ಪದ್ಯ ೩೩: ಕೃಷ್ಣನನ್ನು ಪಾಂಡವರು ಹೇಗೆ ಬರೆಮಾಡಿದರು?

ರಥವಿಳಿದನಸುರಾರಿ ಸುಮನೋ
ರಥವಿಳಿದು ಬಪ್ಪಂತೆ ಕುಂತೀ
ಸುತರ ನಿಜಭುಜವಾರೆತಕ್ಕೈಸಿದನು ಹರುಷದಲಿ
ಕ್ಷಿತಿಯಮರರಾಶೀರ್ವಚನ ಸಂ
ಸ್ತುತಿಗೆ ತಲೆವಾಗುತ್ತ ಮಿಗೆ ದ್ರೌ
ಪತಿಯ ಹೊರೆಗೈದಿದನುಘೇಯೆಂದುದು ಸುರಸ್ತೋಮ (ಅರಣ್ಯ ಪರ್ವ, ೧೭ ಸಂಧಿ, ೩೩ ಪದ್ಯ)

ತಾತ್ಪರ್ಯ:
ಪಾಂಡವರ ಮನೋರಥವು ಇಳಿದು ಬಂದಿತೋ ಎಂಬಂತೆ ಶ್ರೀಕೃಷ್ಣನು ರಥವಿಳಿದು ಬಂದು ಸಮ್ತಸದಿಂದ ಪಾಂಡವರನ್ನು ತನ್ನು ಭುಜಗಳಿಂದ ಆಲಿಂಗಿಸಿದನು. ಬ್ರಾಹ್ಮಣರ ಆಶೀರ್ವಚನೆಗೆ ತಲೆಬಾಗಿ, ದ್ರೌಪದಿಯ ಬಳಿ ಬಂದನು. ದೇವತೆಗಳು ಉಘೇ ಎಂದು ಸಂತಸದಿಂದ ಉದ್ಗರಿಸಿದರು.

ಅರ್ಥ:
ರಥ: ಬಂಡಿ; ಇಳಿ: ಕೆಳಕ್ಕೆ ಬಂದು; ಅಸುರಾರಿ: ರಾಕ್ಷಸರ ವೈರಿ; ಮನೋರಥ: ಆಸೆ, ಬಯಕೆ; ಬಪ್ಪಂತೆ: ಬರುವಂತೆ; ಸುತ: ಮಕ್ಕಳು; ಭುಜ: ತೋಳು; ಐಸು: ಅಷ್ಟು; ಹರುಷ: ಸಂತಸ; ಕ್ಷಿತಿ: ಭೂಮಿ; ಕ್ಷಿತಿಯಮರರು: ಬ್ರಾಹ್ಮಣ; ಆಶೀರ್ವಚನ: ಶುಭನುಡಿ; ಸಂಸ್ತುತಿ: ಭಕ್ತಿಯಿಂದಾಚರಿಸಿದ ಸ್ತವನ, ಸ್ತೋತ್ರ; ತಲೆ: ಶಿರ; ಬಾಗು: ತಗ್ಗಿಸು; ಮಿಗೆ: ಮತ್ತು; ಹೊರೆ: ಹತ್ತಿರ, ಸಮೀಪ; ಉಘೇ: ಜಯಘೋಷ; ಸುರ: ದೇವತೆ; ಸ್ತೋಮ: ಗುಂಪು;

ಪದವಿಂಗಡಣೆ:
ರಥವಿಳಿದನ್+ಅಸುರಾರಿ +ಸುಮನೋ
ರಥವಿಳಿದು +ಬಪ್ಪಂತೆ+ ಕುಂತೀ
ಸುತರ+ ನಿಜ+ಭುಜವಾರೆತಕ್ಕೈಸಿದನು+ ಹರುಷದಲಿ
ಕ್ಷಿತಿ+ಅಮರರ+ಆಶೀರ್ವಚನ+ ಸಂ
ಸ್ತುತಿಗೆ +ತಲೆವಾಗುತ್ತ+ ಮಿಗೆ +ದ್ರೌ
ಪತಿಯ +ಹೊರೆಗ್+ಐದಿದನ್+ಉಘೇ+ಎಂದುದು +ಸುರ+ಸ್ತೋಮ

ಅಚ್ಚರಿ:
(೧) ಪಾಂಡವರ ಹರ್ಷವನ್ನು ಹೇಳುವ ಪರಿ – ರಥವಿಳಿದನಸುರಾರಿ ಸುಮನೋರಥವಿಳಿದು ಬಪ್ಪಂತೆ

ಪದ್ಯ ೧೯: ಗೋಗ್ರಹಣದಲ್ಲಿ ಯಾರು ಕುರುಸೈನ್ಯವನ್ನು ತಡೆದಿದ್ದರು?

