ಪದ್ಯ ೧೮: ಕೌರವನು ಭೀಮನಿಗೆ ಏನೆಂದು ಉತ್ತರಿಸಿದನು?

ಸಾಯಲಾಗದೆ ಸುಭಟರಾಚಂ
ದ್ರಾಯತವೆ ತನು ವಿಧಿಯ ಟಿಪ್ಪಣ
ದಾಯುಷವು ತೀರಿದಡೆ ಸಾವರು ನಿನ್ನಲೇನಹುದು
ಕಾಯಲಳವೇ ನಿನಗೆ ಮುನಿದಡೆ
ನೋಯಿಸುವಡಳವಲ್ಲ ಫಡ ದೈ
ವಾಯತಕೆ ನೀನೇಕೆ ಬೆರತಿಹೆಯೆಂದನಾ ಭೂಪ (ಗದಾ ಪರ್ವ, ೬ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕೌರವನು ಭೀಮನಿಗೆ ಉತ್ತರಿಸುತ್ತಾ, ಎಲೈ ಭೀಮ, ವೀರರು ಸಾಯಬಾರದೇ? ಜೀವನವು ಸೂರ್ಯ ಚಂದ್ರರಿರುವವರೆಗೂ ಇದ್ದೀತೇ? ಆಯುಷ್ಯ ತೀರಿದರೆ ಸಾಯುತ್ತಾರೆ. ವಿಧಿಯು ಒಬ್ಬನ ಆಯುಷ್ಯವಿಷ್ಟೇ ಎಂದು ಟಿಪ್ಪಣಿ ಬರೆಯುತ್ತದೆ. ಸಾಯುವವರನ್ನು ನೀನು ಉಳಿಸಬಲ್ಲೆಯಾ? ದೈವೇಚ್ಛೆಯಂತೆ ಎಲ್ಲವೂ ನಡೆಯುತ್ತದ, ನಾನು ಮಾಡಿದೆನೆಂಬ ಅಹಂಕಾರವೇಕೆ ಎಂದು ಹೇಳಿದನು.

ಅರ್ಥ:
ಸಾಯಲು: ಮರಣ ಹೊಂದಲು; ಸುಭಟ: ವೀರ; ಆಚಂದ್ರಾಯತ: ಸೂರ್ಯ ಚಂದ್ರರಿರುವ ವರೆಗೂ; ತನು: ದೇಹ; ವಿಧಿ: ನಿಯಮ; ಟಿಪ್ಪಣಿ: ಬರಹ; ಆಯುಷ್ಯ: ಜೀವಿತಾವಧಿ; ತೀರು: ಮುಗಿದುದು; ಸಾವು: ಮರನ; ಕಾಯಲು: ರಕ್ಷಿಸು; ಅಳವು: ಅಲ್ಲಾಡು; ಮುನಿ: ಕೋಪ; ನೋವು: ಪೆಟ್ಟು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ದೈವ: ಭಗವಮ್ತ; ಬೆರತಿ

ಪದವಿಂಗಡಣೆ:
ಸಾಯಲಾಗದೆ +ಸುಭಟರ್+ಆಚಂ
ದ್ರಾಯತವೆ +ತನು +ವಿಧಿಯ +ಟಿಪ್ಪಣದ್
ಆಯುಷವು +ತೀರಿದಡೆ +ಸಾವರು +ನಿನ್ನಲೇನಹುದು
ಕಾಯಲ್+ಅಳವೇ +ನಿನಗೆ +ಮುನಿದಡೆ
ನೋಯಿಸುವಡ್+ಅಳವಲ್ಲ +ಫಡ+ ದೈ
ವಾಯತಕೆ+ ನೀನೇಕೆ +ಬೆರತಿಹೆ+ಎಂದನಾ +ಭೂಪ

ಅಚ್ಚರಿ:
(೧) ಲೋಕ ನೀತಿ – ವಿಧಿಯ ಟಿಪ್ಪಣದಾಯುಷವು ತೀರಿದಡೆ ಸಾವರು

ಪದ್ಯ ೬೫: ಧರ್ಮಜನು ಯಾವ ಆಯುಧವನ್ನು ಹೊರತೆಗೆದನು?

