ಪದ್ಯ ೬೯: ಪಾಂಡುವು ತನ್ನ ಮಕ್ಕಳಿಗೆ ಯಾವ ಸಂಸ್ಕಾರಗಳನ್ನು ಮಾಡಿಸಿದನು?

ಯಾದವರ ಸುಕ್ಷೇಮ ಕುಶಲವ
ನಾದರಿಸಿ ಬಳಿಕಾದ ಪರಮಾ
ಹ್ಲಾದದಲಿ ಕಶ್ಯಪನೊಳಾಲೋಚಿಸಿ ಮಹೀಪಾಲ
ವೈದಿಕೋಕ್ತಿಯ ಚೌಲವುಪನಯ
ನಾದಿ ಸಕಲಕ್ರಿಯೆಗಳನು ಗಾ
ರ್ಗ್ಯಾದಿ ಋಷಿಗಳನುಜ್ಞೆಯಲಿ ಮಾಡಿಸಿದನನಿಬರಿಗೆ (ಆದಿ ಪರ್ವ, ೪ ಸಂಧಿ, ೬೯ ಪದ್ಯ)

ತಾತ್ಪರ್ಯ:
ಯಾದವರು ಕ್ಷೇಮದಿದಂದಾರೆ, ಕುಶಲರಾಗಿದ್ದಾರೆ ಎಂದು ಕೇಳಿ ಪಾಂಡುವಿಗೆ ಮಹದಾನಂದವಾಯಿತು. ಬಳಿಕ ಕಶ್ಯಪ ಮುನಿಗಳೊಂದಿಗೆ ಆಲೋಚಿಸಿ, ಗಾರ್ಗ್ಯ ಮತ್ತು ಇತರರ ಮುನಿಗಳ ಅಪ್ಪಣೆಯಂತೆ ವೈದಿಕ ಸಂಸ್ಕಾರಗಳನ್ನು ತನ್ನ ಮಕ್ಕಳಿಗೆ ಮಾಡಿಸಿದನು.

ಅರ್ಥ:
ಕ್ಷೇಮ: ನೆಮ್ಮದಿ; ಕುಶಲ: ಸೌಖ್ಯ; ಆದರ: ಗೌರವ; ಬಳಿಕ: ನಂತರ; ಆಹ್ಲಾದ: ಸಂತೋಷ, ಆನಂದ; ಆಲೋಚನೆ: ವಿಚಾರ ವಿನಿಮಯ; ಮಹೀಪಾಲ: ರಾಜ; ವೈದಿಕ: ವೇದಕ್ಕೆ ಅನುಗುಣವಾಗಿ; ಉಕ್ತಿ: ಮಾತು, ನುಡಿ; ಚೌಲ: ಹುಟ್ಟು ಕೂದಲನ್ನು ತೆಗೆಸುವುದು; ಉಪನಯನ: ಮುಂಜಿ, ಬ್ರಹ್ಮೋಪದೇಶ; ಸಕಲ: ಎಲ್ಲಾ; ಕ್ರಿಯೆ: ಕಾರ್ಯ; ಋಷಿ: ಮುನಿ; ಅನುಜ್ಞೆ: ಒಪ್ಪಿಗೆ, ಅಪ್ಪಣೆ; ಅನಿಬರು: ಅಷ್ಟುಜನ;

ಪದವಿಂಗಡಣೆ:
ಯಾದವರ +ಸುಕ್ಷೇಮ +ಕುಶಲವನ್
ಆದರಿಸಿ +ಬಳಿಕಾದ +ಪರಮಾ
ಹ್ಲಾದದಲಿ +ಕಶ್ಯಪನೊಳ್+ಆಲೋಚಿಸಿ +ಮಹೀಪಾಲ
ವೈದಿಕೋಕ್ತಿಯ+ ಚೌಲ+ಉಪನಯ
ನಾದಿ +ಸಕಲ+ಕ್ರಿಯೆಗಳನು +ಗಾ
ರ್ಗ್ಯಾದಿ +ಋಷಿಗಳ್+ಅನುಜ್ಞೆಯಲಿ +ಮಾಡಿಸಿದನ್+ಅನಿಬರಿಗೆ

ಅಚ್ಚರಿ:
(೧) ಕ್ಷೇಮ, ಕುಶಲ – ಸಾಮ್ಯಾರ್ಥ ಪದ
(೨) ಸಂಸ್ಕಾರಗಳು – ಚೌಲ, ಉಪನಯನ

ಪದ್ಯ ೨೬: ಕರ್ಣನು ಯಾವ ಹೆಸರಿನಿಂದ ಪ್ರಖ್ಯಾತನಾದ?

