ಕಣೆಗೆದರಿ ದ್ರುಪದಾಂಕ ಗುರುವನು
ಕೆಣಕಿದನು ತತ್ತನುಜ ಭೀಷ್ಮನ
ಸೆಣಸಿದನು ಮೂದಲಿಸಿದನು ಲಕ್ಷಣನನಭಿಮನ್ಯು
ರಣಕೆ ಕರೆದನು ಕೌರವಾನುಜ
ಗಣವನನಿಲತನೂಜನಿತ್ತಲು
ಹೆಣಗಿದರು ಭಗದತ್ತ ಭೀಮಕುಮಾರರವಗಡಿಸಿ (ಭೀಷ್ಮ ಪರ್ವ, ೫ ಸಂಧಿ, ೫ ಪದ್ಯ)
ತಾತ್ಪರ್ಯ:
ದೃಪದನು ಬಾಣವನ್ನು ಹೂಡಿ ದ್ರೋಣನನ್ನು ಕೆಣಕಿದನು. ಧೃಷ್ಟದ್ಯುಮ್ನ, ಭೀಷ್ಮ, ಲಕ್ಷಣ, ಅಭಿಮನ್ಯು, ಭಗದತ್ತ, ಘಟೋತ್ಕಚರು ಪರಸ್ಪರ ಎದುರಾಗಿ ಕಾಳಗಕ್ಕೆ ನಿಂತರು. ಭೀಮನು ಕೌರವನ ತಮ್ಮಂದಿರನ್ನು ಮೂದಲಿಸಿ ಯುದ್ಧಕ್ಕೆ ಕರೆದನು.
ಅರ್ಥ:
ಕಣೆ: ಬಾಣ; ಕೆದರು: ಹರಡು; ಅಂಕ: ಯುದ್ಧ; ಗುರು: ಆಚಾರ್ಯ; ಕೆಣಕು: ರೇಗಿಸು, ಪ್ರಚೋದಿಸು; ತನುಜ: ಮಗ; ಸೆಣಸು: ಹೋರಾಡು; ಮೂದಲಿಸು: ಹಂಗಿಸು; ರಣ: ಯುದ್ಧ; ಕರೆ: ಬರೆಮಾಡು; ಅನುಜ: ತಮ್ಮ; ಗಣ: ಗುಂಪು; ಅನಿಲ: ವಾಯು; ತನೂಜ: ಮಗ; ಹೆಣಗು: ಹೋರಾಡು; ಅವಗಡಿಸು: ಕಡೆಗಣಿಸು, ಸೋಲಿಸು;
ಪದವಿಂಗಡಣೆ:
ಕಣೆ+ಕೆದರಿ +ದ್ರುಪದ+ಅಂಕ+ ಗುರುವನು
ಕೆಣಕಿದನು +ತತ್ತ್+ಅನುಜ +ಭೀಷ್ಮನ
ಸೆಣಸಿದನು +ಮೂದಲಿಸಿದನು +ಲಕ್ಷಣನನ್+ಅಭಿಮನ್ಯು
ರಣಕೆ +ಕರೆದನು +ಕೌರವ+ಅನುಜ
ಗಣವನ್+ಅನಿಲ+ತನೂಜನ್+ಇತ್ತಲು
ಹೆಣಗಿದರು +ಭಗದತ್ತ+ ಭೀಮ+ಕುಮಾರರ್+ಅವಗಡಿಸಿ
ಅಚ್ಚರಿ:
(೧) ಯುದ್ಧವನ್ನು ವಿವರಿಸಲು ಬಳಸಿದ ಪದಗಳು – ಕೆಣಕಿದನು, ಸೆಣಸಿದನು, ಮೂದಲಿಸಿದನು, ಕರೆದನು, ಹೆಣಗಿದರು, ಅವಗಡಿಸು