ತೀರಿತೈ ಕುಶಿಕಾಸ್ತ್ರಘಾತಿ ಮು
ರಾರಿ ಗುರುಸುತರೊಬ್ಬರೊಬ್ಬರ
ವೀರಪಣವಾಸಿಯಲಿ ಶಪಿಸಿದರಧಿಕರೋಷದಲಿ
ನಾರಿಯಂತಸ್ತಾಪವಹ್ನಿ ನಿ
ವಾರಣಕೆ ಜಲವೀತನೆಂದಾ
ಚಾರಿಯನ ನಂದನನ ಹಿಡಿದರು ಭೀಮಫಲುಗುಣರು (ಗದಾ ಪರ್ವ, ೧೦ ಸಂಧಿ, ೨೫ ಪದ್ಯ)
ತಾತ್ಪರ್ಯ:
ಅಶ್ವತ್ಥಾನ ಕುಶಿಕಾಸ್ತ್ರವು ವಿಫಲವಾಯಿತು. ಶ್ರೀಕೃಷ್ಣನೂ ಮತ್ತು ಅಶ್ವತ್ಥಾಮ ಇಬ್ಬರೂ ಒಬ್ಬೊರನ್ನೊಬ್ಬರು ರೋಷಾತಿರೇಕದಿಂದ ಶಪಿಸಿದರು. ದ್ರೌಪದಿಯ ಅಂತರಂಗವನ್ನು ಸುಡುವ ಬೆಂಕಿಯನ್ನು ಇವನ ತಲೆಯೆಮ್ಬ ನೀರಿನಿಂದ ಆರಿಸಬೇಕೆಂದು ಭೀಮಾರ್ಜುನರು ಅಶ್ವತ್ಥಾಮನನ್ನು ಹಿಡಿದರು.
ಅರ್ಥ:
ತೀರು: ಅಂತ್ಯ, ಮುಕ್ತಾಯ; ಕುಶಿಕ: ಕುಡ, ಗುಳ, ವಿಶ್ವಾಮಿತ್ರನ ತಂದೆ; ಘಾತಿ: ಪೆಟ್ಟ; ಮುರಾರಿ: ಕೃಷ್ಣ; ಸುತ: ಪುತ್ರ; ವೀರ: ಶೂರ; ಪಣ: ಪ್ರತಿಜ್ಞೆ, ಶಪಥ, ಪಂದ್ಯ; ಶಪಿಸು: ನಿಂದಿಸು; ನಾರಿ: ಹೆಣ್ಣು; ಅಂತಸ್ತಾಪ: ಒಳಮನಸ್ಸಿನ ನೋವು; ವಹ್ನಿ: ಬೆಂಕಿ; ನಿವಾರಣ: ಹೋಗಲಾಡಿಸು; ಜಲ: ನಿರು; ಆಚಾರಿ: ಗುರು; ನಂದನ: ಮಗ; ಹಿಡಿ: ಬಂಧಿಸು;
ಪದವಿಂಗಡಣೆ:
ತೀರಿತೈ +ಕುಶಿಕಾಸ್ತ್ರ+ಘಾತಿ +ಮು
ರಾರಿ +ಗುರುಸುತರ್+ಒಬ್ಬರೊಬ್ಬರ
ವೀರಪಣವಾಸಿಯಲಿ +ಶಪಿಸಿದರ್+ಅಧಿಕ+ರೋಷದಲಿ
ನಾರಿ+ಅಂತಸ್ತಾಪ+ವಹ್ನಿ+ ನಿ
ವಾರಣಕೆ +ಜಲವ್+ಈತನೆಂದ್+
ಆಚಾರಿಯನ +ನಂದನನ +ಹಿಡಿದರು +ಭೀಮ+ಫಲುಗುಣರು
ಅಚ್ಚರಿ:
(೧) ದ್ರೌಪದಿಯ ನೋವನ್ನು ಹೋಗಲಾಡಿಸುವ ಪರಿ – ನಾರಿಯಂತಸ್ತಾಪವಹ್ನಿ ನಿವಾರಣಕೆ ಜಲವೀತನೆಂದಾಚಾರಿಯನ ನಂದನನ ಹಿಡಿದರು
(೨) ಅಶ್ವತ್ಥಾಮನನ್ನು ಕರೆದ ಪರಿ – ಗುರುಸುತ, ಆಚಾರಿಯನ ನಂದನ