ಕುಲಕೆ ಕಂಟಕನಾದಡೊಬ್ಬನ
ಕಳೆವುದೂರಳಿವಿನಲಿ ಕಳೆವುದು
ಕುಲವನೊಂದನು ದೇಶದಳಿವಿನಲೂರ ಕೆಡಿಸುವುದು
ಇಳೆಯನಖಿಳವ ಬಿಸುಡುವುದು ತ
ನ್ನುಳಿವ ಮಾಡುವುದೆಂಬ ವಚನವ
ತಿಳಿವುದೀತನ ಬಿಸುಟು ಕಳೆ ನೀನೆಂದನಾ ವಿದುರ (ಆದಿ ಪರ್ವ, ೪ ಸಂಧಿ, ೫೨ ಪದ್ಯ)
ತಾತ್ಪರ್ಯ:
ಕಂಟಕನಾದ ಒಬ್ಬನನ್ನು ಕುಲಕ್ಕಾಗಿ ತ್ಯಜಿಸಬೇಕು. ಒಂದು ಊರನ್ನು ಉಳಿಸಲು ಒಂದು ವಂಶವನ್ನು ತ್ಯಜಿಸಬೇಕು. ದೇಶವನ್ನುಳಿಸುವುದಕ್ಕಾಗಿ ಒಂದು ಊರನ್ನೇ ಕೆಡಿಸಬೇಕು. ಆತ್ಮೋದ್ಧಾರಕ್ಕಾಗಿ ಭೂಮಿಯ ಸಮಸ್ತವನ್ನೂ ತ್ಯಜಿಸಬೇಕು ಎಂದು ಸುಭಾಷಿತವಿದೆ. ಇದನ್ನರಿತು ಇವನನ್ನು ದೂರಕ್ಕೆಸೆದು ಬಿಟ್ಟುಬಿಡು ಎಂದು ವಿದುರನು ಹೇಳಿದನು.
ಅರ್ಥ:
ಕುಲ: ವಂಶ; ಕಂಟಕ: ತೊಂದರೆ; ಕಳೆ: ನಾಶಮಾಡು; ಊರು: ಪುರ; ಅಳಿವು: ನಾಶ; ಕುಲ: ವಂಶ; ದೇಶ: ರಾಷ್ಟ್ರ; ಕೆಡಿಸು: ನಾಶಮಾಡು; ಇಳೆ: ಭೂಮಿ; ಅಖಿಳ: ಎಲ್ಲಾ; ಬಿಸುಡು: ಹೊರಹಾಕು; ಉಳಿವು: ಜೀವಿಸು; ವಚನ: ಮಾತು; ಬಿಸುಟು: ಹೊರಹಾಕು;
ಪದವಿಂಗಡಣೆ:
ಕುಲಕೆ +ಕಂಟಕನಾದಡ್+ಒಬ್ಬನ
ಕಳೆವುದ್+ಊರ್+ಅಳಿವಿನಲಿ +ಕಳೆವುದು
ಕುಲವನೊಂದನು+ ದೇಶದ್+ಅಳಿವಿನಲ್+ಊರ +ಕೆಡಿಸುವುದು
ಇಳೆಯನ್+ಅಖಿಳವ +ಬಿಸುಡುವುದು +ತ
ನ್ನುಳಿವ +ಮಾಡುವುದೆಂಬ +ವಚನವ
ತಿಳಿವುದ್+ಈತನ+ ಬಿಸುಟು +ಕಳೆ +ನೀನೆಂದನಾ+ ವಿದುರ
ಅಚ್ಚರಿ:
(೧) ಸುಭಾಷಿತದ ನುಡಿಯನ್ನು ವಿವರಿಸಿರುವ ಪರಿ
(೨) ಕಳೆವು – ೨ ಸಾಲಿನ ಮೊದಲ ಮತ್ತು ಕೊನೆಯ ಪದ