ಒಂದು ದೆಸೆಯಲಿ ರಾಯನಿಪ್ಪ
ತ್ತೊಂದು ಸಾವಿರ ರಥಸಹಿತುಘೇ
ಯೆಂದು ಬಿಟ್ಟನು ಭೀಮಸೇನನ ರಥದ ಸಮ್ಮುಖಕೆ
ಅಂದು ಗೋಗ್ರಹಣದಲಿ ಫಲಗುಣ
ನಿಂದನನಿಬರಿಗರಸ ಚಿತ್ತೈ
ಸಿಂದು ಸೈರಿಸಿ ನಿಂದನನಿಬರಿಗೊಬ್ಬನೇ ಭೀಮ (ಕರ್ಣ ಪರ್ವ, ೧೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಒಂದು ಕಡೆಯಿಂದ ದುರ್ಯೋಧನನು ಇಪ್ಪತ್ತೊಂದು ಸಾವಿರ ರಥಿಕರ ಜೊತೆ ಭೀಮನ ಮೇಲೆ ಉಘೇ ಉಘೇ ಎಂದು ಹೇಳುತ್ತಾ ಆಕ್ರಮಣ ಮಾಡಿದನು. ಈ ಹಿಂದೆ ವಿರಾಟ ರಾಜನ ಮೇಲೆ ಆಕ್ರಮಣ ಮಾಡುವಾಗ ಗೋಗ್ರಹಣದಲ್ಲಿ ಅರ್ಜುನನೊಬ್ಬನೇ ನಮ್ಮನ್ನು ಎದುರಿಸಿದನು, ಇಂದು ಭೀಮನೊಬ್ಬನೇ ಕುರುಸೇನೆಯನ್ನು ಎದುರುನೋಡುತ್ತಿದ್ದಾನೆ ಎಂದು ಸೈನ್ಯದ ರಥಿಕರು ಕುರುರಾಯನಿಗೆ ನುಡಿದನು.

ಅರ್ಥ:
ದೆಸೆ: ದಿಕ್ಕು; ರಾಯ: ರಾಜ; ರಥ: ಬಂಡಿ; ಸಹಿತ: ಜೊತೆ; ಉಘೇ: ಜಯಘೋಷದ ಪದ; ಸಮ್ಮುಖ: ಎದುರು; ಗೋಗ್ರಹಣ: ಗೋವುಗಳನ್ನು ಸರೆಹಿಡಿಯುವುದು; ಫಲುಗುಣ: ಅರ್ಜುನ; ನಿಂದನು: ನಿಲ್ಲಿಸು, ಎದುರು ನಿಲ್ಲು; ಅನಿಬರು: ಅಷ್ಟು ಜನ; ಅರಸ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಇಂದು: ಇವತ್ತು; ಸೈರಿಸು: ತಾಳು;

ಪದವಿಂಗಡಣೆ:
ಒಂದು+ ದೆಸೆಯಲಿ +ರಾಯನ್+ಇಪ್ಪ
ತ್ತೊಂದು +ಸಾವಿರ +ರಥಸಹಿತ+ಉಘೇ
ಯೆಂದು +ಬಿಟ್ಟನು +ಭೀಮಸೇನನ +ರಥದ +ಸಮ್ಮುಖಕೆ
ಅಂದು +ಗೋಗ್ರಹಣದಲಿ+ ಫಲಗುಣನ್
ಇಂದನ್+ಅನಿಬರಿಗ್+ಅರಸ+ ಚಿತ್ತೈಸ್
ಇಂದು +ಸೈರಿಸಿ +ನಿಂದನ್+ಅನಿಬರಿಗ್+ಒಬ್ಬನೇ +ಭೀಮ

ಅಚ್ಚರಿ:
(೧) ಎಂದು, ಒಂದು, ಅಂದು, ಇಂದು – ಪ್ರಾಸ ಪದಗಳು

ಪದ್ಯ ೩೭: ಶಿವನಿಗೆ ಯಾರು ಉಘೇ ಎಂದು ಜಯಘೋಷಮೊಳಗಿದರು?

