ಪದ್ಯ ೪೪: ಕರ್ಣನೇಕೆ ಮೌನದಿಂದ ಹಿಮ್ಮೆಟ್ಟಿದನು?

ಧನುವನಿಕ್ಕಡಿಗಳೆದು ರಿಪು ಸೂ
ತನ ಶಿರವ ಹರಿಯೆಸಲು ಸಾರಥಿ
ತನವ ತಾನೇ ಮಾಡುತಿದಿರಾದನು ಕೃಪಾಣದಲಿ
ಕನಲಿ ಖಡ್ಗವ ಮುರಿಯೆಸಲು ಮು
ಮ್ಮೊನೆಯ ಶೂಲದಲಿಟ್ಟನಂತದ
ನನಿಲಸುತ ಖಂಡಿಸಲು ಮುರಿದನು ಮೋನದಲಿ ಕರ್ಣ (ದ್ರೋಣ ಪರ್ವ, ೧೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ಭೀಮನು ಕರ್ನನ ಧನುಸ್ಸನ್ನು ಎರಡು ತುಂಡಾಗಿ ಮುರಿದು, ಸಾರಥಿಯ ತಲೆ ಹಾರಿ ಹೋಗುವಂತೆ ಹೊಡೆಯಲು, ತಾನೇ ಸಾರಥಿತನವನ್ನು ಮಾಡುತ್ತಾ ಕರ್ಣನು ಕತ್ತಿಯನ್ನು ಹಿಡಿದು ಬರಲು, ಭೀಮನು ಅದನ್ನು ತುಂಡರಿಸಿದನು. ತ್ರಿಶೂಲವನ್ನು ಕರ್ಣನು ಪ್ರಯೋಗಿಸಲು, ಭೀಮನು ಅದನ್ನು ತುಂಡುಮಾಡಿದನು. ಕರ್ಣನು ಮೌನದಿಂದ ಹಿಮ್ಮೆಟ್ಟಿದನು.

ಅರ್ಥ:
ಧನು: ಬಿಲ್ಲು; ಇಕ್ಕಡಿ: ಎರಡೂ ಬದಿ; ರಿಪು: ವೈರಿ; ಸೂತ: ಸಾರಥಿ; ಶಿರ: ತಲೆ; ಹರಿ: ಸೀಳು; ಸಾರಥಿ: ಸೂತ; ಇದಿರು: ಎದುರು; ಕೃಪಾಣ: ಕತ್ತಿ, ಖಡ್ಗ; ಕನಲು: ಬೆಂಕಿ, ಉರಿ; ಖಡ್ಗ: ಕತ್ತಿ; ಮುರಿ: ಸೀಳು; ಎಸು: ಬಾಣ ಪ್ರಯೋಗ ಮಾಡು; ಮುಮ್ಮೊನೆ: ಮೂರು ಚೂಪಾದ ತುದಿಯುಳ್ಳ; ಶೂಲ: ತ್ರಿಶೂಲ; ಅನಿಲಸುತ: ಭೀಮ, ವಾಯುಪುತ್ರ; ಖಂಡಿಸು: ಕಡಿ, ಕತ್ತರಿಸು; ಮುರಿ: ಸೀಳು; ಮೋನ: ಮೌನ;

ಪದವಿಂಗಡಣೆ:
ಧನುವನ್+ಇಕ್ಕಡಿಗಳೆದು +ರಿಪು +ಸೂ
ತನ +ಶಿರವ +ಹರಿ+ಎಸಲು +ಸಾರಥಿ
ತನವ+ ತಾನೇ +ಮಾಡುತ್+ಇದಿರಾದನು +ಕೃಪಾಣದಲಿ
ಕನಲಿ +ಖಡ್ಗವ +ಮುರಿ+ಎಸಲು +ಮು
ಮ್ಮೊನೆಯ +ಶೂಲದಲಿಟ್ಟ್+ಅನಂತದನ್
ಅನಿಲಸುತ +ಖಂಡಿಸಲು +ಮುರಿದನು +ಮೋನದಲಿ +ಕರ್ಣ

ಅಚ್ಚರಿ:
(೧) ತಾನೇ ರಥವನ್ನೋಡಿಸಿದ ಎಂದು ಹೇಳುವ ಪರಿ – ಸಾರಥಿ ತನವ ತಾನೇ ಮಾಡುತಿದಿರಾದನು ಕೃಪಾಣದಲಿ

ಪದ್ಯ ೩೩: ಗಂಧರ್ವ ಸೈನ್ಯದವರು ಹೇಗೆ ಗರ್ಜಿಸಿದರು?

