ಹೊಯ್ದು ಬಿಡಿಸಿದಡನಿಲಜನ ಮೇ
ಲ್ವಾಯ್ದನವನಿಪನೊಡ್ಡಿ ಗದೆಯಲಿ
ಕಾಯ್ದು ತಿವಿದನು ಭೀಮಸೇನನ ನೃಪತಿ ವಂಚಿಸಿದ
ಮೆಯ್ದೆಗೆದಡಿಟ್ಟಣಿಸಿ ಪವನಜ
ಹೊಯ್ದಡೊಲೆದನು ಭೂಪನಿಬ್ಬರ
ಕಯ್ದುಕಾರತನಕ್ಕೆ ಬೆರಗಾದುದು ಸುರಸ್ತೋಮ (ಗದಾ ಪರ್ವ, ೬ ಸಂಧಿ, ೨೧ ಪದ್ಯ)
ತಾತ್ಪರ್ಯ:
ಭೀಮನ ಹೊಯ್ಲನ್ನು ತಪ್ಪಿಸಿ ಅವನ ಮೇಲೆ ಕೌರವನು ಹೊಯ್ದನು. ಭೀಮನು ಗದೆಯನ್ನು ಅಡ್ಡಹಿದಿದು, ಕೌರವನನ್ನು ಹೊಯ್ದನು. ಭೀಮನ ಹೊಡೆತವನ್ನು ಕೌರವನು ತಪ್ಪಿಸಿಕೊಂಡನು. ಕೌರವನು ಸರಿದೊಡನೆ ಭೀಮನು ನುಗ್ಗಿ ಹೊಯ್ದನು. ಕೌರವನು ಪಕ್ಕಕ್ಕೆ ಸರಿದು ತಪ್ಪಿಸಿಕೊಂಡನು. ಇಬ್ಬರ ಆಯುಧಪ್ರಯೋಗವನ್ನು ಕಂಡು ದೇವತೆಗಳೂ ಬೆರಗಾದರು.
ಅರ್ಥ:
ಹೊಯ್ದು: ಹೊಡೆ; ಬಿಡಿಸು: ಸಡಲಿಸು; ಅನಿಲಜ: ಭೀಮ; ಅವನಿಪ: ರಾಜ; ಒಡ್ಡು: ಅಡ್ಡ ಗಟ್ಟೆ; ಗದೆ: ಮುದ್ಗರ; ಕಾಯು: ತಾಳು; ತಿವಿ: ಚುಚ್ಚು; ನೃಪತಿ: ರಾಜ; ವಂಚಿಸು: ತಪ್ಪಿಸಿಕೊಳ್ಳು; ಇಟ್ಟಣಿಸು: ದಟ್ಟವಾಗು; ಪವನಜ: ಭೀಮ; ಒಲೆ; ಭೂಪ: ರಾಜ; ಕಯ್ದುಕಾರ: ಹೋರಾಟ; ಬೆರಗಾಗು: ಆಶ್ಚರ್ಯ; ಸುರ: ದೇವತೆ; ಸ್ತೋಮ: ಗುಂಪು;
ಪದವಿಂಗಡಣೆ:
ಹೊಯ್ದು+ ಬಿಡಿಸಿದಡ್+ಅನಿಲಜನ +ಮೇ
ಲ್ವಾಯ್ದನ್+ಅವನಿಪನ್+ಒಡ್ಡಿ+ ಗದೆಯಲಿ
ಕಾಯ್ದು +ತಿವಿದನು +ಭೀಮಸೇನನ+ ನೃಪತಿ+ ವಂಚಿಸಿದ
ಮೆಯ್ದೆಗೆದಡ್+ಇಟ್ಟಣಿಸಿ +ಪವನಜ
ಹೊಯ್ದಡ್+ಒಲೆದನು +ಭೂಪನ್+ಇಬ್ಬರ
ಕಯ್ದುಕಾರತನಕ್ಕೆ+ ಬೆರಗಾದುದು +ಸುರಸ್ತೋಮ
ಅಚ್ಚರಿ:
(೧) ಅನಿಲಜ, ಪವನಜ, ಭೀಮಸೇನ – ಭೀಮನನ್ನು ಕರೆದ ಪರಿ
(೨) ಅವನಿಪ, ನೃಪತಿ, ಭೂಪ – ಕೌರವನನ್ನು ಕರೆದ ಪರಿ