ಅರಸಿ ಹೊಗಲಾಮ್ನಾಯನಿಕರಕೆ
ತೆರಹುಗುಡದ ಪರಸ್ವರೂಪನು
ಕುರುಹುಗೊಂಡರೆ ಮಂದಿವಾಲವೆ ದೇವ ನೀನೊಲಿದು
ಅರಸಿಕೊಂಡೈತರಲು ತಾನೈ
ಸರವನಾಗಲಿ ನಿನ್ನ ಭೃತ್ಯನ
ಹೊರೆವ ಪರಿಯಿದು ಕೃಷ್ಣ ಜಯಜಯಯೆನುತ ನಿಡುಗೆಡೆದ (ಭೀಷ್ಮ ಪರ್ವ, ೭ ಸಂಧಿ, ೧೬ ಪದ್ಯ)
ತಾತ್ಪರ್ಯ:
ಹೇ ಕೃಷ್ಣ, ನಿನ್ನನ್ನು ಹುಡುಕಿಕೊಂಡು ವೇದಗಳು ಬರಲು, ಅವನ್ನು ಒಳ ಹೊಗಿಸಿಕೊಳ್ಳದಿದ್ದ ಪರಮಾತ್ಮನಾದ ನೀನು ನನ್ನನ್ನು ಬಂದು ಕಾಣುವುದು ಸಾಮಾನ್ಯವೇ? ನನ್ನನ್ನು ಹುಡುಕಿಕೊಂಡು ಬಂದಿರುವೆಯೆಲ್ಲಾ ನಾನೆಷ್ಟರವನು? ನಿನ್ನ ಸೇವಕನನ್ನು ಸಲಹುವ ರೀತಿಯಿದು, ಕೃಷ್ಣ ನಿನಗೆ ಜಯವಾಗಲಿ, ಎಂದು ಭೀಷ್ಮನು ಹೊಗಳಿ ನಮಸ್ಕರಿಸಿದನು.
ಅರ್ಥ:
ಅರಸು: ಹುಡುಕು; ಆಮ್ನಾಯ: ವೇದ; ನಿಕರ: ಗುಂಪು; ತೆರಹು: ಬಿಚ್ಚು; ಪರ: ಪರಮಾತ್ಮ, ಸರ್ವೋತ್ತಮ; ಸ್ವರೂಪ: ನಿಜವಾದ ರೂಪ; ಕುರುಹು: ಗುರುತು, ಚಿಹ್ನೆ; ಮಂದಿ: ಜನಸಮೂಹ; ಒಲಿ: ಬಯಸು; ಐತರು: ಬಂದು ಸೇರು; ಐಸರವ: ಎಷ್ಟರವನು; ಭೃತ್ಯ: ಸೇವಕ; ಹೊರೆ: ಭಾರ; ಪರಿ: ವಿಧವಾಗಿ, ಬಗೆಯ; ಜಯ: ಉಘೇ; ನಿಡುಗೆಡೆ: ಉದ್ದವಾಗಿ ಬೀಳು;
ಪದವಿಂಗಡಣೆ:
ಅರಸಿ +ಹೊಗಲ್+ಆಮ್ನಾಯ+ನಿಕರಕೆ
ತೆರಹುಗುಡದ +ಪರಸ್ವರೂಪನು
ಕುರುಹುಗೊಂಡರೆ+ ಮಂದಿವಾಳವೆ +ದೇವ +ನೀನೊಲಿದು
ಅರಸಿಕೊಂಡ್+ಐತರಲು +ತಾನೈ
ಸರವನಾಗಲಿ +ನಿನ್ನ +ಭೃತ್ಯನ
ಹೊರೆವ +ಪರಿಯಿದು +ಕೃಷ್ಣ +ಜಯಜಯ+ಎನುತ +ನಿಡುಗೆಡೆದ
ಅಚ್ಚರಿ:
(೧) ಕೃಷ್ಣನ ಗುಣಗಾನ – ಅರಸಿ ಹೊಗಲಾಮ್ನಾಯನಿಕರಕೆ ತೆರಹುಗುಡದ ಪರಸ್ವರೂಪನು