ಪರಮ ಶ್ರುತಿ ವೇದಾಂಗ ಮಂತ್ರೋ
ತ್ಕರ ಧರಿತ್ರಿ ಕುಲಾದ್ರಿ ಸಸಿ ಭಾ
ಸ್ಕರ ಸುರೋರಗ ಜಲಧಿ ನದಿ ನಕ್ಷತ್ರ ರಾಶಿಗಳು
ಸರಸಿರುಹಭವ ವಿಷ್ಣು ವಿವಿಧಾ
ಧ್ವರ ಮುನೀಂದ್ರ ಗ್ರಹವು ಸಚಾರ
ಚರವುಘೇ ಎಂದೆರಗುತಿರ್ದುದು ಶಿವನ ಬಳಸಿನಲಿ (ಕರ್ಣ ಪರ್ವ, ೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ವೇದ ವೇದಾಂಗಗಳು, ಮಂತ್ರಗಳು, ಭೂಮಿ, ಕುಲ ಪರ್ವತಗಳು, ಚಂದ್ರಸೂರ್ಯರು, ನಕ್ಷತ್ರಗಳು, ನದಿ ಸಮುದ್ರಗಳು, ಬ್ರಹ್ಮ ವಿಷ್ಣು ಯಜ್ಞಗಳು, ಮುನಿಮುಖ್ಯರು, ಗ್ರಹಗಳು ಸಚರಾಚರಗಳು ಉಘೇ ಎಂದು ಶಿವನಿಗೆ ನಮಸ್ಕರಿಸಿದರು.

ಅರ್ಥ:
ಪರಮ: ಶ್ರೇಷ್ಠ; ಶ್ರುತಿ: ವೇದ; ವೇದಾಂಗ: ಉಪನಿಷತ್ತು; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಉತ್ಕರ: ಸಮೂಹ; ಧರಿತ್ರಿ: ಭೂಮಿ; ಕುಲಾದ್ರಿ: ಪರ್ವತ; ಸಸಿ: ಶಶಿ, ಚಂದ್ರ ಭಾಸ್ಕರ: ರವಿ; ಸುರ: ದೇವತೆ; ಉರಗ: ಹಾವು; ಜಲಧಿ: ಸಾಗರ; ನದಿ: ಸರೋವರ; ನಕ್ಷತ್ರ: ತಾರೆ; ರಾಶಿ: ಸಮೂಹ; ಸರಸಿರುಹಭವ: ಬ್ರಹ್ಮ; ವಿಷ್ಣು: ಶೇಷಶಯನ; ವಿವಿಧ: ಹಲವಾರು; ಅಧ್ವರ: ಯಜ್ಞ; ಮುನಿ: ಋಷಿ; ಮುನೀಂದ್ರ: ಮುನಿಮುಖ್ಯ; ಗ್ರಹ:ಆಕಾಶಚರಗಳು; ಸಚರಾಚರ: ಸಮಸ್ತ ಚಲಿಸುವ ಮತ್ತು ಚಲಿಸದ; ಉಘೇ: ಜಯಘೋಷ; ಎರಗು: ನಮಸ್ಕರಿಸು; ಶಿವ: ಶಂಕರ; ಬಳಸು: ಸುತ್ತುವರಿ, ಸುತ್ತುಗಟ್ಟು;

ಪದವಿಂಗಡಣೆ:
ಪರಮ +ಶ್ರುತಿ +ವೇದಾಂಗ +ಮಂತ್ರೋ
ತ್ಕರ+ ಧರಿತ್ರಿ+ ಕುಲಾದ್ರಿ +ಸಸಿ +ಭಾ
ಸ್ಕರ +ಸುರೋರಗ+ ಜಲಧಿ+ ನದಿ+ ನಕ್ಷತ್ರ+ ರಾಶಿಗಳು
ಸರಸಿರುಹಭವ +ವಿಷ್ಣು +ವಿವಿಧ
ಅಧ್ವರ +ಮುನೀಂದ್ರ +ಗ್ರಹವು +ಸಚಾರ
ಚರವ್+ಉಘೇ +ಎಂದ್+ಎರಗುತಿರ್ದುದು +ಶಿವನ +ಬಳಸಿನಲಿ

ಅಚ್ಚರಿ:
(೧) ಉತ್ಕರ, ಭಾಸ್ಕರ – ಪ್ರಾಸ ಪದ
(೨) ಉತ್ಕರ, ರಾಶಿ – ಸಮನಾರ್ಥಕ ಪದಗಳು

ಪದ್ಯ ೧೫: ಶಿವನಿಗೆ ಯಾರು ಜಯಘೋಷಗಳನ್ನು ಹಾಡುತ್ತಿದ್ದರು?

