ಪದ್ಯ ೪: ಕೀಚಕನ ಮೇಲೆ ಯಾರು ಬಾಣಗಳನ್ನು ತೂರಿದರು?

ಎಲವೊ ಕೀಚಕ ಹೋಗದಿರು ನಿ
ಲ್ಲೆಲವೊ ಹುಲು ಮಂಡಳಿಕ ನಿನ್ನಯ
ಬಲುಗಡಿಯ ತೋರುವುದು ನಿನ್ನಂತರದ ರಾಯರಲಿ
ತೊಲಗು ಸೈರಿಸೆನುತ್ತಲುರೆ ಬಿಲು
ಬಲುಸರಳ ಸರಿವಳೆಯ ಸುರಿಯ
ಲ್ಕಲಘು ವಿಕ್ರಮ ಕೀಚಕನು ಸವರಿದನು ಶರತತಿಯ (ಅರಣ್ಯ ಪರ್ವ, ೨೪ ಸಂಧಿ, ೪ ಪದ್ಯ)

ತಾತ್ಪರ್ಯ:
ಕೌರವ ವೀರರು, ಎಲವೋ ಕೀಚಕ ಹೋಗ ಬೇಡ, ನೀನು ಹುಲು ಮಂಡಲಿಕ. ನಿನ್ನ ಪರಾಕ್ರಮವನ್ನು ನಿನ್ನ ಸಮಾನ ರಾಜರೊಡನೆ ತೋರಿಸು, ಎಂದು ಕೌರವ ವೀರರು ಹೇಳಿ ಬಾಣಗಳ ಮಳೆಯನ್ನು ಸುರಿಸಲು, ಪರಾಕ್ರಮಿಯಾದ ಕೀಚಕನು ಆ ಬಾಣಗಳನ್ನು ಕಡಿದೆಸೆದನು.

ಅರ್ಥ:
ಹೋಗು: ತೆರಳು; ನಿಲ್ಲು: ತಡೆ; ಹುಲು: ಕ್ಷುಲ್ಲಕ; ಮಂಡಳಿಕ: ಒಂದು ಪ್ರಾಂತ್ಯದ ಅಧಿಪತಿ; ಬಲುಗಡಿ: ಮಹಾಪರಾಕ್ರಮ; ತೋರು: ಪ್ರದರ್ಶಿಸು; ರಾಯ: ರಾಜ; ತೊಲಗು: ತೆರಳು; ಸೈರಿಸು: ತಾಳು; ಬಿಲು: ಬಿಲ್ಲು; ಉರು: ವಿಶೇಷವಾದ; ಸರಳು: ಬಾಣ; ಸರಿವಳೆ: ಒಂದೇ ಸಮನಾಗಿ ಸುರಿವ ಮಳೆ; ಸುರಿ: ವರ್ಷಿಸು; ವಿಕ್ರಮ: ಪರಾಕ್ರಮಿ; ಸವರು: ನಾಶಗೊಳಿಸು; ಶರ: ಬಾಣ; ತತಿ: ಗುಂಪು; ಅಲಘು: ಭಾರವಾದ;

ಪದವಿಂಗಡಣೆ:
ಎಲವೊ +ಕೀಚಕ +ಹೋಗದಿರು +ನಿಲ್
ಎಲವೊ +ಹುಲು +ಮಂಡಳಿಕ +ನಿನ್ನಯ
ಬಲುಗಡಿಯ +ತೋರುವುದು +ನಿನ್ನಂತರದ+ ರಾಯರಲಿ
ತೊಲಗು +ಸೈರಿಸೆನುತ್ತಲ್+ಉರೆ +ಬಿಲು
ಬಲುಸರಳ+ ಸರಿವಳೆಯ+ ಸುರಿಯಲ್ಕ್
ಅಲಘು ವಿಕ್ರಮ +ಕೀಚಕನು +ಸವರಿದನು +ಶರತತಿಯ

ಅಚ್ಚರಿ:
(೧) ಕೀಚಕನನ್ನು ಹಂಗಿಸುವ ಪರಿ – ಎಲವೊ ಹುಲು ಮಂಡಳಿಕ
(೨) ಕೀಚಕನ ಪರಾಕ್ರಮ – ಅಲಘು ವಿಕ್ರಮ ಕೀಚಕನು ಸವರಿದನು ಶರತತಿಯ