ಪದ್ಯ ೧೧: ದುರ್ಯೊಧನನು ಯಾರನ್ನು ಸಮಾಧಾನ ಪಡಿಸಲು ಹೇಳಿದನು?

ಸಾಕದಂತಿರಲಿನ್ನು ವೈರಿ
ವ್ಯಾಕರಣಪಾಂಡಿತ್ಯದಲ್ಲಿ ವಿ
ವೇಕಶೂನ್ಯರು ನಾವು ಮೊದಲಾದೌರ್ಧ್ವದೈಹಿಕವ
ಆಕೆವಾಳರಿಗರುಹಿ ನೀವ
ಸ್ತೋಕಪುಣ್ಯರ ತಿಳುಹಿ ವಿಗಳಿತ
ಶೋಕರೆನಿಸುವುದಂಧನೃಪ ಗಾಂಧಾರಿದೇವಿಯರ (ಗದಾ ಪರ್ವ, ೧೦ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ಮಾತಿಗೆ ಉತ್ತರಿಸುತ್ತಾ ದುರ್ಯೋಧನನು, ಅದು ಹಾಗಿರಲಿ, ವೈರ್ಗಳೊಡನೆ ಮಾಡಿದ ಯುದ್ಧದಲ್ಲಿ ನಾವು ಅವಿವೇಕದಿಂದ ವರ್ತಿಸಿದ್ದೇವೆ. ನಮ್ಮನ್ನು ಸೇರಿಸಿ, ಎಲ್ಲರ ಅಂತ್ಯಕ್ರಿಯೆಗಳನ್ನು ಮಾಡಿಸಲು ವೀರರಿಗೆ ತಿಳಿಸಿರಿ. ನಮ್ಮ ತಂದೆ ತಾಯಿಗಳಾದ ಗಾಂಧಾರಿ, ಧೃತರಾಷ್ಟ್ರರನ್ನು ಸಮಾಧಾನ ಪಡಿಸಿ. ಅವರ ಶೋಕವನ್ನು ನಿವಾರಿಸಿರಿ ಎಂದು ಹೇಳಿದನು.

ಅರ್ಥ:
ಸಾಕು: ಕೊನೆ, ಅಂತ್ಯ; ವೈರಿ: ಶತ್ರು; ವ್ಯಾಕರಣ: ಭಾಷೆಯ ನಿಯಮಗಳನ್ನು ತಿಳಿಸುವ ಶಾಸ್ತ್ರ; ಪಾಂಡಿತ್ಯ: ವಿದ್ವತ್ತು, ಜ್ಞಾನ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಶೂನ್ಯ: ಬರಿದಾದುದು, ಇಲ್ಲವಾದುದು; ಮೊದಲು: ಮುಂಚೆ; ಉರ್ಧ್ವದೇಹಿಕ: ಸತ್ತ ಮೇಲೆ ಮಾಡುವ ಕರ್ಮ; ಆಕೆವಾಳ: ವೀರ, ಪರಾಕ್ರಮಿ; ಅರುಹು: ತಿಳಿಸು; ಅಸ್ತೋಕ: ಅಧಿಕವಾದ; ಪುಣ್ಯ: ಸದ್ಗುಣ ಯುಕ್ತವಾದ; ವಿಗಳಿತ: ಜಾರಿದ, ಸರಿದ; ಶೋಕ: ದುಃಖ; ಅಂಧನೃಪ: ಧೃತರಾಷ್ಟ್ರ;

ಪದವಿಂಗಡಣೆ:
ಸಾಕ್+ಅದಂತಿರಲ್+ಇನ್ನು+ ವೈರಿ
ವ್ಯಾಕರಣ+ಪಾಂಡಿತ್ಯದಲ್ಲಿ +ವಿ
ವೇಕ+ಶೂನ್ಯರು+ ನಾವು +ಮೊದಲಾದ್+ಊರ್ಧ್ವದೈಹಿಕವ
ಆಕೆವಾಳರಿಗ್+ಅರುಹಿ +ನೀವ್
ಅಸ್ತೋಕಪುಣ್ಯರ+ ತಿಳುಹಿ +ವಿಗಳಿತ
ಶೋಕರೆನಿಸುವುದ್+ಅಂಧನೃಪ +ಗಾಂಧಾರಿ+ದೇವಿಯರ

ಅಚ್ಚರಿ:
(೧) ದುರ್ಯೋಧನನು ತನ್ನ ತಪ್ಪನ್ನು ಒಪ್ಪಿಕೊಳ್ಳುವ ಪರಿ – ವೈರಿ ವ್ಯಾಕರಣಪಾಂಡಿತ್ಯದಲ್ಲಿ ವಿವೇಕಶೂನ್ಯರು ನಾವು

ಪದ್ಯ ೨೫: ಕೃಪಾಚಾರ್ಯರು ಕರ್ಣನ ಸೇನಾಧಿಪಟ್ಟಕ್ಕೆ ಏನು ಹೇಳಿದರು?