ಆದರಿಸಿದನು ರಾಧೆಯಲಿ ಮಗ
ನಾದನೆಂದುತ್ಸವದ ಮಾಡಿ ಮ
ಹೀದಿವಿಜರನು ದಾನಮಾನಂಗಲಲಿ ಸತ್ಕರಿಸಿ
ಆ ದಿನಂ ಮೊದಲಾಗಿ ಉದ್ಭವ
ವಾದುದವನೈಶ್ವರ್ಯ ಉನ್ನತ
ವಾದನಾ ರವಿನಂದನನು ರಾಧೇಯ ನಾಮದಲಿ (ಆದಿ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಸೂತನ ಹೆಂಡತಿಯ ಹೆಸರು ರಾಧೆ, ರಾಧೆಗೆ ಮಗನು ಜನಿಸಿದನೆಂದು ಉತ್ಸವವನ್ನು ಮಾಡಿ, ಬ್ರಾಹ್ಮಣರನ್ನು ದಾನಾದಿಗಳಿಂದ ಸತ್ಕರಿಸಿದನು. ಅಂದಿನಿಂದ ಸೂತನ ಐಶ್ವರ್ಯವು ಅಭಿವೃದ್ಧಿ ಹೊಂದಿತು ಸೂರನ ಪುತ್ರನಾದ ಆ ಮಗನು ರಾಧೇಯನೆಂಬ ಹೆಸರಿನಿಂದ ಪ್ರಸಿದ್ಧನಾದನು.

ಅರ್ಥ:
ಆದರ: ಗೌರವ; ಮಗ: ಸುತ; ಉತ್ಸವ: ಸಂಭ್ರಮ; ಮಹೀದಿವಿಜ: ಬ್ರಾಹ್ಮಣ; ಮಹೀ: ಭೂಮಿ; ದಾನ: ನೀಡು; ಸತ್ಕರಿಸು: ಗೌರವಿಸು; ದಿನ: ವಾರ; ಉದ್ಭವ: ಹುಟ್ಟು; ಐಶ್ವರ್ಯ: ಸಂಪತ್ತು; ಉನ್ನತ: ಹೆಚ್ಚು; ರವಿ: ಸೂರ್ಯ; ನಂದನ: ಮಗ; ನಾಮ: ಹೆಸರು;

ಪದವಿಂಗಡಣೆ:
ಆದರಿಸಿದನು+ ರಾಧೆಯಲಿ +ಮಗ
ನಾದನೆಂದ್+ಉತ್ಸವದ+ ಮಾಡಿ +ಮ
ಹೀ+ದಿವಿಜರನು +ದಾನ+ಮಾನಂಗಳಲಿ +ಸತ್ಕರಿಸಿ
ಆ +ದಿನಂ +ಮೊದಲಾಗಿ +ಉದ್ಭವ
ವಾದುದ್+ಅವನ್+ಐಶ್ವರ್ಯ+ ಉನ್ನತ
ವಾದನಾ +ರವಿನಂದನನು +ರಾಧೇಯ +ನಾಮದಲಿ

ಅಚ್ಚರಿ:
(೧) ಮಗ, ನಂದನ – ಸಮಾನಾರ್ಥಕ ಪದ
(೨) ಮ ಕಾರದ ಸಾಲು ಪದ – ಮಗನಾದನೆಂದುತ್ಸವದ ಮಾಡಿ ಮಹೀದಿವಿಜರನು

ಪದ್ಯ ೫: ಕರ್ಣನ ಆಲಯಕ್ಕೆ ಯಾರು ಬಂದರು?

