ಪದ್ಯ ೧೫: ಯಾವ ಗುಣಗಿಳಿಂದ ನಾವು ಮುನ್ನಡೆಯಬೇಕು?

ಧನಮದವ ಸತ್ಕುಲಮದವ ಯೌ
ವನಮದವ ವಿದ್ಯಾಮದವ ಪರಿ
ಜನಮದವ ವೈಭವಮದವನಾಚಾರಪದ ಮದವ
ಮನನದಿಂ ಶ್ರವಣದಿ ನಿಧಿ ಧ್ಯಾ
ಸನದಿನಿವುಗಳನೊತ್ತಿ ವಿದ್ಯಾ
ವಿನಯ ಸೌಶೀಲ್ಯದಲಿ ನಡೆವುದು ವಿಪ್ರ ಕೇಳೆಂದ (ಅರಣ್ಯ ಪರ್ವ, ೧೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧರ್ಮವ್ಯಾಧನು ಬ್ರಹ್ಮಚಾರಿಗೆ, ಧನಮದ, ಕುಲಮದ, ಯೌವನಮದ, ವಿದ್ಯಾಮದ, ಪರಿಜನಮದ, ವೈಭವಮದ, ನಾನು ಸದಾಚಾರಿಯೆಂಬ ಮದ ಇವುಗಳನ್ನು ಶ್ರವಣ, ಮನನ, ನಿಧಿಧ್ಯಾಸನಗಳಿಂದ ಗೆದ್ದು, ವಿದ್ಯೆ, ವಿನಯ, ಸುಶೀಲಗಳಿಂದ ನಡೆಯಬೇಕು ಎಂದು ಹೇಳಿದನು.

ಅರ್ಥ:
ಧನ: ಐಶ್ವರ್ಯ; ಮದ: ಅಹಂಕಾರ; ಕುಲ: ವಂಶ; ಸತ್ಕುಲ: ಒಳ್ಳೆಯ ವಂಶ; ಯೌವನ: ತಾರುಣ್ಯ; ವಿದ್ಯ: ಜ್ಞಾನ; ಪರಿಜನ: ಬಂಧುಬಳಗ; ವೈಭವ: ಶ್ರೇಷ್ಠತೆ, ಆಡಂಬರ; ಆಚಾರ: ಒಳ್ಳೆಯ ನಡತೆ; ಮನನ: ಧ್ಯಾನ; ಶ್ರವಣ: ಕೇಳು; ನಿಧಿಧ್ಯಾಸನ: ಏಕಾಗ್ರತೆ; ಒತ್ತು: ಆಕ್ರಮಿಸು, ಮುತ್ತು; ವಿನಯ: ಒಳ್ಳೆಯತನ, ಸೌಜನ್ಯ; ಸೌಶೀಲ್ಯ: ಒಳ್ಳೆಯ ನಡತೆ, ಸದಾಚಾರ; ನಡೆ: ಮುನ್ನಡೆ, ಚಲಿಸು; ವಿಪ್ರ: ಬ್ರಾಹ್ಮಣ;

ಪದವಿಂಗಡಣೆ:
ಧನ+ಮದವ +ಸತ್ಕುಲ+ಮದವ +ಯೌ
ವನ+ಮದವ +ವಿದ್ಯಾ+ಮದವ+ ಪರಿ
ಜನ+ಮದವ+ ವೈಭವ+ಮದವನ್+ಆಚಾರಪದ +ಮದವ
ಮನನದಿಂ+ ಶ್ರವಣದಿ+ ನಿಧಿಧ್ಯಾ
ಸನದಿನ್+ಇವುಗಳನ್+ಒತ್ತಿ +ವಿದ್ಯಾ
ವಿನಯ +ಸೌಶೀಲ್ಯದಲಿ+ ನಡೆವುದು +ವಿಪ್ರ +ಕೇಳೆಂದ

ಅಚ್ಚರಿ:
(೧) ಮದವ – ೭ ಬಾರಿ ಪ್ರಯೋಗ
(೨) ಯಾವ ಮದವನ್ನು ಹೊರಗಿಡಬೇಕು – ಧನ, ಸತ್ಕುಲ, ಯೌವನ, ವಿದ್ಯ, ಪರಿಜನ, ವೈಭವ, ಆಚಾರಪದ