ಆಯಿದನು ಶಸ್ತ್ರಾಸ್ತ್ರದಲಿ ದಿ
ವ್ಯಾಯುಧವನರೆಬಳಿದ ವರ ತಪ
ನೀಯರೇಖೆಯ ಕುಣಿವ ಗಂಟೆಯ ಹೊಳೆವ ಹೊಂಗರಿಯ
ಬಾಯಿಧಾರೆಯ ತೈಲಲೇಪನ
ದಾಯತದ ಚೌರಿಗಳ ರಿಪುಭಟ
ನಾಯುಷದ ಕಡೆವಗಲ ಭುಕ್ತಿಯ ಶಕ್ತಿಯನು ನೃಪತಿ (ಶಲ್ಯ ಪರ್ವ, ೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ತನ್ನ ಶಸ್ತ್ರಾಸ್ತ್ರಗಳಲ್ಲಿ ಒಂದು ದಿವ್ಯಾಯುಧವನ್ನು ಆರಿಸಿ ತೆಗೆದನ್. ಸುಡುತ್ತಿರುವ ರೇಖೆಯಿಂದೊಡಗೂಡಿದ ಗಂಟೆಗಳಿರುವ, ಹೊಳೆಯುವ ಬಂಗಾರದ ಗರಿಗಳುಳ್ಳ, ಬಾಯಿಧಾರೆಗೆ ತೈಲವನ್ನು ಹಚ್ಚಿದ, ಚೌರಿಗಳಿರುವ ಶತ್ರುವಿನ ಆಯುಷ್ಯದ ಕಡೆಯ ಹಗಲಾದ ಅವನನ್ನು ನುಂಗಬಲ್ಲ ಶಕ್ತ್ಯಾಯುಧವನ್ನು ತೆಗೆದನು.

ಅರ್ಥ:
ಆಯಿ: ಶೋಧಿಸು, ಹೊರತೆಗೆ; ಶಸ್ತ್ರ: ಆಯುಧ; ದಿವ್ಯ: ಶ್ರೇಷ್ಠ; ಆಯುಧ: ಅಸ್ತ್ರ; ಅರೆಬಳಿ: ; ತಪನೀಯ: ಸುಡುತ್ತಿರುವ; ರೇಖೆ: ಗೆರೆ, ಗೀಟು; ಕುಣಿ: ನರ್ತಿಸು; ಗಂಟೆ: ಕಿರುಗೆಜ್ಜೆ; ಹೊಳೆ: ಪ್ರಕಾಶಿಸು; ಹೊಂಗರಿ: ಚಿನ್ನದ ಗರಿ (ರೆಕ್ಕೆ); ಧಾರೆ: ಮಳೆ; ತೈಲ: ಎಣ್ಣೆ; ಲೇಪನ: ಹಚ್ಚು; ಆಯತ: ನೆಲೆ, ವಿಶಾಲವಾದ; ಚೌರಿ: ಚೌರಿಯ ಕೂದಲು; ರಿಪು: ವೈರಿ; ಭಟ: ಸೈನಿಕ; ಆಯುಷ: ಜೀವಿತದ ಅವಧಿ; ಕಡೆ: ಕೊನೆ; ಭುಕ್ತಿ: ಸುಖಾನುಭವ, ಭೋಗ; ಶಕ್ತಿ: ಬಲ; ನೃಪತಿ: ರಾಜ;

ಪದವಿಂಗಡಣೆ:
ಆಯಿದನು+ ಶಸ್ತ್ರಾಸ್ತ್ರದಲಿ +ದಿ
ವ್ಯಾಯುಧವನ್+ಅರೆಬಳಿದ +ವರ +ತಪ
ನೀಯ+ರೇಖೆಯ +ಕುಣಿವ +ಗಂಟೆಯ +ಹೊಳೆವ +ಹೊಂಗರಿಯ
ಬಾಯಿಧಾರೆಯ +ತೈಲ+ಲೇಪನದ್
ಆಯತದ +ಚೌರಿಗಳ +ರಿಪು+ಭಟನ್
ಆಯುಷದ +ಕಡೆವಗಲ+ ಭುಕ್ತಿಯ +ಶಕ್ತಿಯನು +ನೃಪತಿ

ಅಚ್ಚರಿ:
(೧) ಆಯುಧ, ಶಸ್ತ್ರ – ಸಾಮ್ಯಾರ್ಥ ಪದ
(೨) ಆಯುಧದ ವರ್ಣನೆ – ತಪನೀಯರೇಖೆಯ ಕುಣಿವ ಗಂಟೆಯ ಹೊಳೆವ ಹೊಂಗರಿಯ

ಪದ್ಯ ೩೭: ಕೃಷ್ಣನು ಯಾವ ಉಪಾಯವನ್ನು ಹೇಳಿದನು?

