ಕಾವಡೆನ್ನಳವಲ್ಲ ಮೇಣ್ ಗಾಂ
ಡೀವಿ ಕೊಲುವವನಲ್ಲ ಕೃಷ್ಣನು
ಕಾವರೆಯು ಕೊಲುವರೆ ಸಮರ್ಥನು ವೇದಸಿದ್ಧವಿದು
ಜೀವಜಾತಕ್ಕೊಡೆಯನಾ ರಾ
ಜೀವನಾಭನು ಬರಿಯಹಂಕಾ
ರಾವಲಂಬನದಿಂದ ಕೆಡುತಿಹುದಖಿಳ ಜಗವೆಂದ (ದ್ರೋಣ ಪರ್ವ, ೮ ಸಂಧಿ, ೬೧ ಪದ್ಯ)
ತಾತ್ಪರ್ಯ:
ಕಾಯುವ ಯೋಗ್ಯತೆ ನನಗಿಲ್ಲ. ಅರ್ಜುನನಿಗೆ ಕೊಲ್ಲುವ ಯೋಗ್ಯತೆಯೂ ಇಲ್ಲ. ಕಾಪಾಡಲೂ ಕೊಲ್ಲಲೂ ಶ್ರೀಕೃಷ್ಣನೊಬ್ಬನೇ ಸಮರ್ಥ. ಜೀವಜಾತಕ್ಕೆ ಅವನೇ ಒಡೆಯ. ಅಹಂಕರಿಸಿ ಈ ಜಗತ್ತು ಕೆಡುತ್ತಿದೆ ಎಂದು ದ್ರೋಣರು ಹೇಳಿದರು.
ಅರ್ಥ:
ಕಾವು: ಕಾಯು, ರಕ್ಷಿಸು; ಮೇಣ್: ಅಥವ; ಗಾಂಡೀವಿ: ಅರ್ಜುನ; ಕೊಲು: ಸಾಯಿಸು; ಸಮರ್ಥ: ಯೋಗ್ಯ; ಸಿದ್ಧ: ಸಾಧಿಸಿದವನು; ವೇದ: ಶೃತಿ; ಜೀವ: ಪ್ರಾಣ; ಒಡೆಯ: ರಾಜ; ರಾಜೀವನಾಭ: ನಾಭಿಯಲ್ಲಿ ಕಮಲವುಳ್ಳವ (ವಿಷ್ಣು); ಬರಿ: ಕೇವಲ; ಅಹಂಕಾರ: ಗರ್ವ; ಅವಲಂಬನ: ಆಶ್ರಯ; ಕೆಡು: ಹಾಳು; ಅಖಿಳ: ಎಲ್ಲಾ; ಜಗ: ಪ್ರಪಂಚ;
ಪದವಿಂಗಡಣೆ:
ಕಾವಡ್+ಎನ್ನಳವಲ್ಲ+ ಮೇಣ್ +ಗಾಂ
ಡೀವಿ +ಕೊಲುವವನಲ್ಲ +ಕೃಷ್ಣನು
ಕಾವರೆಯು +ಕೊಲುವರೆ +ಸಮರ್ಥನು +ವೇದಸಿದ್ಧವಿದು
ಜೀವಜಾತಕ್+ಒಡೆಯನಾ +ರಾ
ಜೀವನಾಭನು +ಬರಿ+ಅಹಂಕಾರ
ಅವಲಂಬನದಿಂದ +ಕೆಡುತಿಹುದ್+ಅಖಿಳ +ಜಗವೆಂದ
ಅಚ್ಚರಿ:
(೧) ಕೃಷ್ಣನ ಹಿರಿಮೆ – ಜೀವಜಾತಕ್ಕೊಡೆಯನಾ ರಾಜೀವನಾಭನು