ಪದ್ಯ ೧೭: ಲೋಮಶನು ಯಾರ ಚರಿತ್ರೆಯನ್ನು ಧರ್ಮಜನಿಗೆ ತಿಳಿಸಿದನು?

ಚ್ಯವನ ಮುನಿಯ ವಿವಾಹವನು ರೂ
ಪವನು ಮುನಿಗಶ್ವಿನಿಗಳಿತ್ತುದ
ನವರಿಗಾ ಮುನಿಮಖ ಹವಿರ್ಭಾಗ ಪ್ರಸಂಗತಿಯ
ಅವರಿಗಿಂದ್ರನ ಮತ್ಸರವ ದಾ
ನವನ ನಿರ್ಮಾಣವನು ಬಳಿಕಿನೊ
ಳವನಿಪಗೆ ಮಾಂಧಾತ ಚರಿತವನೊರೆದನಾ ಮುನಿಪ (ಅರಣ್ಯ ಪರ್ವ, ೧೦ ಸಂಧಿ, ೧೭ ಪದ್ಯ)

ತಾತ್ಪರ್ಯ:
ಚ್ಯವನನ ವಿವಾಹ ಅಶ್ವಿನೀದೇವತೆತಳು ಅವನಿಗೆ ರೂಪವನ್ನು ಕೊಟ್ಟದ್ದು, ಅವರಿಗೆ ಯಾಗದ ಹವಿರ್ಭಾಗವನ್ನು ಕೊಟ್ಟಿದ್ದು ಅದರಿಂದ ಇಂದ್ರನಿಗೆ ಬಂದ ಹೊಟ್ಟೆಕಿಚ್ಚು, ರಾಕ್ಷಸನ ನಿರ್ಮಾಣ ಮೊದಲಾದವುಗಳನ್ನು ಹೇಳಿ ಲೋಮಶನು ಮಾಂಧಾತ ಚರಿತ್ರೆಯನ್ನು ಧರ್ಮಜನಿಗೆ ತಿಳಿಸಿದನು.

ಅರ್ಥ:
ಮುನಿ: ಋಷಿ; ವಿವಾಹ: ಮದುವೆ; ರೂಪ: ಆಕಾರ; ಮಖ: ಯಜ್ಞ; ಹವಿಸ್ಸು: ಹವಿ, ಚರು; ಹವಿ: ಯಜ್ಞದಲ್ಲಿ ಆಹುತಿ ಕೊಡುವ ತುಪ್ಪ; ಭಾಗ: ಅಂಶ, ಪಾಲು; ಪ್ರಸಂಗ: ಸೇರಿಕೆ, ಕೂಟ; ಮತ್ಸರ: ಹೊಟ್ಟೆಕಿಚ್ಚು; ದಾನವ: ರಾಕ್ಷಸ; ನಿರ್ಮಾಣ: ರಚಿಸು; ಬಳಿಕ: ನಂತರ; ಅವನಿಪ: ರಾಜ; ಚರಿತ: ಕಥೆ; ಉರೆ: ಅತಿಶಯವಾಗಿ;

ಪದವಿಂಗಡಣೆ:
ಚ್ಯವನ +ಮುನಿಯ +ವಿವಾಹವನು +ರೂ
ಪವನು +ಮುನಿಗ್+ಅಶ್ವಿನಿಗಳ್+ಇತ್ತುದನ್
ಅವರಿಗ್+ಆ+ ಮುನಿ+ಮಖ +ಹವಿರ್ಭಾಗ +ಪ್ರಸಂಗತಿಯ
ಅವರಿಗ್+ಇಂದ್ರನ +ಮತ್ಸರವ +ದಾ
ನವನ +ನಿರ್ಮಾಣವನು +ಬಳಿಕಿನೊಳ್
ಅವನಿಪಗೆ +ಮಾಂಧಾತ +ಚರಿತವನೊರೆದನಾ +ಮುನಿಪ

ಅಚ್ಚರಿ:
(೧) ಮುನಿ – ೧-೩ ಸಾಲಿನ ಎರಡನೇ ಪದ