ಮುರಿಯೆ ಬಲವಂಕದಲುಘೇ ಎಂ
ದೆರಗಿದವು ಶ್ರುತಿಕೋಟಿ ವಾಮದ
ಕೊರಳ ಕೊಂಕಿನಲುಪನಿಷತ್ತುಗಳೆರಗಿದವು ಕೋಟಿ
ತಿರುಗೆ ಬೆನ್ನಲಿ ನೆರೆದ ಸಚರಾ
ಚರವುಘೇ ಎಂದುದು ಕಪರ್ದಿಯ
ಸರಿಸದಲಿ ಸಿಡಿಲಂತೆ ಮೊಳಗಿತು ವೀರ ಗಣನಿಕರ (ಕರ್ಣ ಪರ್ವ, ೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶಿವನು ಬಲಕ್ಕೆ ನೋಡಲು ಅಸಂಖ್ಯಾತ ಶ್ರುತಿಗಳು ಉಘೇ ಎಂದು ನಮಸ್ಕರಿಸಿದವು. ಎಡಕ್ಕೆ ತಿರುಗಲು ಹಲವಾರು ಉಪನಿಷತ್ತುಗಳು ವಂದಿಸಿದವು. ಹಿಂದಕ್ಕೆ ತಿರುಗಿ ನೋಡಲು ಅಲ್ಲಿ ಸೇರಿದ್ದ ಎಲ್ಲಾ ಚರಾಚರರುಗಳು ಜಯಘೋಷವನ್ನು ಹಾಡುತ್ತಿದ್ದರು. ಶಿವನ ಗರ್ಜನೆಯೊಡನೆ
ವೀರರಾದ ಶಿವಗಣಗಳು ಸಿಡಿಲಿನಂತೆ ಗರ್ಜಿಸಿದವು.

ಅರ್ಥ:
ಮುರಿ: ತಿರುಗು; ಬಲ: ದಕ್ಷಿಣ ಪಾರ್ಶ್ವ; ವಂಕ: ಬದಿ; ಉಘೇ: ಜಯಘೋಷ; ಎರಗು:ನಮಸ್ಕಾರ ಮಾಡು; ಶ್ರುತಿ: ವೇದ; ಕೋಟಿ: ಲೆಕ್ಕವಿಲ್ಲದಷ್ಟು; ವಾಮ: ಎಡಭಾಗ; ಕೊರಳು: ಕಂಥ; ಕೊಂಕಿನ: ತಿರುಗು; ಉಪನಿಷತ್ತು: ವೇದದ ಕೊನೆಯ ಭಾಗ; ಎರಗು: ನಮಸ್ಕರಿಸು; ಕೋಟಿ: ಅಸಂಖ್ಯಾತ; ತಿರುಗು: ಸುತ್ತು, ದಿಕ್ಕನ್ನು ಬದಲಾಯಿಸು; ಬೆನ್ನು: ಹಿಂಬದಿ; ನೆರೆ: ಗುಂಪು; ಸಚರಾಚರ: ಚಲಿಸುವ ಮತ್ತು ಚಲಿಸದ; ಉಘೇ: ಜಯಘೋಷ; ಕಪರ್ದಿ:ಜಟಾಜೂಟವುಳ್ಳವ-ಶಿವ; ಸರಿಸು: ಪಕ್ಕಕ್ಕೆ ಇಡು; ಸರಿಸ: ಸಮೀಪ; ಸಿಡಿಲು: ಚಿಮ್ಮು, ಸಿಡಿ; ಮೊಳಗು: ಹೊರಹೊಮ್ಮು; ವೀರ: ಪರಾಕ್ರಮ; ಗಣ: ಶಿವನ ಪ್ರಮಥರ ಸಮೂಹ; ನಿಕರ: ಗುಂಪು;

ಪದವಿಂಗಡಣೆ:
ಮುರಿಯೆ+ ಬಲವಂಕದಲ್+ಉಘೇ +ಎಂದ್
ಎರಗಿದವು +ಶ್ರುತಿಕೋಟಿ +ವಾಮದ
ಕೊರಳ+ ಕೊಂಕಿನಲ್+ಉಪನಿಷತ್ತುಗಳ್+ಎರಗಿದವು +ಕೋಟಿ
ತಿರುಗೆ +ಬೆನ್ನಲಿ +ನೆರೆದ +ಸಚರಾ
ಚರವುಘೇ +ಎಂದುದು +ಕಪರ್ದಿಯ
ಸರಿಸದಲಿ +ಸಿಡಿಲಂತೆ +ಮೊಳಗಿತು +ವೀರ +ಗಣನಿಕರ

ಅಚ್ಚರಿ:
(೧) ಶಿವನನ್ನು ಕಪರ್ದಿ ಎಂದು ಕರೆದಿರುವುದು
(೨) ಉಘೇ, ಕೋಟಿ – ೨ ಬಾರಿ ಪ್ರಯೋಗ