ಪದ್ಯ ೪೨: ಯಾರನ್ನು ಸೇವಕನಾಗಿರಿಸುವೆ ಎಂದು ಭೀಷ್ಮನು ಹೇಳಿದನು?

ಕೇಳಿದೆವು ಹಿಂದಾದ ಖೇಚರ
ರೂಳಿಗವನಡಹಾಯ್ದು ನಿಮ್ಮುವ
ನೋಲಯಿಸಿದಂದವನು ನಿನಗದರಿಂದ ಪರಿಭವವ
ತಾಳದಂತಿರಲವರ ಕರೆಸುವೆ
ವೇಳು ಭೀಮಾರ್ಜುನರ ನಿನಗಿ
ನ್ನಾಳು ಕೆಲಸದೊಳಿರಿಸಿ ನಡೆಸುವೆವೆಂದನಾ ಭೀಷ್ಮ (ಅರಣ್ಯ ಪರ್ವ, ೨೨ ಸಂಧಿ, ೪೨ ಪದ್ಯ)

ತಾತ್ಪರ್ಯ:
ಭೀಷ್ಮನು ದುರ್ಯೋಧನನ ಮಾತನ್ನು ಕೇಳಿ ಆತನನ್ನು ಸಂತೈಸಲೆಂದು, ನೀನು ಗಂಧರ್ವರಿಗೆ ಸೋತುದನ್ನು ಅರ್ಜುನನು ನಿಮ್ಮನ್ನು ಬಿಡಿಸಿಕೊಂಡು ಬಂದುದನ್ನು ನಿನಗೆ ಅದರಿಂದಾದ ಅಪಮಾನವನ್ನು ಕೇಳಿದ್ದೇನೆ. ನೀನು ನಿರಶನವನ್ನು ಬಿಟ್ಟೇಳು. ಭೀಮಾರ್ಜುನರನ್ನು ಕರೆಸಿ ನಿನಗೆ ಆಳುಗಳಾಗಿರುವಂತೆ ನೇಮಿಸುತ್ತೇನೆ ಎಂದನು.

ಅರ್ಥ:
ಕೇಳು: ಆಲಿಸು; ಹಿಂದೆ: ಪೂರ್ವ; ಖೇಚರ: ಗಂಧರ್ವರು; ಊಳಿಗ: ಕೆಲಸ, ಕಾರ್ಯ; ಅಡಹಾಯ್ದು: ಇದಿರಿಸು, ಅಡ್ಡಬರು; ಓಲಯಿಸು: ಉಪಚರಿಸು; ಪರಿಭವ: ಸೋಲು; ತಾಳು: ಸೈರಿಸು; ಕರೆಸು: ಬರೆಮಾಡು; ಆಳು: ಸೇವಕ; ನಡೆಸು: ಚಲಿಸು, ನಡಗೆ, ಆಚರಿಸು;

ಪದವಿಂಗಡಣೆ:
ಕೇಳಿದೆವು +ಹಿಂದಾದ +ಖೇಚರರ್
ಊಳಿಗವನ್+ಅಡಹಾಯ್ದು +ನಿಮ್ಮುವನ್
ಓಲಯಿಸಿದ್+ಅಂದವನು +ನಿನಗ್+ಅದರಿಂದ +ಪರಿಭವವ
ತಾಳದಂತಿರಲ್+ಅವರ +ಕರೆಸುವೆವ್
ಏಳು +ಭೀಮಾರ್ಜುನರ +ನಿನಗಿನ್
ಆಳು +ಕೆಲಸದೊಳಿರಿಸಿ+ ನಡೆಸುವೆವ್+ಎಂದನಾ+ ಭೀಷ್ಮ

ಅಚ್ಚರಿ:
(೧) ಭೀಷ್ಮರ ಓಲೈಸುವ ಪ್ರಕ್ರಿಯೆ – ಆಳು ಕೆಲಸದೊಳಿರಿಸಿ ನಡೆಸುವೆವೆಂದನಾ ಭೀಷ್ಮ