ಒಂದು ದಿನ ಶತಮನ್ಯು ವಿಪ್ರರ
ಚಂದದಲಿ ನಡೆತಂದು ಕರ್ಣನ
ಮಂದಿರಕೆ ಬರಲಾತನಿದಿರೆದ್ದವನ ಸಂತೈಸಿ
ತಂದು ಜಲವನು ಪದಯುಗವ ತೊಳೆ
ದಂದು ಪೀಠದಿ ಕುಳ್ಳಿರಿಸಿ ಪದ
ಕಂದು ನಮಿಸಿದನರ್ಘ್ಯವಿತ್ತಾದರಿಸಿ ಮನ್ನಿಸಿದ (ಅರಣ್ಯ ಪರ್ವ, ೨೩ ಸಂಧಿ, ೫ ಪದ್ಯ)

ತಾತ್ಪರ್ಯ:
ಒಂದು ದಿನ ಇಂದ್ರನು ಬ್ರಾಹ್ಮಣನ ವೇಷವನ್ನುಂಟು ಕರ್ಣನ ಮನೆಗೆ ಬಂದನು, ಕರ್ಣನು ಬಂದ ಬ್ರಾಹ್ಮಣನ್ನು ಗೌರವಿಸಿ, ಆತನ ಪಾದಗಳನ್ನು ನೀರಿನಿಂದ ತೊಳೆದು, ಆಸೀನನಾಗಲು ಪೀಠವನ್ನು ನೀಡಿ, ಆತನ ಪಾದಗಳಿಗೆ ಅರ್ಘ್ಯವನ್ನು ನೀಡಿ ಗೌರವಿಸುತ್ತಾ ನಮಸ್ಕರಿಸಿದನು.

ಅರ್ಥ:
ದಿನ: ದಿವಸ; ಶತಮನ್ಯು: ಇಂದ್ರ; ವಿಪ್ರ: ಬ್ರಾಹ್ಮಣ; ಚಂದ: ಅಂದ; ನಡೆತಂದು: ಆಗಮಿಸು; ಮಂದಿರ: ಆಲಯ, ಮನೆ; ಬರಲು: ಆಗಮಿಸು; ಇದಿರು: ಎದುರು; ಸಂತೈಸು: ಆದರಿಸು; ಜಲ: ನೀರು; ಪದಯುಗ: ಎರಡು ಪಾದಗಳು; ತೊಳೆ: ಸ್ವಚ್ಛಗೊಳಿಸು; ಪೀಠ: ಆಸನ; ಕುಳ್ಳಿರಿಸು: ಆಸೀನವಾಗು; ಪದ: ಪಾದ; ನಮಿಸು: ನಮಸ್ಕರಿಸು; ಅರ್ಘ್ಯ: ನೀರು; ಆದರಿಸು: ಗೌರವಿಸು; ಮನ್ನಿಸು: ಗೌರವಿಸು;

ಪದವಿಂಗಡಣೆ:
ಒಂದು +ದಿನ +ಶತಮನ್ಯು +ವಿಪ್ರರ
ಚಂದದಲಿ +ನಡೆತಂದು +ಕರ್ಣನ
ಮಂದಿರಕೆ +ಬರಲ್+ಆತನ್+ಇದಿರ್+ಎದ್ದ್+ಅವನ +ಸಂತೈಸಿ
ತಂದು +ಜಲವನು +ಪದಯುಗವ +ತೊಳೆದ್
ಅಂದು +ಪೀಠದಿ +ಕುಳ್ಳಿರಿಸಿ +ಪದ
ಕಂದು +ನಮಿಸಿದನ್+ಅರ್ಘ್ಯವಿತ್+ಆದರಿಸಿ +ಮನ್ನಿಸಿದ

ಅಚ್ಚರಿ:
(೧) ಅಂದು, ತಂದು, ಒಂದು – ಪ್ರಾಸ ಪದಗಳು
(೨) ಆದರಿಸು, ಮನ್ನಿಸು – ಸಮನಾರ್ಥಕ ಪದ

ಪದ್ಯ ೩೨: ಚಿತ್ರಸೇನನು ಕೌರವನ ಬಗ್ಗೆ ಅರ್ಜುನನಿಗೆ ಏನು ಹೇಳಿದನು?

