ಪದ್ಯ ೩೨: ಭೀಮ ದುರ್ಯೋಧನರ ರಕ್ತವು ಹೇಗೆ ಭೂಮಿಯನ್ನು ತೋಯಿಸಿತು?

ಆಗಳೇ ಸಂತೈಸಿ ರಿಪು ಕೈ
ದಾಗಿಸಿದನರಸನನು ಘಾಯದ
ಬೇಗಡೆಯಲುಚ್ಚಳಿಸಿದುದು ಬಿಸಿರಕುತ ಹುಡಿ ನನೆಯೆ
ಆ ಗರುವನದ ಬಗೆವನೇ ಸರಿ
ಭಾಗರಕುತವನನಿಲಸುತನಲಿ
ತೂಗಿ ತೆಗೆದವೊಲಾಯ್ತು ಹೊಯ್ದನು ಪವನನಂದನನ (ಗದಾ ಪರ್ವ, ೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಭೀಮನು ಸಂತೈಸಿಕೊಂಡು ಕೌರವನನ್ನು ಹೊಡೆಯಲು ಬಿಸಿರಕ್ತ ಸುರಿದು ನೆಲದಧೂಳು ನೆನೆಯಿತು. ಕೌರವನು ಅದನ್ನು ಲೆಕ್ಕಿಸದೆ ಭೀಮನನ್ನು ಹೊಡೆಯಲು ಅವನ ಮೈಯಿಂದ ರಕ್ತ ಸುರಿಯಿತು.

ಅರ್ಥ:
ಸಂತೈಸು: ಸಮಾಧಾನ ಪಡಿಸು; ರಿಪು: ವೈರಿ; ಕೈ: ಹಸ್ತ; ತಾಗು: ಮುಟ್ಟು; ಅರಸ: ರಾಜ; ಘಾಯ: ಪೆಟ್ತು; ಬೇಗಡೆ: ಮಿಂಚುವ ಬಣ್ಣ; ಉಚ್ಚಳಿಸು: ಮೇಲಕ್ಕೆ ಹಾರು; ಬಿಸಿ: ಕಾವು, ಶಾಖ; ರಕುತ: ನೆತ್ತರು; ಹುಡಿ: ಹಿಟ್ಟು, ಪುಡಿ; ನನೆ: ತೋಯು, ಒದ್ದೆಯಾಗು; ಗರುವ: ಶ್ರೇಷ್ಠ; ಬಗೆ: ಎಣಿಸು, ಲಕ್ಷಿಸು, ಸೀಳು; ಭಾಗ: ಅಂಶ, ಪಾಲು; ರಕುತ: ನೆತ್ತರು; ಅನಿಲಸುತ: ವಾಯು ಪುತ್ರ (ಭೀಮ); ತೂಗು: ತೋಲನ ಮಾಡು, ಅಲ್ಲಾಡಿಸು; ಹೊಯ್ದು: ಹೊಡೆ; ನಂದನ: ಮಗ;

ಪದವಿಂಗಡಣೆ:
ಆಗಳೇ +ಸಂತೈಸಿ +ರಿಪು +ಕೈ
ತಾಗಿಸಿದನ್+ಅರಸನನು+ ಘಾಯದ
ಬೇಗಡೆಯಲ್+ಉಚ್ಚಳಿಸಿದುದು +ಬಿಸಿರಕುತ +ಹುಡಿ +ನನೆಯೆ
ಆ +ಗರುವನದ +ಬಗೆವನೇ +ಸರಿ
ಭಾಗ+ರಕುತವನ್+ಅನಿಲಸುತನಲಿ
ತೂಗಿ +ತೆಗೆದವೊಲಾಯ್ತು+ ಹೊಯ್ದನು +ಪವನ+ನಂದನನ

ಅಚ್ಚರಿ:
(೧) ಅರಸ, ಗರುವನ, ರಿಪು – ದುರ್ಯೋಧನನನ್ನು ಕರೆದ ಪರಿ