ಪದ್ಯ ೩೬: ಧರ್ಮಜನೇಕೆ ದುಃಖಿಸಿದನು?

ಈಸುದಿನ ಪರಿಯಂತ ಧರ್ಮದ
ಮೀಸಲಳಿಯದೆ ಬಳಸಿ ಬಹಳಾ
ಯಾಸವನು ಸೈರಿಸಿದಿರಿಂದಿನ ಯುದ್ಧಕೇಳಿಯಲಿ
ಘಾಸಿಯಾದುದು ಧರ್ಮಗತಿ ಬುಧ
ರೇಸು ಮನಗಾಣರು ವೃಥಾಭಿನಿ
ವೇಶವಾದುದು ಮಕುಟಭಂಗದೊಳೆಂದನಾ ಭೂಪ (ಗದಾ ಪರ್ವ, ೮ ಸಂಧಿ, ೩೬ ಪದ್ಯ)

ತಾತ್ಪರ್ಯ:
ಇಷ್ಟು ದಿನ ಧರ್ಮವನ್ನು ಬಿಡದೆ ಬಹಳ ಆಯಾಸವನ್ನು ಸಹಿಸಿಕೊಂಡಿರಿ, ಎನ್ನಲು ಧರ್ಮಜನು ಈ ದಿನ ಯುದ್ಧದಲ್ಲಿ ಧರ್ಮಕ್ಕೆ ಭಂಗ ಬಂದಿತು. ಜ್ಞಾನಿಗಳು ಎಷ್ಟು ನೊಂದಾರು. ಮಕುಟವನ್ನು ಭಂಗಿಸಿದುದು ಸಲ್ಲದ ಕೆಲಸ ಎಂದು ದುಃಖಿಸಿದನು.

ಅರ್ಥ:
ಈಸುದಿನ: ಇಷ್ಟುದಿನ; ದಿನ: ದಿವಸ; ಪರಿಯಂತ: ವರೆಗೆ, ತನಕ; ಧರ್ಮ: ಧಾರಣೆ ಮಾಡಿದುದು; ಮೀಸಲು: ಮುಡಿಪು; ಅಳಿ: ನಾಶ; ಬಳಸು: ಆವರಿಸುವಿಕೆ; ಆಯಾಸ: ಪ್ರಯತ್ನ, ಬಳಲಿಕೆ; ಸೈರಿಸು:ತಾಳು, ಸಹಿಸು; ಯುದ್ಧ: ರಣ, ಕಾಳಗ; ಕೇಳಿ: ಕ್ರೀಡೆ; ಘಾಸಿ: ಪೆಟ್ಟು; ಬುಧ: ವಿದ್ವಾಂಸ; ಏಸು: ಎಷ್ಟು; ಮನಗಾಣು: ತಿಳಿದುಕೊಳ್ಳು; ವೃಥ: ಸುಮ್ಮನೆ; ಅಭಿನಿವೇಶ: ಆಸಕ್ತಿ, ಅಭಿಪ್ರಾಯ; ಮಕುಟ: ಕಿರೀಟ; ಭಂಗ: ಮುರಿ; ಭೂಪ: ರಾಜ;

ಪದವಿಂಗಡಣೆ:
ಈಸುದಿನ+ ಪರಿಯಂತ +ಧರ್ಮದ
ಮೀಸಲ್+ಅಳಿಯದೆ +ಬಳಸಿ +ಬಹಳ
ಆಯಾಸವನು +ಸೈರಿಸಿದಿರ್+ಇಂದಿನ +ಯುದ್ಧ+ಕೇಳಿಯಲಿ
ಘಾಸಿಯಾದುದು +ಧರ್ಮಗತಿ +ಬುಧರ್
ಏಸು +ಮನಗಾಣರು +ವೃಥ+ಅಭಿನಿ
ವೇಶವಾದುದು +ಮಕುಟ+ಭಂಗದೊಳ್+ಎಂದನಾ +ಭೂಪ

ಅಚ್ಚರಿ:
(೧) ಈಸು, ಏಸು – ಪ್ರಾಸ ಪದ