ವಾಯಕಂಜದಿರಂಜದಿರಿ ಫಡ
ಬಾಯ ಬಿಟ್ಟರೆ ಹೋಹುದೇ ನಿ
ಮ್ಮಾಯುಷಕೆ ಹೊಣೆ ತಾನು ಹೇಳಿತ ಮಾಡಿ ಬೇಗದಲಿ
ಆಯುಧಂಗಳ ಬಿಸುಟು ಕರಿ ರಥ
ಜಾಯಿಲಂಗಳನಿಳಿದು ಬದುಕುವು
ಪಾಯವೆಂದಸುರಾರಿ ಸಾರಿದನಂದು ಕೈ ನೆಗಹಿ (ದ್ರೋಣ ಪರ್ವ, ೧೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಕೈಯೆತ್ತಿ, ಈ ಉರಿ ಹೊಗೆಗಳಿಗೆ ಮೋಸ ಹೋಗಬೇಡಿರಿ, ಬಾಯಿಬಿಟ್ಟು ಹಲುಬಿದರೆ ಇದು ಹೋಗುವುದಿಲ್ಲ. ನಿಮ್ಮ ಆಯುಷ್ಯಕ್ಕೆ ನಾನು ಜವಾಬ್ದಾರಿ ಹೊತ್ತಿದ್ದೇನೆ. ಹೇಳುವುದನ್ನು ಕೂಡಲೇ ಮಾಡಿರಿ, ಆಯುಧಗಳನ್ನು ಬಿಸುಡಿರಿ. ಆನೆ, ಕುದುರೆ ರಥಗಳಿಂದ ಇಳಿದುಬಿಡಿ. ಬದುಕಲು ಇರುವುದಿದೊಂದೇ ಉಪಾಯ ಎಂದು ಘೋಷಿಸಿದನು.

ಅರ್ಥ:
ವಾಯ: ಮೋಸ, ಕಪಟ, ಕಾರಣ; ಅಂಜು: ಹೆದರು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಬಿಡು: ಅಗಲಿಸು; ಹೋಹು: ತೆರಳು; ಆಯುಷ: ಜೀವಿತಾವಧಿ; ಹೊಣೆ: ಜವಾಬ್ದಾರಿ; ಹೇಳು: ತಿಳಿಸು; ಬೇಗ: ಶೀಘ್ರ; ಆಯುಧ: ಶಸ್ತ್ರ; ಬಿಸುಟು: ಹೊರಹಾಕು; ಕರಿ: ಆನೆ; ರಥ: ಬಂಡಿ; ಇಳಿ: ಕೆಳಕ್ಕೆ ನಡೆ; ಬದುಕು: ಜೀವಿಸು; ಉಪಾಯ: ಯುಕ್ತಿ, ಹಂಚಿಕೆ; ಅಸುರಾರಿ: ಕೃಷ್ಣ; ಸಾರು: ತಿಳಿಸು; ಕೈ: ಹಸ್ತ; ನೆಗಹು: ಮೇಲೆತ್ತು;

ಪದವಿಂಗಡಣೆ:
ವಾಯಕ್+ಅಂಜದಿರ್+ಅಂಜದಿರಿ+ ಫಡ
ಬಾಯ +ಬಿಟ್ಟರೆ +ಹೋಹುದೇ +ನಿಮ್ಮ್
ಆಯುಷಕೆ+ ಹೊಣೆ+ ತಾನು +ಹೇಳಿತ +ಮಾಡಿ +ಬೇಗದಲಿ
ಆಯುಧಂಗಳ +ಬಿಸುಟು +ಕರಿ+ ರಥ
ಜಾಯಿಲಂಗಳನ್+ಇಳಿದು +ಬದುಕು
ಉಪಾಯವೆಂದ್+ಅಸುರಾರಿ +ಸಾರಿದನ್+ಅಂದು +ಕೈ +ನೆಗಹಿ

ಅಚ್ಚರಿ:
(೧) ಕೃಷ್ಣನ ಅಭಯ ವಾಣಿ – ನಿಮ್ಮಾಯುಷಕೆ ಹೊಣೆ ತಾನು
(೨) ವಾಯ, ಬಾಯ, ಉಪಾಯ – ಪ್ರಾಸ ಪದಗಳು

ಪದ್ಯ ೭೭: ದ್ರೌಪದಿ ಕೀಚಕನನ್ನು ಎಲ್ಲಿಗೆ ಬರಲು ಹೇಳಿದಳು?