ಹೋದ ಮಾರಿಯ ಕರೆದು ಮನೆಯೊಳ
ಗಾದರಿಸಿದವರುಂಟೆ ನೀರಲಿ
ನಾದ ಕೆಂಡವನುರುಹಿ ಮುಡಿದಾರುಂಟೆ ಮಂಡೆಯಲಿ
ಕೈದು ಮುರಿದೊಡೆ ಹಗೆಗೆ ತನ್ನಯ
ಕೈದು ಕೊಟ್ಟವರುಂಟೆ ಕುರುಪತಿ
ತೀದಡೀತನ ಬಿಡಿಸಿಕೊಂಬಿರೆ ಲೇಸು ಲೇಸೆಂದ (ಅರಣ್ಯ ಪರ್ವ, ೨೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಹೋದ ಮಾರಿಯನ್ನು ಮನೆಯೊಳಗೆ ಕರೆದುಕೊಂಡು ಬಂದು ಆದರಿಸುವುದುಂಟೆ? ನೀರಿನಲ್ಲಿ ಆರಿದ ಕೆಂಡವನ್ನು ಮತ್ತೆ ಕೆಂಡವನ್ನಾಗಿ ಮಾಡಿ ತಲೆಯಲ್ಲಿ ಮುಡಿದುಕೊಳ್ಳುವವರುಂಟೆ? ಆಯುಧ ಮುರಿದ ಶತ್ರುವಿಗೆ ತನ್ನ ಆಯುಧವನ್ನು ಕೊಡುವವರುಂಟೇ? ಕೌರವನೀಗ ಸೆರೆ ಸಿಕ್ಕಿರಲು ಅವನನ್ನು ಬಿಡಿಸಿಕೊಂಡು ಹೋಗುವಿರಾ? ಚೆನ್ನಾಗಿದೆ, ಬಹಳ ಒಳಿತು ಎಂದು ಚಿತ್ರಸೇನನು ಅರ್ಜುನನಿಗೆ ಹೇಳಿದನು.

ಅರ್ಥ:
ಹೋದ: ತೆರಳಿದ; ಮಾರಿ: ಕ್ಷುದ್ರ ದೇವತೆ; ಕರೆ: ಬರೆಮಾಡು; ಮನೆ: ಆಲಯ; ಆದರಿಸು: ಗೌರವಿಸು; ನೀರು: ಜಲ; ನಾದ: ಒದ್ದೆ ಮಾಡು, ತೋಯಿಸು; ಕೆಂಡ: ಇಂಗಳ; ಉರುಹು: ತಾಪಗೊಳಿಸು; ಮುಡಿ: ತುರುಬು; ಮಂಡೆ: ಶಿರ; ಕೈದು: ಆಯುಧ, ಶಸ್ತ್ರ; ಮುರಿ: ಸೀಳು; ಹಗೆ: ಶತ್ರು; ಕೊಡು: ನೀದು; ತೀದು: ಮುಗಿಸು; ಬಿಡಿಸು: ಬಿಡುಗಡೆ ಮಾಡು; ಲೇಸು: ಒಳಿತು;

ಪದವಿಂಗಡಣೆ:
ಹೋದ +ಮಾರಿಯ +ಕರೆದು +ಮನೆಯೊಳಗ್
ಆದರಿಸಿದವರುಂಟೆ +ನೀರಲಿ
ನಾದ+ ಕೆಂಡವನ್+ಉರುಹಿ +ಮುಡಿದಾರುಂಟೆ +ಮಂಡೆಯಲಿ
ಕೈದು +ಮುರಿದೊಡೆ +ಹಗೆಗೆ+ ತನ್ನಯ
ಕೈದು +ಕೊಟ್ಟವರುಂಟೆ +ಕುರುಪತಿ
ತೀದಡ್+ಈತನ +ಬಿಡಿಸಿಕೊಂಬಿರೆ +ಲೇಸು +ಲೇಸೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹೋದ ಮಾರಿಯ ಕರೆದು ಮನೆಯೊಳ
ಗಾದರಿಸಿದವರುಂಟೆ; ನೀರಲಿ ನಾದ ಕೆಂಡವನುರುಹಿ ಮುಡಿದಾರುಂಟೆ ಮಂಡೆಯಲಿ;
ಕೈದು ಮುರಿದೊಡೆ ಹಗೆಗೆ ತನ್ನಯ ಕೈದು ಕೊಟ್ಟವರುಂಟೆ

ಪದ್ಯ ೨೧: ಕೃಷ್ಣನ ಬಗ್ಗೆ ವೈಶಂಪಾಯನರು ಏನೆಂದು ಹೇಳಿದರು?

