ಇದೆ ಮುನಿವ್ರಜವಗ್ನಿಹೋತ್ರಿಗ
ಳಿದೆ ಕುಟುಂಬಿಗಳಾಪ್ತಪರಿಜನ
ವಿದೆ ವರ ಸ್ತ್ರೀ ಬಾಲವೃದ್ಧ ನಿಯೋಗಿ ಜನ ಸಹಿತ
ಇದೆ ಮಹಾಕಾಮ್ತಾರವಿನಿಬರ
ಪದಕೆ ವನಮಾರ್ಗದಲಿ ಸೇರುವ
ಹದನಕಾಣೆನು ಶಿವ ಶಿವೆಂದಳು ಕಾಂತೆ ಭೂಪತಿಗೆ (ಅರಣ್ಯ ಪರ್ವ, ೧೦ ಸಂಧಿ, ೩೧ ಪದ್ಯ)
ತಾತ್ಪರ್ಯ:
ಮುನಿಗಳು, ಅಗ್ನಿಹೋತ್ರಿಗಳು, ಅವರ ಕುಟುಂಬದವರು, ನಮ್ಮ ಆಪ್ತರು, ಪರಿಜನರು, ನಿಯೋಗಿಗಳು ಇದ್ದಾರೆ. ಇವರಲ್ಲಿ ಸ್ತ್ರೀಯರು, ಬಾಲರು, ಮುದುಕರು, ಬಹಳ ಜನರಿದ್ದಾರೆ. ಇಲ್ಲಿಂದ ಮುಂದೆ ಮಹಾರಣ್ಯವಿದೆ. ಇವರೆಲ್ಲರೂ ಈ ಮಾರ್ಗದಲ್ಲಿ ನಡೆಯುವುದು ಹೇಗೆಂಬುದು ತಿಳಿಯುತ್ತಿಲ್ಲ ಎಂದು ದ್ರೌಪದಿಯು ಹೇಳಿದಳು.
ಅರ್ಥ:
ಮುನಿ: ಋಷಿ; ವ್ರಜ: ಗುಂಪು; ಅಗ್ನಿಹೋತ್ರಿ: ಅಗ್ನಿಹೋತ್ರವನ್ನು ನಡೆಸುವವನು; ಕುಟುಂಬ: ಸಂಸಾರ; ಆಪ್ತಪರಿಜನ: ಹತ್ತಿರದ ಸಂಬಂಧಿಕರು; ವರ: ಶ್ರೇಷ್ಠ; ಸ್ತ್ರೀ: ಹೆಣ್ಣು; ಬಾಲ: ಚಿಕ್ಕವರು; ವೃದ್ಧ: ವಯಸ್ಸಾದ; ನಿಯೋಗಿ: ಸೇವಕ,ಊಳಿಗದವನು; ಜನ: ಗುಂಪು, ಮನುಷ್ಯ; ಸಹಿತ: ಜೊತೆ; ಕಾಂತಾರ: ಅಡವಿ; ಮಹಾ: ದೊಡ್ಡ; ಇನಿಬರ್: ಇಷ್ಟುಜನ; ಪದ: ಪಾದ; ವನ: ಕಾಡು; ಮಾರ್ಗ: ದಾರಿ; ಸೇರು: ತಲುಪು, ಮುಟ್ಟು; ಹದನ: ಔಚಿತ್ಯ, ರೀತಿ; ಕಾಣೆನು: ತೋರದು;
ಪದವಿಂಗಡಣೆ:
ಇದೆ +ಮುನಿ+ವ್ರಜವ್+ಅಗ್ನಿಹೋತ್ರಿಗಳ್
ಇದೆ+ ಕುಟುಂಬಿಗಳ್+ಆಪ್ತಪರಿಜನವ್
ಇದೆ+ ವರ+ ಸ್ತ್ರೀ +ಬಾಲ+ವೃದ್ಧ +ನಿಯೋಗಿ +ಜನ +ಸಹಿತ
ಇದೆ+ ಮಹಾಕಾಂತಾರವ್+ಇನಿಬರ
ಪದಕೆ +ವನಮಾರ್ಗದಲಿ +ಸೇರುವ
ಹದನ+ಕಾಣೆನು +ಶಿವ +ಶಿವೆಂದಳು+ ಕಾಂತೆ +ಭೂಪತಿಗೆ
ಅಚ್ಚರಿ:
(೧) ಕಾಡಿಗೆ ಮಹಾಕಾಂತಾರ ವೆಂಬ ಪದಬಳಕೆ
(೨) ವನ, ಮಹಾಕಾಂತಾರ – ಸಮನಾರ್ಥಕ ಪದ