ಪದ್ಯ ೯೭: ಇಂದ್ರನು ಯಾರನ್ನು ಬರೆಮಾಡಲು ಆಜ್ಞಾಪಿಸಿದನು?

ಅರಸಕೇಳಾರೋಗಿಸಿದರಿ
ಬ್ಬರು ಸಮೇಳದಲಿದ್ದು ಬೇರೊಂ
ದರಮನೆಗೆ ಕಳುಹಿದನು ಪವಡಿಸುವೊಡೆ ನಿಜಾತ್ಮಜನ
ಸುರಪನಿತ್ತಲು ಚಿತ್ರಸೇನನ
ಕರೆಸಿದನು ಫಲುಗುಣನ ಭಾವವ
ನರುಹಿದನು ನಮ್ಮೂರ್ವಶಿಯ ಕಳುಹೆಂದು ನೇಮಿಸಿದ (ಅರಣ್ಯ ಪರ್ವ, ೮ ಸಂಧಿ, ೯೭ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಓಲಗವು ಮುಗಿದ ಮೇಲೆ ಅರ್ಜುನ ಮತ್ತು ಇಂದ್ರರಿಬ್ಬರು ಒಟ್ಟಿಗೆ ಊಟವನ್ನು ಮಾಡಿದರು, ಮಲಗಲು ಅರ್ಜುನನನ್ನು ಬೇರೊಂದು ಅರಮನೆಗೆ ಕಳಿಸಿದನು. ಅರ್ಜುನನು ಮಲಗಲು ಹೋದ ಮೇಲೆ ಇಂದ್ರನು ಚಿತ್ರಸೇನನನ್ನು ಕರೆಸಿ, ಅರ್ಜುನನು ಊರ್ವಶಿಯನ್ನು ಮೋಹಿಸಿದ್ದಾನೆ, ನಮ್ಮ ಊರ್ವಶಿಯನ್ನು ಅವನ ಬಳಿಗೆ ಕಳಿಸು ಎಂದು ಅಪ್ಪಣೆ ಮಾಡಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಆರೋಗಿಸು: ಸೇವಿಸು; ಮೇಳ: ಕೂಡು, ಗುಂಪು; ಬೇರೆ: ಅನ್ಯ; ಅರಮನೆ: ಆಲಯ; ಕಳುಹು: ಬೀಳ್ಕೊಡು; ಪವಡಿಸು: ಮಲಗು; ಆತ್ಮಜ: ಮಗ; ಸುರಪ: ಇಂದ್ರ; ಕರೆಸು: ಬರೆಮಾಡು; ಭಾವ: ಮನಸ್ಸು; ಅರುಹು: ತಿಳಿದು; ಕಳುಹು: ಬರೆಮಾಡು; ನೇಮಿಸು: ಆಜ್ಞಾಪಿಸು;

ಪದವಿಂಗಡಣೆ:
ಅರಸ+ಕೇಳ್+ಆರೋಗಿಸಿದರ್
ಇಬ್ಬರು +ಸಮೇಳದಲಿದ್ದು +ಬೇರೊಂದ್
ಅರಮನೆಗೆ +ಕಳುಹಿದನು +ಪವಡಿಸುವೊಡೆ +ನಿಜಾತ್ಮಜನ
ಸುರಪನ್+ಇತ್ತಲು +ಚಿತ್ರಸೇನನ
ಕರೆಸಿದನು +ಫಲುಗುಣನ +ಭಾವವನ್
ಅರುಹಿದನು +ನಮ್ಮೂರ್ವಶಿಯ +ಕಳುಹೆಂದು +ನೇಮಿಸಿದ

ಅಚ್ಚರಿ:
(೧) ಅರಸ, ಅರಮನೆ, ಅರುಹು, ಆರೋಗಿಸು – ಪದಗಳ ಬಳಕೆ