ಪದ್ಯ ೧೩: ಯುದ್ಧಕ್ಕೆ ಯಾರು ಬಂದರು?

ಎದ್ದುದೀ ಕಟಕದಲಿ ಬಲ ಮಿಂ
ಡೆದ್ದು ಸುಭಟರು ಸಮರಭೂಮಿಯ
ಹೊದ್ದಿದರು ಝಳಪಿಸುವಡಾಯ್ದದ ಹೊಗರ ಹೊಳಹುಗಳ
ಅದ್ದುದತಳಕೆ ಅವನಿಯೆನೆ ಹೊದ
ರೆದ್ದು ನಡೆದುದು ದಂತಿಘಟೆ ಬರು
ತಿದ್ದುದಗಣಿತ ರಥ ಪದಾತಿಗಳಾಹವಾಂಗಣಕೆ (ದ್ರೋಣ ಪರ್ವ, ೯ ಸಂಧಿ, ೧೩ ಪದ್ಯ)

ತಾತ್ಪರ್ಯ:
ಈ ಸೈನ್ಯದಲ್ಲೂ ಸುಭಟರು ಉಬ್ಬೆದ್ದು ರಣಭೂಮಿಗಿಳಿದರು. ಅವರು ಝಳಪಿಸುವ ಆಯುಧಗಳ ಕಾಂತಿ ಕಣ್ಣು ಕುಕ್ಕುತ್ತಿತ್ತು. ಭೂಮಿಯು ಅತಳಕ್ಕೆ ಕುಸಿಯಿತೋ ಎಂಬಮ್ತೆ ಆನೆಗಳು ಬಂದವು. ಲೆಕ್ಕವಿಲ್ಲದಷ್ಟು ರಥಗಳು ಪದಾತಿಗಳು ಯುದ್ಧಕ್ಕೆ ಬಂದರು.

ಅರ್ಥ:
ಎದ್ದು: ಮೇಲೇಳು; ಕಟಕ: ಯುದ್ಧ; ಬಲ: ಶಕ್ತಿ; ಮಿಂಡೆದ್ದು: ಉತ್ಸಾಹದಿಂದ ಉಬ್ಬಿ; ಸುಭಟ: ಪರಾಕ್ರಮಿ; ಸಮರಭೂಮಿ: ಯುದ್ಧಭೂಮಿ; ಹೊದ್ದು: ಸೇರು; ಝಳ: ಶಾಖ; ಹೊಗರು: ಕಾಂತಿ, ಪ್ರಕಾಶ; ಹೊಳಹು: ಪ್ರಕಾಶ; ಅವನಿ: ಭೂಮಿ; ಹೊದರು: ಗುಂಪು; ನಡೆದು: ಚಲಿಸು; ದಂತಿಘಟೆ: ಆನೆಯ ಗುಂಪು; ಬರುತಿದ್ದು: ಆಗಮಿಸು; ಅಗಣಿತ: ಅಸಂಖ್ಯಾತ; ರಥ: ಬಂಡಿ; ಪದಾತಿ: ಕಾಲಾಳು; ಆಹವ: ಯುದ್ಧ; ಅಂಗಣ: ಅಂಗಳ;

ಪದವಿಂಗಡಣೆ:
ಎದ್ದುದ್+ಈ+ ಕಟಕದಲಿ +ಬಲ +ಮಿಂ
ಡೆದ್ದು +ಸುಭಟರು +ಸಮರ+ಭೂಮಿಯ
ಹೊದ್ದಿದರು +ಝಳಪಿಸುವಡ್+ಆಯ್ದದ +ಹೊಗರ +ಹೊಳಹುಗಳ
ಅದ್ದುದ್+ಅತಳಕೆ +ಅವನಿಯೆನೆ +ಹೊದ
ರೆದ್ದು +ನಡೆದುದು +ದಂತಿಘಟೆ +ಬರು
ತಿದ್ದುದ್+ಅಗಣಿತ +ರಥ +ಪದಾತಿಗಳ್+ಆಹವಾಂಗಣಕೆ

ಅಚ್ಚರಿ:
(೧) ಕಟಕ, ಆಹವ – ಸಮನಾರ್ಥಕ ಪದ