ಪದ್ಯ ೫೨: ಭೀಷ್ಮರು ಕೃಷ್ಣನ ಗುಣಗಾನವನ್ನು ಹೇಗೆ ಮಾಡಿದರು?

ಈತ ಸಚರಾಚರದ ಗುರು ವಿ
ಖ್ಯಾತ ಋತ್ವಿಜನೀತನಾಚಾ
ರ್ಯಾತಿಶಯನೀತನು ಮಹಾಪ್ರಿಯನೀತ ನೃಪನೀತ
ಸ್ನಾತಕ ವ್ರತಿಯೀತನೀತನ
ಮಾತು ನಿನಗೆತ್ತಣದು ನವಖ
ದ್ಯೋತಕೆತ್ತಣ ಸೂರ್ಯಮಂಡಲವೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೫೨ ಪದ್ಯ)

ತತ್ಪರ್ಯ:
ಭೀಷ್ಮನು ಕೃಷ್ಣನ ಗುಣಗಾನವನ್ನು ಮಾಡುತ್ತಾ, ಶಿಶುಪಾಲ ನೀನೆಲ್ಲಿ, ಈ ಕೃಷ್ಣನೆಲ್ಲಿ? ಶ್ರೀಕೃಷ್ಣನು ಸಚರಾಚರದ ಗುರು, ಅತ್ಯಂತ ಪ್ರಸಿದ್ಧನಾದ ಋತ್ವಿಜ, ಆಚಾರ್ಯರಲ್ಲೆಲ್ಲಾ ಹೆಚ್ಚಿನವನು. ಇವನು ಮಹಾ ಪ್ರಿಯ, ಇವನು ರಾಜ, ಸ್ನಾತಕವ್ರತಿ, ಇವನ ಮಾತು ನಿನಗೇನು ಗೊತ್ತು, ದೀಪದ ಹುಳದ ಮರಿಯೆಲ್ಲಿ ಸೂರ್ಯಮಂಡಲವೆಲ್ಲಿ ಎಂದನು.

ಅರ್ಥ:
ಚರಾಚರ: ಚಲಿಸುವ ಮತ್ತು ಚಲಿಸದಿರುವ; ಗುರು: ಆಚಾರ್ಯ; ವಿಖ್ಯಾತ: ಪ್ರಸಿದ್ಧ; ಋತ್ವಿಜ: ಯಜ್ಞ ಮಾಡುವವ; ಆಚಾರ್ಯ: ಗುರು, ಆದ್ಯ ಪ್ರವರ್ತಕ; ಅತಿಶಯ: ಅಧಿಕ, ಹೆಚ್ಚು; ಮಹಾ: ಶ್ರೇಷ್ಠ; ಪ್ರಿಯ: ಒಲವು; ನೃಪ: ರಾಜ; ಸ್ನಾತಕ: ಗುರುಕುಲದಲ್ಲಿ ವಿದ್ಯಾರ್ಜನೆ ಮುಗಿಸಿ ಗೃಹಸ್ಥಾಶ್ರಮಕ್ಕೆ ಸೇರುವವನು; ವ್ರತಿ: ಯೋಗಿ, ತಪಸ್ವಿ; ಮಾತು: ವಾಣಿ; ಎತ್ತಣ: ಎಲ್ಲಿಯ; ಖದ್ಯೋತ: ಸೂರ್ಯ; ನವ: ಹೊಸ; ಸೂರ್ಯ: ರವಿ; ಮಂಡಲ: ಗುಂಡಾಗಿರುವುದು;

ಪದವಿಂಗಡನೆ:
ಈತ +ಸಚರಾಚರದ+ ಗುರು +ವಿ
ಖ್ಯಾತ +ಋತ್ವಿಜನ್+ಈತನ್+ಆಚಾ
ರ್ಯ+ಅತಿಶಯನ್+ಈತನು +ಮಹಾಪ್ರಿಯನ್+ಈತ+ ನೃಪನ್+ಈತ
ಸ್ನಾತಕ+ ವ್ರತಿ+ಈತನ್+ಈತನ
ಮಾತು +ನಿನಗ್+ಎತ್ತಣದು +ನವ+ಖ
ದ್ಯೋತಕ್+ಎತ್ತಣ+ ಸೂರ್ಯ+ಮಂಡಲವೆಂದನಾ+ ಭೀಷ್ಮ

ಅಚ್ಚರಿ:
(೧) ಕೃಷ್ಣನ ಗುಣಗಾನಗಳು – ಸಚರಾಚರದ ಗುರು, ವಿಖ್ಯಾತ ಋತ್ವಿಜ, ಆಚಾರ್ಯಾತಿಶಯ, ಮಹಾಪ್ರಿಯ, ನೃಪ, ಸ್ನಾತಕ ವ್ರತಿ