ಪದ್ಯ ೬:ಊಟದ ವಿನಿಯೋಗವು ಹೇಗೆ ನಡೆಯುತ್ತಿತ್ತು?

ಓಗರದ ರಾಶಿಗಳ ಗಿರಿ ಕಂ
ಡಾಗಲಂತಿರೆ ಮರಳಿ ಕಾಣೆನು
ಸಾಗರದವೊಲೆ ದಧಿ ಘೃತಾದಿ ಮಹಾಪ್ರವಾಹ ಚಯ
ಅಗಳಂತಿರೆ ಬತ್ತುವುವು ನಿಮಿಷಾ
ಗಮಕೆ ತುಂಬುವವು ಯಮಜನ
ಯಾಗಲಕ್ಷ್ಮಿಯನಲ್ಪಮತಿ ಬಣ್ಣಿಸುವಡರಿದೆಂದ (ಸಭಾ ಪರ್ವ, ೧೨ ಸಂಧಿ, ೬ ಪದ್ಯ)

ತಾತ್ಪರ್ಯ:
ಬೆಟ್ಟದಂತಿದ್ದ ಅನ್ನದ ರಾಶಿಗಳು ಕಂಡಕೂಡಲೇ ಇಲ್ಲದಂತಾಗುತ್ತಿದ್ದವು. ಹಾಲು, ಮೊಸರು, ತುಪ್ಪಗಳ ಪ್ರವಾಹ ಒಂದು ನಿಮಿಷಕ್ಕೆ ವಿನಿಯೋಗವಾದರೆ, ಮರುನಿಮಿಷವೇ ತುಂಬುತ್ತಿತ್ತು. ಧರ್ಮಜನ ಯಾಗಲಕ್ಷ್ಮಿಯನ್ನು ಅಲ್ಪಮತಿಗಳು ಹೇಗೆತಾನೆ ವರ್ಣಿಸಲು ಸಾಧ್ಯ?

ಅರ್ಥ:
ಓಗರ: ಅನ್ನ, ಆಹಾರ, ಊಟ; ರಾಶಿ: ಗುಂಪು, ಸಮೂಹ; ಗಿರಿ: ಬೆಟ್ಟ; ಕಂಡು: ನೋಡು; ಮರಳಿ: ಮತ್ತೆ; ಕಾಣು: ತೋರು; ಸಾಗರ: ಸಮುದ್ರ; ದಧಿ: ಮೊಸರು; ಘೃತ: ತುಪ್ಪ; ಪ್ರವಾಹ: ಹರಿಯುವಿಕೆ, ಪ್ರವಹಿಸುವಿಕೆ; ಮಹಾ: ದೊಡ್ಡ; ಚಯ: ಸಮೂಹ, ರಾಶಿ; ಬತ್ತು: ಒಣಗು, ಆರು, ಬರಿದಾಗು; ನಿಮಿಷ: ಕ್ಷಣ; ಆಗಮ: ಬರುವ; ತುಂಬು: ಪೂರ್ಣವಾಗು; ಯಾಗ: ಕ್ರತು; ಲಕ್ಷ್ಮಿ: ದೇವತೆ; ಅಲ್ಪಮತಿ: ತುಚ್ಛ,ಚಿಕ್ಕದು; ಬಣ್ಣಿಸು: ವರ್ಣಿಸು; ಅರಿ: ತಿಳಿ;

ಪದವಿಂಗಡಣೆ:
ಓಗರದ +ರಾಶಿಗಳ+ ಗಿರಿ+ ಕಂ
ಡಾಗಲಂತಿರೆ +ಮರಳಿ +ಕಾಣೆನು
ಸಾಗರದವೊಲೆ +ದಧಿ +ಘೃತಾದಿ +ಮಹಾಪ್ರವಾಹ +ಚಯ
ಆಗಳಂತಿರೆ+ ಬತ್ತುವುವು +ನಿಮಿ
ಷಾಗಮಕೆ+ ತುಂಬುವವು +ಯಮಜನ
ಯಾಗಲಕ್ಷ್ಮಿಯನ್+ಅಲ್ಪಮತಿ +ಬಣ್ಣಿಸುವಡ್+ಅರಿದೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಓಗರದ ರಾಶಿಗಳ ಗಿರಿ, ಸಾಗರದವೊಲೆ ದಧಿ, ಘೃತಾದಿ
(೨) ಬತ್ತು, ತುಂಬು – ವಿರುದ್ಧಾರ್ಥಕ ಪದ