ಯಾದವರು ಪಾಂಡವರು ತನ್ನವ
ರಾದುದದುವೆ ಕುಟುಂಬವದು ಮಹ
ದಾದಿ ಸೃಷ್ಟಿಗದಾರ ರಕ್ಷೆ ಕುಟುಂಬವಾವನದು
ಆದರಿಸಿದನು ಕೆಲಬರನು ಹೊರ
ಗಾದವರು ಕೆಲರಾಯ್ತು ಹರಿ ಮಾ
ಯಾ ದುರಾಗ್ರಹ ವೃತ್ತಿಯೀ ಹದನೆಂದನಾ ಮುನಿಪ (ಸಭಾ ಪರ್ವ, ೧೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ಯಾದವರು ಪಾಂಡವರಿಬ್ಬರೂ ಕೃಷ್ಣನ ಕುಟುಂಬದವರೇ, ಹಾಗೆ ನೋಡಿದರೆ ಆದಿಯಾದ ಈ ಜಗತ್ತು ಸೃಷ್ಟಿಗೆ ಕೃಷ್ಣನೇ ರಕ್ಷಕ, ಅವನ ಮಾಯಾವೃತ್ತಿಯಿಂದಲೇ ಅವನಿಗೆ ಬೇಕಾದವರು ವಿರೋಧಿಗಳು ಎಂದು ತೋರುತ್ತಾರೆ ಎಂದು ವೈಶಂಪಾಯನರು ಜನಮೇಜಯ ರಾಜನಿಗೆ ತಿಳಿಸಿದರು.

ಅರ್ಥ:
ಕುಟುಂಬ: ಮನೆತನ, ವಂಶ; ಮಹದ್: ಹಿರಿಯ, ಶ್ರೇಷ್ಠ; ಆದಿ: ಮೊದಲು; ಸೃಷ್ಟಿ: ಹುಟ್ಟು; ರಕ್ಷೆ: ಕಾಪು, ಕಾಯುವಿಕೆ; ಆದರಿಸು: ಗೌರವಿಸು; ಕೆಲಬ: ಕೆಲವು; ಹೊರಗೆ: ಆಚೆ; ಹರಿ: ವಿಷ್ಣು; ಮಾಯ: ಇಂದ್ರಜಾಲ, ಭ್ರಾಂತಿ; ದುರಾಗ್ರಹ: ಹಟಮಾರಿತನ, ಮೊಂಡ; ವೃತ್ತಿ: ಕೆಲಸ; ಹದ: ಸ್ಥಿತಿ; ಮುನಿ: ಋಷಿ;

ಪದವಿಂಗಡಣೆ:
ಯಾದವರು +ಪಾಂಡವರು +ತನ್ನವರ್
ಆದುದ್+ಅದುವೆ +ಕುಟುಂಬವದು +ಮಹದ್
ಆದಿ +ಸೃಷ್ಟಿಗದ್+ಆರ +ರಕ್ಷೆ +ಕುಟುಂಬವ್+ಅವನದು
ಆದರಿಸಿದನು+ ಕೆಲಬರನು +ಹೊರ
ಗಾದವರು +ಕೆಲರಾಯ್ತು +ಹರಿ+ ಮಾ
ಯಾ +ದುರಾಗ್ರಹ +ವೃತ್ತಿ+ಈ +ಹದನ್+ಎಂದನಾ +ಮುನಿಪ

ಪದ್ಯ ೨೨: ಯಜ್ಞಕುಂಡವನ್ನು ಹೇಗೆ ಯಾಗಕ್ಕಾಗಿ ಅನುವುಮಾಡಲಾಯಿತು?

