ಪದ್ಯ ೧: ದುರ್ಯೋಧನನ ಪರಿಸ್ಥಿತಿ ಹೇಗಿತ್ತು?

ಕೇಳು ಜನಮೇಜಯ ಧರಿತ್ರೀ
ಪಾಲ ಕುರುಪತಿ ಹೆಗಲ ಗದೆಯಲಿ
ಕಾಲುನಡೆಯಲಿ ಹಾಯ್ದನೇಕಾಂಗದಲಿ ಕಳನೊಳಗೆ
ಆಳ ಕಾಣೆನು ಛತ್ರ ಚಮರದ
ವೀಳೆಯದ ವಿಸ್ತಾರವಿಭವವ
ಬೀಳುಕೊಟ್ಟನು ನಡೆದನಿಂದ್ರದಿಶಾಭಿಮುಖವಾಗಿ (ಗದಾ ಪರ್ವ, ೩ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಕೌರವನು ಹೆಗಲಮೇಲೆ ಗದೆಯನ್ನಿಟ್ಟುಕೊಂಡು ಏಕಾಂಗಿಯಾಗಿ ರಣರಂಗದಲ್ಲಿ ಕಾಲು ನಡೆಯಿಂದ ಮುಂದುವರೆದನು. ಯಾವ ಪರಿವಾರದವರೂ ಅವನ ಸುತ್ತ ಕಾಣಲಿಲ್ಲ. ಛತ್ರ, ಚಾಮರ, ವೀಳೆಯ ಮೊದಲಾದ ವೈಭವಗಳಿಂದ ವಂಚಿತನಾಗಿ ಪೂರ್ವ ದಿಕ್ಕಿನ ಕಡೆಗೆ ನಡೆದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಹೆಗಲು: ಭುಜ; ಗದೆ: ಮುದ್ಗರ; ಕಾಲು: ಪಾದ; ನಡೆ: ಚಲಿಸು; ಹಾಯ್ದು: ಚಲಿಸು; ಏಕಾಂಗ: ಒಬ್ಬನೆ; ಕಳ: ಯುದ್ಧಭೂಮಿ; ಆಳ: ಸೇವಕ; ಕಾಣು: ತೋರು; ಛತ್ರ: ಕೊಡೆ; ಚಮರ: ಚಾಮರ; ವೀಳೆ: ತಾಂಬುಲ; ವಿಸ್ತಾರ: ಅಗಲ; ವಿಭವ: ಸಿರಿ, ಸಂಪತ್ತು; ಬೀಳುಕೊಡು: ತೆರಳು; ನಡೆ: ಚಲಿಸು; ಇಂದ್ರದಿಶ: ಪೂರ್ವದಿಕ್ಕು; ಅಭಿಮುಖ: ಎದುರು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕುರುಪತಿ +ಹೆಗಲ +ಗದೆಯಲಿ
ಕಾಲುನಡೆಯಲಿ +ಹಾಯ್ದನ್+ಏಕಾಂಗದಲಿ +ಕಳನೊಳಗೆ
ಆಳ +ಕಾಣೆನು +ಛತ್ರ +ಚಮರದ
ವೀಳೆಯದ +ವಿಸ್ತಾರ+ವಿಭವವ
ಬೀಳುಕೊಟ್ಟನು+ ನಡೆದನ್+ಇಂದ್ರ+ದಿಶ+ಅಭಿಮುಖವಾಗಿ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಕುರುಪತಿ ಹೆಗಲ ಗದೆಯಲಿ ಕಾಲುನಡೆಯಲಿ ಹಾಯ್ದನೇಕಾಂಗದಲಿ ಕಳನೊಳಗೆ
(೨) ವೈಭವ ವಿಲ್ಲದ ಸ್ಥಿತಿ – ವಿಸ್ತಾರವಿಭವವ ಬೀಳುಕೊಟ್ಟನು