ಪದ್ಯ ೩೦: ವೀರಸ್ವರ್ಗವು ಹೇಗೆ ಬರುತ್ತದೆ?

ಉಗಿದು ಬಿಲ್ಲಿನ ತಿರುವ ಕೊರಳಲಿ
ಬಿಗಿಯೆ ಭಯದಲಿ ದ್ರುಪದಸುತ ಬೆರ
ಳುಗಳ ಬಾಯಲಿ ಬೇಡಿಕೊಂಡನು ದ್ರೋಣನಂದನನ
ಉಗಿದಡಾಯ್ದದಲೆನ್ನ ಶಿರವನು
ತೆಗೆದು ಕಳೆಯೈ ಶಸ್ತ್ರಘಾತದಿ
ನುಗುಳಿಸಸುವನು ತನಗೆ ವೀರಸ್ವರ್ಗವಹುದೆಂದ (ಗದಾ ಪರ್ವ, ೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ತನ್ನ ಬಿಲ್ಲನ್ನು ತೆಗೆದು, ಅದರ ಹೆದೆಯನ್ನು ಧೃಷ್ಟದ್ಯುಮ್ನನ ಕೊರಳಿಗೆ ಬಿಗಿದನು. ಭಯಗೊಂಡ ಧೃಷ್ಟದ್ಯುಮ್ನನು ಬಾಯಲ್ಲಿ ಬೆರಳಿಟ್ಟುಕೊಂಡು ಅಶ್ವತ್ಥಾಮನಲ್ಲಿ ಬೇಡಿದನು, “ಕತ್ತಿಯನ್ನು ಹಿರಿದು ಕೊರಳನ್ನು ಕೊಯ್ದು ನನ್ನ ಶಿರವನ್ನು ತೆಗೆ, ಹಾಗಾದರೆ ನನಗೆ ವೀರಸ್ವರ್ಗ ದೊರೆಯುತ್ತದೆ” ಎಂದನು.

ಅರ್ಥ:
ಉಗಿ: ಹೊರಹಾಕು; ಬಿಲ್ಲು: ಚಾಪ; ತಿರುವು: ತಿರುಗಿಸು; ಕೊರಳು: ಗಂಟಲು; ಬಿಗಿ: ಭದ್ರವಾಗಿರುವುದು; ಭಯ: ಹೆದರು; ಸುತ: ಮಗ; ಬೆರಳು: ಅಂಗುಲಿ; ಬೇಡು: ಯಾಚಿಸು; ನಂದನ: ಮಗ; ಶಿರ: ತಲೆ; ತೆಗೆ: ಹೊರತರು; ಕಳೆ: ಬೀಡು, ತೊರೆ; ಶಸ್ತ್ರ: ಆಯುಧ; ಘಾತ: ಪೆಟ್ಟು; ಉಗುಳು: ಉಗಿ, ಹೊರಹಾಕು; ಅಸು: ಪ್ರಾಣ; ಸ್ವರ್ಗ: ನಾಕ;

ಪದವಿಂಗಡಣೆ:
ಉಗಿದು +ಬಿಲ್ಲಿನ +ತಿರುವ +ಕೊರಳಲಿ
ಬಿಗಿಯೆ +ಭಯದಲಿ +ದ್ರುಪದಸುತ +ಬೆರ
ಳುಗಳ +ಬಾಯಲಿ +ಬೇಡಿಕೊಂಡನು +ದ್ರೋಣ+ನಂದನನ
ಉಗಿದಡ್+ಆಯ್ದದಲ್+ಎನ್ನ+ ಶಿರವನು
ತೆಗೆದು +ಕಳೆಯೈ +ಶಸ್ತ್ರ+ಘಾತದಿನ್
ಉಗುಳಿಸ್+ಅಸುವನು +ತನಗೆ +ವೀರಸ್ವರ್ಗವ್+ಅಹುದೆಂದ

ಅಚ್ಚರಿ:
(೧) ಉಗಿ, ಬಿಗಿ – ಪ್ರಾಸ ಪದಗಳು
(೨) ಸುತ, ನಂದನ – ಸಮಾನಾರ್ಥಕ ಪದ
(೩) ಪ್ರಾಣ ತೆಗೆ ಎಂದು ಹೇಳುವ ಪರಿ – ಶಸ್ತ್ರಘಾತದಿ ನುಗುಳಿಸಸುವನು

ಪದ್ಯ ೧೯: ಮಂತ್ರಾಸ್ತ್ರದ ಅಧಿದೇವತೆಗಳು ಏನು ಮಾಡಿದರು?