ಆದುದನುಪಮ ಕುಂಡವಂತ
ರ್ವೇದಿಯ ಸಮೀಪದಲಿ ಹೊರೆಗಳ
ಶೋಧಿಸಿದ ಇಧ್ಮದ ಕುಶ ಸ್ಥಂಡಿಲದ ಸೀಮೆಯಲಿ
ಆದರಿಸಿ ಪರಿಚಾರಕರು ಸಂ
ಪಾದಿಸಿದ ಘೃತ ಚರು ಪುರೋಡಾ
ಶಾದಿ ಸಂಭಾರೌಘವನುವಾಯಿತ್ತು ನಿಮಿಷದಲಿ (ಸಭಾ ಪರ್ವ, ೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಯಜ್ಞಶಾಲೆಯ ಒಳಜಗಲಿಯ ಸಮೀಪದಲ್ಲಿ ಯಜ್ಞಕುಂಡವನ್ನು ನಿರ್ಮಿಸಿದರ್ಯು. ಇಧ್ಮ, ದರ್ಭೆ, ಅಕ್ಕಿಗಳನ್ನು ಅನುವಾಗಿ ಇಟ್ಟರು. ಋತ್ವಿಜರ ಪರಿಚಾರಕರು ತುಪ್ಪ, ಚರು, ಪುರೋಡಾಶಗಳನ್ನು ಸಿದ್ಧಪದಿಸಿದರು.

ಅರ್ಥ:
ಅನುಪಮ: ಉತ್ಕೃಷ್ಟವಾದುದು; ಕುಂಡ:ಹೋಮಕಾರ್ಯಕ್ಕಾಗಿ ನೆಲದಲ್ಲಿ ಮಾಡಿದ ಕುಣಿ; ಅಂತರ್ವೇದಿ: ಯಜ್ಞಶಾಲೆಯ ಒಳಜಗಲಿ; ಸಮೀಪ: ಹತ್ತಿರ; ಹೊರೆ:ರಕ್ಷಣೆ; ಶೋಧಿಸು: ಹುಡುಕು; ಸೀಮೆ: ಎಲ್ಲೆ; ಆದರಿಸು: ಗೌರವಿಸು; ಪರಿಚಾರಕ: ಸೇವಕ; ಸಂಪಾದಿಸು: ಗಳಿಸು; ಘೃತ: ತುಪ್ಪ; ಚರು:ಹವಿಸ್ಸನ್ನು ಮಾಡುವ ಪಾತ್ರೆ; ಆದಿ: ಮುಂತಾದ; ಸಂಭಾರ: ಸಾಮಗ್ರಿ; ಔಘ: ಗುಂಪು, ಸಮೂಹ; ಅನುವು: ಅವಕಾಶ; ನಿಮಿಷ: ಕ್ಷಣಗಳಲಿ, ಬೇಗನೆ;

ಪದವಿಂಗಡಣೆ:
ಆದುದ್+ಅನುಪಮ +ಕುಂಡವ್+ಅಂತ
ರ್ವೇದಿಯ +ಸಮೀಪದಲಿ +ಹೊರೆಗಳ
ಶೋಧಿಸಿದ+ ಇಧ್ಮದ+ ಕುಶ+ ಸ್ಥಂಡಿಲದ+ ಸೀಮೆಯಲಿ
ಆದರಿಸಿ+ ಪರಿಚಾರಕರು+ ಸಂ
ಪಾದಿಸಿದ +ಘೃತ +ಚರು +ಪುರೋಡಾ
ಶಾದಿ +ಸಂಭಾರ+ಔಘವನ್+ಅನುವಾಯಿತ್ತು+ ನಿಮಿಷದಲಿ

ಅಚ್ಚರಿ:
(೧) ಶೋಧಿಸಿ, ಆದರಿಸಿ, ಸಂಪಾದಿಸಿ – ಪ್ರಾಸ ಪದಗಳು
(೨) ೩, ೫ ಸಾಲಿನಲ್ಲಿ ೩ ಸಾಮಗ್ರಿಗಳನ್ನು ಹೆಸರಿಸಿರುವುದು

ಪದ್ಯ ೩: ಅರ್ಜುನನ ಅಭಯ ಹೇಗಿತ್ತು?