ಗಿಳಿಯ ಹಿಂಡಿನ ಮೇಲೆ ಗಿಡುಗನ
ಬಳಗ ಕವಿವಂದದಲಿ ಸೂಟಿಯೊ
ಳಳವಿಗೊಡ್ಡಿನ ಚಾತುರಂಗವನಿಕ್ಕಡಿಯ ಮಾಡಿ
ಎಲೆ ಸುಯೋಧನ ಬೀಳು ಕೈದುವ
ನಿಳುಹಿ ಖೇಚರರಾಯನಂಘ್ರಿಯೊ
ಳೆಲವೊ ರವಿಸುತ ಹೋಗೆನುತ ಹೊಕ್ಕಿರಿದರುರವಣಿಸಿ (ಅರಣ್ಯ ಪರ್ವ, ೨೦ ಸಂಧಿ, ೩೩ ಪದ್ಯ)

ತಾತ್ಪರ್ಯ:
ಗಿಳಿಗಳ ಹಿಂಡಿನ ಮೇಲೆ ಗಿಡುಗಗಳು ಮುತ್ತುವಂತೆ, ಚತುರಂಗ ಸೈನ್ಯವನ್ನು ತುಂದು ತುಂಡಾಗಿ ಕತ್ತರಿಸಿದರು. ಬಳಿಕ ಎಲೋ ಸುಯೋಧನ ಆಯುಧವನ್ನು ಕೆಳಗಿಳಿಸಿ ಗಂಧರ್ವ ರಾಜನಿಗೆ ಶರಣಾಗು, ಎಲವೋ ಕರ್ಣ ನೀನು ಸಹ ಶರಣಾಗಲು ತೆರಳು ಎಂದು ಗರ್ಜಿಸಿದರು.

ಅರ್ಥ:
ಗಿಳಿ: ಶುಕ; ಹಿಂಡು: ಗುಂಪು; ಗಿಡುಗ: ಒಂದು ಬಗೆಯ ಹಕ್ಕಿ; ಬಳಗ: ಗುಂಪು, ಜೊತೆಯವರು; ಕವಿ: ಆವರಿಸು; ಸೂಟಿ: ವೇಗ, ರಭಸ; ಅಳವಿ: ಶಕ್ತಿ; ಗೊಡ್ಡು: ನಿಷ್ಫಲತೆ, ಅಂತಸ್ಸಾರವಿಲ್ಲದಿರುವುದು; ಚಾತುರಂಗ: ಚತುರಂಗ ಸೈನ್ಯ; ಇಕ್ಕಡಿ: ಕತ್ತರಿಸು; ಬೀಳು: ಎರಗು; ಕೈದು: ಆಯುಧ; ಇಳುಹಿ: ಕೆಳಗಿಳಿಸು; ಖೇಚರ: ಗಂಧರ್ವ; ರಾಯ: ರಾಜ; ಅಂಘ್ರಿ: ಪಾದ; ರವಿಸುತ: ಸೂರ್ಯನ ಮಗ (ಕರ್ಣ); ಹೋಗು: ತೆರಳು; ಹೊಕ್ಕಿರಿ: ಗರ್ಜಿಸು; ಉರವಣಿಸು: ಉತ್ಸಾಹದಿಂದಿರು;

ಪದವಿಂಗಡಣೆ:
ಗಿಳಿಯ +ಹಿಂಡಿನ +ಮೇಲೆ +ಗಿಡುಗನ
ಬಳಗ +ಕವಿವಂದದಲಿ+ ಸೂಟಿಯೊಳ್
ಅಳವಿಗೊಡ್ಡಿನ +ಚಾತುರಂಗವನ್+ಇಕ್ಕಡಿಯ +ಮಾಡಿ
ಎಲೆ +ಸುಯೋಧನ +ಬೀಳು +ಕೈದುವ
ನಿಳುಹಿ +ಖೇಚರರಾಯನ್+ಅಂಘ್ರಿಯೊಳ್
ಎಲವೊ +ರವಿಸುತ+ ಹೋಗೆನುತ +ಹೊಕ್ಕಿರಿದರ್+ಉರವಣಿಸಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಿಳಿಯ ಹಿಂಡಿನ ಮೇಲೆ ಗಿಡುಗನ ಬಳಗ ಕವಿವಂದದಲಿ