ಪದ್ಯ ೧೨: ಧರ್ಮಜನು ಕೃಷ್ಣನಿಗೆ ನಹುಷನ ವೃತ್ತಾಂತವನ್ನು ಹೇಗೆ ವಿವರಿಸಿದನು?

ಇಂತು ತಲೆಯೊತ್ತುತ ಮಹಾವಿಪಿ
ನಾಂತರವ ತೊಳಲಿದೆವು ಬಳಿಕವ
ನಾಂತರದೊಳಗಿಂದಾದುದೂಳಿಗ ನಹುಷ ನೃಪತಿಯಲಿ
ಭ್ರಾಂತಿಯೈಸಲೆ ಭೀಮನುರಗಾ
ಕ್ರಾಂತನಾದನು ಧರ್ಮಕಥೆಯಲಿ
ಸಂತವಾಯ್ತು ವಿಶಾಪನಾದನು ನಹುಷನಾಕ್ಷಣಕೆ (ಅರಣ್ಯ ಪರ್ವ, ೧೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ಹೀಗೆ ಹೋರಾಡುತ್ತಾ ಮಹಾ ಕಾಡುಗಳನ್ನು ದಾಟಿ ದಣಿದೆವು. ಅಲ್ಲಿ ನಹುಷನು ಹಾವಿನ ರೂಪದಿಂದ ಭೀಮನನ್ನು ಹಿಡಿದನು. ಧರ್ಮ ಸಂವಾದದಿಂದ ಅವನು ಶಾಪ ಮುಕ್ತನಾದನು ಮತ್ತು ಭೀಮನು ಬಿಡುಗಡೆ ಹೊಂದಿದನು.

ಅರ್ಥ:
ತಲೆ: ಶಿರ; ತಲೆಯೊತ್ತು: ಯುದ್ಧಮಾಡಿ; ಮಹಾ: ದೊಡ್ಡ; ವಿಪಿನ: ಕಾಡು; ಅಂತರ: ದೂರ; ತೊಳಲು: ಬವಣೆ, ಸಂಕಟ; ಬಳಿಕ: ನಂತರ; ಊಳಿಗ: ಕೆಲಸ, ಕಾರ್ಯ; ನೃಪತಿ: ರಾಜ; ಭ್ರಾಂತಿ: ತಿರುಗುವಿಕೆ, ಸಂಚಾರ, ಭ್ರಮೆ; ಐಸಲೆ: ಅಲ್ಲವೇ; ಉರಗ: ಹಾವು; ಆಕ್ರಾಂತ: ಆಕ್ರಮಿಸಲ್ಪಟ್ಟ; ಕಥೆ: ವಿವರಣೆ; ಸಂತ: ಸಂಧಾನ; ವಿಶಾಪ: ಶಾಪದಿಂದ ಮುಕ್ತ; ಕ್ಷಣ: ಸಮಯ;

ಪದವಿಂಗಡಣೆ:
ಇಂತು +ತಲೆಯೊತ್ತುತ+ ಮಹಾ+ವಿಪಿನ
ಅಂತರವ +ತೊಳಲಿದೆವು +ಬಳಿಕ+ವ
ನಾಂತರದೊಳಗಿಂದ್+ಆದುದ್+ಊಳಿಗ +ನಹುಷ +ನೃಪತಿಯಲಿ
ಭ್ರಾಂತಿ+ಐಸಲೆ +ಭೀಮನ್+ಉರಗ
ಆಕ್ರಾಂತನಾದನು +ಧರ್ಮಕಥೆಯಲಿ
ಸಂತವಾಯ್ತು +ವಿಶಾಪನಾದನು +ನಹುಷನ್+ಆ+ಕ್ಷಣಕೆ

ಅಚ್ಚರಿ:
(೧) ವಿಪಿನ, ವನ – ಸಮನಾರ್ಥಕ ಪದ