ಕರೆಸಿ ವಿಪ್ರರ ಬಾಧೆಗಳನಾ
ದರಿಸಿ ಕೇಳಿದು ಸಂತವಿಸಿ ಪರಿ
ಹರಿಸಿಕೊಡುವೆನು ದುಷ್ಟ ಪಾಟಚ್ಚರ ಪರಿಪ್ಲವವ
ಮರಳಿ ನೀವೆಂದವರ ಬೀಳ್ಕೊಂ
ಡರಿ ನಿವಾರಣ ಬಂದನಗ್ಗದ
ಶರಧನುವ ಕೊಳಲೆಂದು ರಾಯನ ಸೆಜ್ಜೆಯರಮನೆಗೆ (ಆದಿ ಪರ್ವ, ೧೯ ಸಂಧಿ, ೩ ಪದ್ಯ)

ತಾತ್ಪರ್ಯ:
ಬ್ರಾಹ್ಮಣರ ಆಕ್ರಂದನವನ್ನು ಕೇಳಿ ಅವರ ತೊಂದರೆಗಳನ್ನು ಕೇಳಿ, ಅವರಿಗೆ ಸಾಂತ್ವಾನವನ್ನು ಹೇಳಿ, ಆ ದುಷ್ಟ ಕಳ್ಳರನ್ನು ಬಂಧಿಸಿ ನಿಮ್ಮ ದಿಗ್ಭ್ರಮೆಯನ್ನು ಹೋಗಲಾಡಿಸುತ್ತೇನೆ, ನೀವೆಲ್ಲರು ನಿಮ್ಮ ಸ್ಥಳಕ್ಕೆ ಹಿಂದಿರುಗಿ ಎಂದು ಹೇಳಿ, ತನ್ನ ಬಿಲ್ಲು ಬಾಣಗಳನ್ನು ತೆಗೆದುಕೊಳ್ಳಲು ಯುಧಿಷ್ಠಿರನ ಶಯ್ಯಾಗೃಹಕ್ಕೆ ಹೋದನು.

ಅರ್ಥ:
ಕರೆಸಿ: ಬರೆಮಾಡಿಕೊಂಡು; ವಿಪ್ರ: ಬ್ರಾಹ್ಮಣ; ಬಾಧೆ: ತೊಂದರೆ; ಆದರಿಸಿ:ಉಪಚಾರಮಾಡು; ಕೇಳಿ: ಆಲಿಸು; ಸಂತವಿಸು: ಸಂತೈಸು, ಸಮಧಾನ ಮಾಡು; ಪರಿಹರಿಸು: ನಿವಾರಿಸು, ನೀಗು; ದುಷ್ಟ: ನೀಚ, ಕೆಟ್ಟವ; ಪಾಟಚ್ಚರ: ಕಳ್ಳ; ಪರಿಪ್ಲವ: ಉಪದ್ರವ; ಮರಳಿ: ಹಿಂದಿರುಗಿ; ಬೀಳ್ಕೊಡು: ಹಿಂದಿರುಗು; ನಿವಾರಣ: ಹೋಗಲಾಡಿಸು; ಬಂದನ:ಸೆರೆ; ಅಗ್ಗ:ಶ್ರೇಷ್ಠ; ಶರ: ಬಾಣ; ಧನು: ಬಿಲ್ಲು; ರಾಯ: ರಾಜ; ಸೆಜ್ಜೆ:ಶಯ್ಯಾಗೃಹ;

ಪದವಿಂಗಡಣೆ:
ಕರೆಸಿ +ವಿಪ್ರರ +ಬಾಧೆಗಳನ್
ಆದರಿಸಿ +ಕೇಳಿದು +ಸಂತವಿಸಿ+ ಪರಿ
ಹರಿಸಿಕೊಡುವೆನು +ದುಷ್ಟ +ಪಾಟಚ್ಚರ+ ಪರಿಪ್ಲವವ
ಮರಳಿ +ನೀವೆಂದ್+ಅವರ +ಬೀಳ್ಕೊಂ
ಡರಿ +ನಿವಾರಣ +ಬಂದನ+ ಅಗ್ಗದ
ಶರಧನುವ+ ಕೊಳಲೆಂದು +ರಾಯನ +ಸೆಜ್ಜೆಯರಮನೆಗೆ

ಅಚ್ಚರಿ:
(೧) “ಸಿ” ಕಾರದ ಪದಗಳು – ಕರೆಸಿ, ಆದರಿಸಿ, ಪರಿಹರಿಸಿ, ಸಂತವಿಸಿ