ಸಾಕದಂತಿರಲಿನ್ನು ಥಟ್ಟಿಂ
ಗಾಕೆವಾಳರ ಮಾಡು ಸಾಕಾ
ಸ್ತೋಕಪುಣ್ಯರ ಮಾತದೇತಕೆ ಗುರು ನದೀಸುತರ
ಸಾಕಿ ಸಲಹಿದ ಕರ್ಣನನು ಹುರು
ಡೇಕೆ ಗುಣದೊಳಗೀತ ಸೇನಾ
ನೀಕಭಾರದ ಹೊರಿಗೆಗಹನೆಂದನು ಕೃಪಾಚಾರ್ಯ (ಕರ್ಣ ಪರ್ವ, ೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕರ್ಣನ ಮಾತನ್ನು ಕೇಳಿದ ಕೃಪಾಚಾರ್ಯರು, ಚರ್ಚೆ ಸಾಕು, ವೀರರನ್ನು ಸೇನಾಧಿಪತ್ಯಕ್ಕೆ ಕೂಡಿಸು, ಭೀಷ್ಮ, ದ್ರೋಣರೆಂಬ ಅತಿಶಯ ಪುಣ್ಯಶಾಲಿಗಳ ಮಾತೇಕೆ? ನೀನು ಕರ್ಣನನ್ನು ಸಾಕಿ ಸಲಹಿದವನು ಅದರಲ್ಲಿ ಮತ್ಸರವೇಕೆ? ಸೇನಾಧಿಪತ್ಯದ ಹೊಣೆ ಹೊರಲು ಸಮರ್ಥನಾಗಿದ್ದಾನೆ ಎಂದು ಹೇಳಿದರು.

ಅರ್ಥ:
ಸಾಕು: ನಿಲ್ಲಿಸು; ಅದಂತಿರಲಿ: ಹಾಗಿರಲಿ; ಥಟ್ಟು: ಸೈನ್ಯ, ಮೋಹರ; ಆಕೆವಾಳ: ಶೂರ, ಪರಾಕ್ರಮಿ; ಅಸ್ತೋಕ: ಅಧಿಕವಾದ; ಪುಣ್ಯ: ಸದಾಚಾರ; ಮಾತು: ನುಡಿ; ಗುರು: ಆಚಾರ್ಯ (ದ್ರೋಣ); ನದೀಸುತ: ಭೀಷ್ಮ; ಸುತ: ಮಗ; ಸಾಕು: ಬೆಳೆಸು, ಪೋಷಿಸು; ಸಲಹು: ಕಾಪಾಡು; ಹುರುಡು: ಪೈಪೋಟಿ, ಸ್ಪರ್ಧೆ; ಗುಣ: ನಡತೆ, ಸ್ವಭಾವ; ಅನೀಕ: ಸೈನ್ಯ; ಭಾರ: ಹೊಣೆ; ಹೊರಿಗೆ: ಹೊರಲು; ಗಹನ: ಗೌರವಸ್ಥ;

ಪದವಿಂಗಡಣೆ:
ಸಾಕ್+ಅದಂತಿರಲ್+ಇನ್ನು +ಥಟ್ಟಿಂಗ್
ಆಕೆವಾಳರ+ ಮಾಡು +ಸಾಕ್
ಅಸ್ತೋಕ+ಪುಣ್ಯರ +ಮಾತದೇತಕೆ+ ಗುರು +ನದೀಸುತರ
ಸಾಕಿ +ಸಲಹಿದ +ಕರ್ಣನನು +ಹುರು
ಡೇಕೆ +ಗುಣದೊಳಗ್+ಈತ +ಸೇನ
ಅನೀಕ+ಭಾರದ +ಹೊರಿಗೆ+ಗಹನೆಂದನು+ ಕೃಪಾಚಾರ್ಯ

ಅಚ್ಚರಿ:
(೧) ಸಾಕ್ – ೩ ಬಾರಿ ಪ್ರಯೋಗ
(೨) ಅಸ್ತೋಕ, ಆಕೆವಾಳ, ಅನೀಕ – ಪದಗಳ ಬಳಕೆ