ಬಂದರವರಿಬ್ಬರು ಮಹೀತಳ
ಕಿಂದುವದನೆಗೆ ಸುತರನಿತ್ತರು
ಮಂದಗಮನೆಯ ಕಳುಹಿ ಹಾಯ್ದರು ಗಗನ ಮಂಡಲಕೆ
ಒಂದು ವರುಷಕೆ ಕಿರಿಯರರ್ಜುನ
ನಿಂದ ಬಳಿಕವತರಿಸಿದರು ಮುನಿ
ವೃಂದ ನೆರೆ ಪತಿಕರಿಸಿ ಕೊಂಡಾಡಿತು ಕುಮಾರಕರ (ಆದಿ ಪರ್ವ, ೪ ಸಂಧಿ, ೬೬ ಪದ್ಯ)
ತಾತ್ಪರ್ಯ:
ಅವರಿಬ್ಬರೂ ಭೂಮಿಗೆ ಬಂದು ಮಾದ್ರಿಗೆ ಮಕ್ಕಳನ್ನು ಕರುಣಿಸಿ ಆಕಾಶಕ್ಕೆ ಹೋದರು. ಅರ್ಜುನನು ಜನಿಸಿದ ಒಂದು ವರ್ಷದ ನಂತರ ಮಾದ್ರಿಗೆ ಇಬ್ಬರು ಅವಳಿ ಮಕ್ಕಳು ಹುಟ್ಟಿದರು. ಋಷಿಗಳು ಅವರನ್ನು ಹೊಗಳಿದರು.
ಅರ್ಥ:
ಬಂದು: ಆಗಮಿಸು; ಮಹೀತಳ: ಭೂಮಿ; ಇಂದುವದನೆ: ಸುಂದರಿ, ಸ್ತ್ರಿ; ಸುತ: ಮಕ್ಕಳು; ಮಂದಗಮನೆ: ನಿಧಾನವಾಗಿ ಚಲಿಸುವ, ಸುಂದರಿ; ಕಳುಹಿ: ಬೀಳ್ಕೊಂಡು; ಹಾಯ್ದು: ಹಾರು; ಗಗನಮಂಡಲ: ಆಗಸ; ಮಂಡಲ: ವರ್ತುಲಾಕಾರ; ವರುಷ: ಸಂವತ್ಸರ; ಬಳಿಕ: ನಂತರ; ಅವತರಿಸು: ಹುಟ್ಟು; ವೃಂದ: ಗುಂಪು; ನೆರೆ: ಪಕ್ಕ, ಪಾರ್ಶ್ವ; ಪತಿಕರಿಸು: ಅನುಗ್ರಹಿಸು; ಕೊಂಡಾಡು: ಹೊಗಳು; ಕುಮಾರ: ಮಕ್ಕಳು;
ಪದವಿಂಗಡಣೆ:
ಬಂದರ್+ಅವರಿಬ್ಬರು+ ಮಹೀತಳಕ್
ಇಂದುವದನೆಗೆ +ಸುತರನ್+ಇತ್ತರು
ಮಂದಗಮನೆಯ +ಕಳುಹಿ +ಹಾಯ್ದರು+ ಗಗನ +ಮಂಡಲಕೆ
ಒಂದು +ವರುಷಕೆ +ಕಿರಿಯರ್+ಅರ್ಜುನ
ನಿಂದ+ ಬಳಿಕ್+ಅವತರಿಸಿದರು +ಮುನಿ
ವೃಂದ +ನೆರೆ +ಪತಿಕರಿಸಿ +ಕೊಂಡಾಡಿತು +ಕುಮಾರಕರ
ಅಚ್ಚರಿ:
(೧) ಮಾದ್ರೀ ದೇವಿಯನ್ನು ಕರೆದ ಪರಿ – ಇಂದುವದನೆ, ಮಂದಗಮನೆ