ಭಯವು ಭಾರವಿಸಿತ್ತು ಜನಮೇ
ಜಯ ಮಹೀಪತಿ ಕೇಳು ಕುರು ಸೇ
ನೆಯಲಿ ಭೀಷ್ಮದ್ರೋಣರರಿದರು ಪಾರ್ಥನೆಂಬುದನು
ಜಯವು ಜೋಡಿಸಲರಿಯದಿದು ಸಂ
ಶಯದ ಸುಳಿವುತ್ಪಾತ ಶತವಿದು
ಲಯದ ಬೀಜವು ಭೀಷ್ಮ ಚಿತ್ತವಿಸೆಂದನಾ ದ್ರೋಣ (ವಿರಾಟ ಪರ್ವ, ೮ ಸಂಧಿ, ೧ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ಕೌರವ ಸೇನೆಯಲ್ಲಿ ಎಲ್ಲೆಲ್ಲೂ ಭಯವು ಆವರಿಸಿತ್ತು, ಎದುರಿನಲ್ಲಿ ಬಂದವನು ಅರ್ಜುನನೇ ಎಂದು ದ್ರೋಣ, ಭೀಷ್ಮರಿಗೆ ತಿಳಿಯಿತು, ದ್ರೋಣರು ಭೀಷ್ಮರಿಗೆ, “ಈ ಯುದ್ಧದಲ್ಲಿ ನಮಗೆ ಜಯವುಂಟಾಗುವುದಿಲ್ಲ, ಈಗ ತೋರುತ್ತಿರುವ ಅಪಶಕುನಗಳು ಈ ಸಂಶಯಕ್ಕೆ ಎಡೆಗೊಡುತ್ತದೆ, ನಮಗೆ ಶತಪ್ರತಿಶತ ಸೋಲಾಗುತ್ತದೆ” ಎಂದರು.
ಅರ್ಥ:
ಭಯ: ಅಂಜಿಕೆ; ಭಾರ: ಹೊರೆ, ತೂಕ; ಮಹೀಪತಿ: ರಾಜ; ಕೇಳು: ಆಲಿಸು; ಸೇನೆ: ಸೈನ್ಯ; ಅರಿ: ತಿಳಿ; ಜಯ: ಗೆಲುವು; ಜೋಡಿಸು: ಕೂಡಿಸು; ಸಂಶಯ: ಅನುಮಾನ; ಸುಳಿವು: ಕುರುಹು; ಉತ್ಪಾತ: ಅಪಶಕುನ; ಶತವಿದು: ಖಂಡಿತವಾಗಿಯು; ಲಯ: ಅಳಿವು, ನಾಶ; ಬೀಜ: ಮೂಲ; ಚಿತ್ತವಿಸು: ಗಮನವಿಡು;
ಪದವಿಂಗಡಣೆ:
ಭಯವು+ ಭಾರವಿಸಿತ್ತು +ಜನಮೇ
ಜಯ +ಮಹೀಪತಿ +ಕೇಳು +ಕುರು +ಸೇ
ನೆಯಲಿ +ಭೀಷ್ಮ+ದ್ರೋಣರ್+ಅರಿದರು +ಪಾರ್ಥನೆಂಬುದನು
ಜಯವು +ಜೋಡಿಸಲ್+ಅರಿಯದಿದು+ ಸಂ
ಶಯದ +ಸುಳಿವ್+ಉತ್ಪಾತ +ಶತವಿದು
ಲಯದ+ ಬೀಜವು +ಭೀಷ್ಮ +ಚಿತ್ತವಿಸೆಂದನಾ +ದ್ರೋಣ
ಅಚ್ಚರಿ:
(೧) ಜಯ, ಸಂಶಯ, ಭಯ, ಲಯ – ಪ್ರಾಸ ಪದಗಳು
(೨) ಅರಿದರು, ಅರಿಯದಿದು – ಅರಿ ಪದದ ಬಳಕೆ
(೩) ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳುವ ಪರಿ – ಸಂಶಯದ ಸುಳಿವುತ್ಪಾತ ಶತವಿದು ಲಯದ ಬೀಜವು