ಅರಿದರಾದಡೆ ನಿನ್ನ ವಂಶವ
ತರಿವರೆನ್ನವರೆಲವೊ ಕೆಲಬಲ
ನರಿಯದಂದದಿ ಬಂದು ನಾಟ್ಯದ ಗರುಡಿಯೊಳಗಿಹುದು
ನೆರೆದುದಾಯುಷ ನಿನಗೆ ಕತ್ತಲೆ
ಮರೆಯೊಳಾನೈತಹೆನು ಯೆನ್ನನು
ಮರೆದು ನೀ ಬಿಡೆಯಾದುದಾಗಲಿಯೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೭೭ ಪದ್ಯ)

ತಾತ್ಪರ್ಯ:
ದ್ರೌಪದಿಯು ಎಲೈ ಕೀಚಕ ಈ ವಿಷಯ ತಿಳಿದರೆ ನನ್ನ ಪತಿಗಳು ನಿನ್ನ ವಂಶವನ್ನೇ ಸಂಹಾರ ಮಾಡುತ್ತಾರೆ, ಆಗಿದ್ದಾಗಲಿ, ನೀನು ಈ ರಾತ್ರಿ ಯಾರಿಗೂ ತಿಳಿಯದಂತೆ ನಾಟ್ಯಮಂದಿರಕ್ಕೆ ಬಾ, ನಾನು ಕತ್ತಲೆಯಲ್ಲಿ ಅಲ್ಲಿಗೆ ಬರುತ್ತೇನೆ, ನಿನ್ನ ಆಯುಷ್ಯ ಮುಗಿದಿದೆ, ನನ್ನನ್ನು ನೀನು ಬಿಡುವುದಿಲ್ಲ, ಮರೆತಾದರೂ ಬಿಡಬಹುದು ಇಲ್ಲ ಏನಾಗುತ್ತೊ ಆಗಲಿ ಎಂದು ದ್ರೌಪದಿ ಕೀಚಕನಿಗೆ ಹೇಳಿದಳು.

ಅರ್ಥ:
ಅರಿ: ತಿಳಿ; ವಂಶ: ಕುಲ; ತರಿ: ಕಡಿ, ಕತ್ತರಿಸು; ಕೆಲಬಲ: ಅಕ್ಕಪಕ್ಕ; ಬಂದು: ಆಗಮಿಸು; ನಾಟ್ಯ: ನೃತ್ಯ; ಗರುಡಿ: ಆಲಯ; ನೆರೆ: ತುಂಬು ಕತ್ತಲೆ: ಅಂಧಕಾರ; ಮರೆ:ಗುಟ್ಟು, ರಹಸ್ಯ; ಐತಹೆನು: ಬಂದು ಸೇರು; ಮರೆ: ನೆನಪಿನಿಂದ ದೂರ ಮಾಡು; ಬಿಡೆ: ತೊರೆ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಅರಿದರ್+ಆದಡೆ +ನಿನ್ನ +ವಂಶವ
ತರಿವರ್+ಎನ್ನವರ್+ಎಲವೊ +ಕೆಲಬಲನ್
ಅರಿಯದಂದದಿ +ಬಂದು +ನಾಟ್ಯದ +ಗರುಡಿಯೊಳಗಿಹುದು
ನೆರೆದುದ್+ಆಯುಷ +ನಿನಗೆ +ಕತ್ತಲೆ
ಮರೆಯೊಳ್+ಆನೈತಹೆನು+ ಎನ್ನನು
ಮರೆದು+ ನೀ +ಬಿಡೆ+ಆದುದಾಗಲಿ+ಎಂದಳ್+ಇಂದುಮುಖಿ

ಅಚ್ಚರಿ:
(೧) ಆಡುಭಾಷೆಯ ಪ್ರಯೋಗ – ಆದುದಾಗಲಿ
(೨) ಅರಿ, ತರಿ; ನೆರೆ, ಮರೆ – ಪ್ರಾಸ ಪದಗಳು
(೩) ಸಾಯುವೆ ಎಂದು ಹೇಳುವ ಪರಿ – ನೆರೆದುದಾಯುಷ ನಿನಗೆ