ರಾಯಕುವರರು ಸಚಿವ ಮಂತ್ರಿ ಪ
ಸಾಯಿತರ ಮಕ್ಕಳು ಚಮೂಪರ
ನಾಯಕರ ನಂದನರು ವಿಟರು ವಿನೋದಿಗಳು ಪುರದ
ಆಯತಾಕ್ಷಿಯರೊಡನೆ ರಾವುತ
ಪಾಯಕರ ಸುತರೋಳಿ ಮೇಳ ನ
ವಾಯಿಗಳ ನಾಗರಿಕರೈದಿತು ಕೋಟಿ ಸಂಖ್ಯೆಯಲಿ (ಅರಣ್ಯ ಪರ್ವ, ೧೯ ಸಂಧಿ, ೨೬ ಪದ್ಯ)
ತಾತ್ಪರ್ಯ:
ರಜಪುತ್ರರು, ಅಮಾತ್ಯರು, ಮಂತ್ರಿಗಳು, ಸಾಮಂತ ರಾಜನ ಮಕ್ಕಳು, ಸೇನಾಪತಿಗಳ ಮಕ್ಕಳು, ವಿಟರು, ವಿನೋದವನ್ನು ಮಾಡುವವರು, ಹಸ್ತಿನಾಪುರದ ಚೆಲುವೆಯರೊಡನೆ ಬಂದರು, ರಾವುತರು, ಕಾಲಾಳುಗಳ ಮಕ್ಕಳು, ನಾಗರೀಕರು, ಲೆಕ್ಕವಿಲ್ಲದಷ್ಟು ಜನ ಜಲಕ್ರೀಡೆಗೆ ಬಂದರು.
ಅರ್ಥ:
ರಾಯ: ರಾಜ; ಕುವರ: ಮಕ್ಕಳು; ಸಚಿವ: ಅಮಾತ್ಯ; ಮಂತ್ರಿ: ಸಚಿವ; ಚಮೂಪ: ಸೇನಾಪತಿ; ಮಕ್ಕಳು: ಕುಮಾರರು; ಪಸಾಯಿತ: ಸಾಮಂತ ರಾಜ; ನಂದನ: ಮಕ್ಕಳು; ವಿಟ: ವಿದೂಷಕ; ವಿನೋದ: ಹರ್ಷ, ಹಿಗ್ಗು; ಪುರ: ಊರು; ಆಯತಾಕ್ಷಿ: ವಿಶಾಲವಾದ ಕಣ್ಣುಳ್ಳವಳು (ಚೆಲುವೆ); ಒಡನೆ: ಜೊತೆ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಪಾಯಕ: ಕಾಲಾಳು, ಸೇವಕ; ಸುತ: ಮಗ; ಮೇಳ: ಗುಂಪು; ನವಾಯಿ: ಹೊಸರೀತಿ, ಠೀವಿ; ನಾಗರಿಕ: ನಗರದ ಜನ; ಐದು: ಬಂದು ಸೇರು; ಕೋಟಿ: ಅಸಂಖ್ಯಾತ; ಸಂಖ್ಯೆ: ಎಣಿಕೆ;
ಪದವಿಂಗಡಣೆ:
ರಾಯ+ಕುವರರು +ಸಚಿವ +ಮಂತ್ರಿ +ಪ
ಸಾಯಿತರ +ಮಕ್ಕಳು +ಚಮೂಪರ
ನಾಯಕರ+ ನಂದನರು+ ವಿಟರು +ವಿನೋದಿಗಳು +ಪುರದ
ಆಯತಾಕ್ಷಿಯರೊಡನೆ+ ರಾವುತ
ಪಾಯಕರ +ಸುತರ್+ಓಳಿ+ಮೇಳ +ನ
ವಾಯಿಗಳ +ನಾಗರಿಕರ್+ಐದಿತು +ಕೋಟಿ +ಸಂಖ್ಯೆಯಲಿ
ಅಚ್ಚರಿ:
(೧) ನಾಯಕರ, ಪಾಯಕರ – ಪ್ರಾಸ ಪದ
(೨) ಮಕ್ಕಳು, ಕುವರರು, ಸುತ – ಸಮಾನಾರ್ಥ ಪದಗಳು