ಇತ್ತಲೀತನ ಕೂಡೆ ಕಾದುವ
ಡತ್ತಲರ್ಜುನನಿರವನರಿಯೆನು
ಚಿತ್ತದಲಿ ಕಹ್ತಿಗೊಂಬನವನೀಪಾಲನೆಂದೆನುತ
ಮತ್ತೆ ಸಾತ್ಯಕಿ ಬಿಲ್ಲನಿಳುಹಿದ
ನುತ್ತಮಾಂಗಕೆ ಕರಯುಗವ ಚಾ
ಚುತ್ತ ಬಿನ್ನೈಸಿದ ಧನುರ್ಧರ ಫಾಲನೇತ್ರಂಗೆ (ದ್ರೋಣ ಪರ್ವ, ೧೧ ಸಂಧಿ, ೮ ಪದ್ಯ)
ತಾತ್ಪರ್ಯ:
ಸಾತ್ಯಕಿಯು ಯೋಚಿಸುತ್ತ, ದ್ರೋಣರೊಡನೆ ಯುದ್ಧ ಮಾಡುತ್ತಾ ನಿಂತರೆ ಅರ್ಜುನನು ಹೇಗಿರುವನೆಂಬುದು ತಿಳಿಯುವುದಿಲ್ಲ, ದೊರೆಯು ಕೋಪಗೊಳುತ್ತಾನೆ ಎಂದು ಮನಗೊಂಡು, ಬಿಲ್ಲನ್ನು ಕೆಳಗಿಟ್ಟು, ಕೈಗಳೆರಡನ್ನು ತಲೆಗೆ ಚಾಚಿ ಧನುರ್ಧರರಲ್ಲಿ ಶಿವನಾದ ದ್ರೋಣನಿಗೆ ಹೀಗೆಂದು ಬಿನ್ನಹಮಾಡಿದನು.
ಅರ್ಥ:
ಕೂಡೆ: ಜೊತೆ; ಕಾದು: ಹೋರಾಡು; ಇರವು: ಬದುಕಿರುವ; ಅರಿ: ತಿಳಿ; ಚಿತ್ತ: ಮನಸ್ಸು; ಖತಿ: ರೇಗುವಿಕೆ, ಕೋಪ; ಅವನೀಪಾಲ: ರಾಜ; ಬಿಲ್ಲು: ಚಾಪ; ಇಳುಹು: ಕೆಳಕ್ಕೆ ತರು; ಉತ್ತಮಾಂಗ: ಶಿರ; ಕರ: ಹಸ್ತ; ಕರಯುಗ: ಎರಡೂ ಕೈಗಳು; ಚಾಚು: ಹರಡು; ಬಿನ್ನೈಸು: ಬೇದು; ಧನು: ಬಿಲ್ಲು; ಧನುರ್ಧರ: ಬಿಲ್ಲಿನಲ್ಲಿ ಪರಾಕ್ರಮಿಯಾದ; ಫಾಲನೇತ್ರ: ಶಿವ; ನೇತ್ರ: ಕಣ್ಣು; ಫಾಲ: ಹಣೆ;
ಪದವಿಂಗಡಣೆ:
ಇತ್ತಲೀತನ +ಕೂಡೆ +ಕಾದುವಡ್
ಅತ್ತಲ್+ಅರ್ಜುನನ್+ಇರವನ್+ಅರಿಯೆನು
ಚಿತ್ತದಲಿ + ಖತಿಗೊಂಬನ್+ಅವನೀಪಾಲನೆಂದ್+ಎನುತ
ಮತ್ತೆ +ಸಾತ್ಯಕಿ +ಬಿಲ್ಲನ್+ಇಳುಹಿದನ್
ಉತ್ತಮಾಂಗಕೆ +ಕರಯುಗವ +ಚಾ
ಚುತ್ತ +ಬಿನ್ನೈಸಿದ +ಧನುರ್ಧರ +ಫಾಲನೇತ್ರಂಗೆ
ಅಚ್ಚರಿ:
(೧) ಶಿರಕ್ಕೆ ಉತ್ತಮಾಂಗ ಎಂದು ಕರೆದಿರುವುದು
(೨) ದ್ರೋಣರನ್ನು ಕರೆದ ಪರಿ – ಧನುರ್ಧರ ಫಾಲನೇತ್ರ