ಉಗಿದು ಮಂತ್ರಾಸ್ತ್ರವನು ತಿರುವಿಂ
ದುಗುಳಿಚಿದಡಾ ಭೂತದಂಘ್ರಿಗೆ
ಮುಗಿದ ಕೈಗಳಲೆರಗಿದರು ಶಸ್ತ್ರಾಧಿದೇವಿಯರು
ಉಗಿದನೊರೆಯಲಡಾಯುಧವನು
ಬ್ಬೆಗದಲಪ್ಪಳಿಸಿದಡೆ ಕಯ್ಯಿಂ
ಜಗುಳ್ದು ಬಿದ್ದುದು ಝಂಕೆಯದ್ದುದು ಭಯದ ಝಾಡಿಯಲಿ (ಗದಾ ಪರ್ವ, ೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಆಗ ಅಶ್ವತ್ಥಾಮನು ದಿವ್ಯಾಸ್ತ್ರಗಳನ್ನು ಪ್ರಯೋಗಿಸಲು, ಆ ಅಸ್ತ್ರಗಳ ಮಂತ್ರಾಭಿಮಾನ ದೇವಿಯರು ಕೈ ಮುಗಿದು ಭೂತಕ್ಕೆ ನಮಸ್ಕರಿಸಿದರು. ಒರೆಯಿಂದ ಖಡ್ಗವನ್ನು ಹಿರಿದು ಉದ್ವೇಗದಿಂದ ಅಪ್ಪಳಿಸಿದರೆ ಕತ್ತಿಯು ಕೈಜಾರಿ ಕೆಳಕ್ಕೆ ಬಿದ್ದಿತು.

ಅರ್ಥ:
ಉಗಿ: ಹೊರಹಾಕು; ಅಸ್ತ್ರ: ಶಸ್ತ್ರ; ತಿರುಗು: ಬಿಲ್ಲಿನ ಹಗ್ಗ, ಹೆದೆ, ಮೌರ್ವಿ, ಸುತ್ತು; ಉಗುಳು: ಹೊರಹಾಕು; ಭೂತ: ದೆವ್ವ; ಅಂಘ್ರಿ: ಪಾದ; ಮುಗಿದ: ಜೋಡಿಸಿದ; ಕೈ: ಹಸ್ತ; ಎರಗು: ಬಾಗು, ನಮಸ್ಕರಿಸು; ಅಧಿದೇವತೆ: ಮುಖ್ಯವಾದ ದೇವತೆ; ಒರೆ: ಶೋಧಿಸಿ ನೋಡು, ಹೇಳು; ಆಯುಧ: ಶಸ್ತ್ರ; ಉಬ್ಬೆ: ರಭಸ; ಅಪ್ಪಳಿಸು: ತಾಗು; ಕಯ್ಯ್: ಹಸ್ತ; ಜಗುಳು: ಜಾರು; ಬಿದ್ದು: ಕುಸಿ; ಝಂಕೆ: ಆರ್ಭಟ; ಅದ್ದು: ತೋಯು, ಮುಳುಗು; ಭಯ: ಹೆದರಿಕೆ; ಝಾಡಿ: ಕಾಂತಿ;

ಪದವಿಂಗಡಣೆ:
ಉಗಿದು +ಮಂತ್ರಾಸ್ತ್ರವನು+ ತಿರುವಿಂದ್
ಉಗುಳಿಚಿದಡ್+ಆ+ ಭೂತದ್+ಅಂಘ್ರಿಗೆ
ಮುಗಿದ +ಕೈಗಳಲ್+ಎರಗಿದರು +ಶಸ್ತ್ರ+ಅಧಿದೇವಿಯರು
ಉಗಿದನ್+ಒರೆಯಲಡ್+ಆಯುಧವನ್
ಉಬ್ಬೆಗದಲ್+ಅಪ್ಪಳಿಸಿದಡೆ+ ಕಯ್ಯಿಂ
ಜಗುಳ್ದು+ ಬಿದ್ದುದು+ ಝಂಕೆ+ಅದ್ದುದು+ ಭಯದ +ಝಾಡಿಯಲಿ

ಅಚ್ಚರಿ:
(೧) ಉಗಿ – ೧,೨, ೪ ಸಾಲಿನ ಮೊದಲ ಪದ
(೨) ಮಂತ್ರಾಸ್ತ್ರವು ನಿಷ್ಪ್ರಯೋಜಕವಾಯಿತು ಎಂದು ಹೇಳಲು – ಭೂತದಂಘ್ರಿಗೆ
ಮುಗಿದ ಕೈಗಳಲೆರಗಿದರು ಶಸ್ತ್ರಾಧಿದೇವಿಯರು
(೩) ಬ, ಝ ಕಾರದ ಪದ ರಚನೆ – ಬಿದ್ದುದು ಝಂಕೆಯದ್ದುದು ಭಯದ ಝಾಡಿಯಲಿ

ಪದ್ಯ ೫೫: ಭಗದತ್ತನು ಯಾವ ಅಸ್ತ್ರವನ್ನು ತೆಗೆದನು?

