದ ನೀವು ಇರಬೇಕಾದರೆ ನಿಮ್ಮ ತಂದೆ ಏನುತಾನೆ ಅಸಾಧ್ಯ” ಎಂದು ನಾರದರು ನುಡಿದರು.

ಅರ್ಥ:
ಕ್ರತು: ಯಜ್ಞ; ವರ: ಶ್ರೇಷ್ಠ; ನಿರಾಮಯ: ಮುಕ್ತನಾದ,ಪರಿಶುದ್ಧವಾದ; ಅಯ್ಯ: ತಂದೆ; ತೇಜ: ಕಾಂತಿ; ಸೋಮ: ಚಂದ್ರ; ವಂಶ:ಕುಲ; ರಾಯ: ರಾಜ; ಉದ್ದಾಮ: ಶ್ರೇಷ್ಠವಾದ; ಸ್ತೋಮ: ಗುಂಪು, ಸಮೂಹ; ಕುಮಾರ: ಮಕ್ಕಳು; ಮುನಿಪ: ಋಷಿ; ಮಹೀಶ್ವರ: ರಾಜ; ಬಲುಗೈ: ಪರಾಕ್ರಮ;

ಪದವಿಂಗಡಣೆ:
ಆ +ಮಹಾ+ಕ್ರತುವರವ +ನೀ +ಮಾಡ್
ಆ +ಮಹೀಶ್ವರ+ ಪಂಕ್ತಿಯಲ್ಲಿ+ ನಿ
ರಾಮಯನು +ನಿಮ್ಮಯ್ಯನ್+ಇಹನು +ಸತೇಜದಲಿ +ಬಳಿಕ
ಸೋಮವಂಶದ+ ರಾಯರೊಳಗ್+
ಉದ್ದಾಮರಹ +ಬಲುಗೈ +ಕುಮಾರ
ಸ್ತೋಮ +ನೀವಿರಲ್+ಅಯ್ಯಗೇನ್+ಅರಿದೆಂದನಾ +ಮುನಿಪ

ಅಚ್ಚರಿ:
(೧) ೧, ೨ ಸಾಲಿನ ಮೊದಲ ಪದ “ಆ” ಕಾರದಿಂದ ಪ್ರಾರಂಭ
(೨) ಮಹೀಶ್ವರ, ರಾಯ – ಸಮನಾರ್ಥಕ ಪದ