ಅನಿತು ಶರವನು ಕಡಿದು ಭಗದ
ತ್ತನ ಧನುವನಿಕ್ಕಡಿಗಡಿಯೆ ಕಂ
ಗನೆ ಕನಲಿ ಗವಸಣಿಗೆಯಿಂದುಗಿದನು ನಿಜಾಯುಧವ
ದಿನಪ ಕೋಟಿಯ ರಶ್ಮಿಯನು ತುದಿ
ಮೊನೆಯೊಳುಗುಳುವ ಬಾಯಿ ಧಾರೆಯ
ತನಿಯುರಿಯ ತೆಕ್ಕೆಯಲಿ ಥಳಥಳಿಸುವ ಮಹಾಂಕುಶವ (ದ್ರೋಣ ಪರ್ವ, ೩ ಸಂಧಿ, ೫೫ ಪದ್ಯ)

ತಾತ್ಪರ್ಯ:
ಅರ್ಜುನನು ಅವಿಷ್ಟೂ ಬಾಣಗಳನ್ನು ತುಂಡುಮಾಡಿ ಭಗದತ್ತನ ಬಿಲ್ಲನ್ನು ತುಂಡು ಮಾಡಿದನು. ಭಗದತ್ತ ಕಂಗನೆ ಕೆರಳಿ ಮುಸುಕಿನಲ್ಲಿಟ್ಟಿದ್ದ ತನ್ನ ಆಯುಧವೊಂದನ್ನು ತೆಗೆದನು. ಆ ಮಹಾ ಅಂಕುಶದ ಮೊನೆಯಿಂದ ಸೂರ್ಯಕೋಟಿ ಪ್ರಕಾಶವು ಹೊರ ಹೊಮ್ಮುತ್ತಿತ್ತು. ಸುತ್ತಲೂ ಉರಿಯ ತೆಕ್ಕೆಗಳೇಳುತ್ತಿದ್ದವು.

ಅರ್ಥ:
ಅನಿತು: ಸ್ವಲ್ಪ; ಶರ: ಬಾಣ; ಕಡಿ: ಕತ್ತರಿಸು; ಧನು: ಬಿಲ್ಲು; ಇಕ್ಕಡಿ; ಕಂಗನೆ: ಅಧಿಕವಾಗಿ; ಕನಲು: ಬೆಂಕಿ, ಉರಿ; ಗವಸಣಿಗೆ: ಮುಸುಕು; ಉಗಿ: ಹೊರಹಾಕು; ಆಯುಧ: ಶಸ್ತ್ರ; ದಿನಪ: ರವಿ; ಕೋಟಿ: ಅಸಂಖ್ಯಾತ; ರಶ್ಮಿ: ಕಿರಣ; ತುದಿ: ಕೊನೆ; ಮೊನೆ: ಹರಿತವಾದ; ಧಾರೆ: ವರ್ಷ; ತನಿ: ಹೆಚ್ಚಾಗು; ತೆಕ್ಕೆ: ಗುಂಪು; ಥಳಥಳಿ: ಹೊಳೆ; ಅಂಕುಶ:ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ;

ಪದವಿಂಗಡಣೆ:
ಅನಿತು +ಶರವನು+ ಕಡಿದು +ಭಗದ
ತ್ತನ+ ಧನುವನ್+ಇಕ್ಕಡಿ+ಕಡಿಯೆ +ಕಂ
ಗನೆ +ಕನಲಿ +ಗವಸಣಿಗೆಯಿಂದ್+ಉಗಿದನು +ನಿಜಾಯುಧವ
ದಿನಪ +ಕೋಟಿಯ +ರಶ್ಮಿಯನು +ತುದಿ
ಮೊನೆಯೊಳ್+ಉಗುಳುವ +ಬಾಯಿ +ಧಾರೆಯ
ತನಿ+ಉರಿಯ +ತೆಕ್ಕೆಯಲಿ +ಥಳಥಳಿಸುವ+ ಮಹಾಂಕುಶವ

ಅಚ್ಚರಿ:
(೧) ಆಯುಧದ ಪ್ರಕಾಶ – ದಿನಪ ಕೋಟಿಯ ರಶ್ಮಿಯನು ತುದಿಮೊನೆಯೊಳುಗುಳುವ ಬಾಯಿ