ಎಲೆಲೆ ಕರ್ಣದ್ರೋಣ ಗುರುಸುತ
ರಲಘು ಭುಜಬಲ ಕೃಪನು ಹೊಕ್ಕಿರಿ
ದಳುಕಿದರು ಮಝ ಭಾಪುರೆಂತುಟೊ ಪಾರ್ಥನಗ್ಗಳಿಕೆ
ಗೆಲುವನೊಬ್ಬನೆ ನಮ್ಮ ಬಲದಲಿ
ನಿಲುಕಿ ಹಿಂಗುವ ಸುಭಟರಿನಿಬರು
ಸುಲಭವೆಮಗೀ ಸೋಲವೆಂದುದು ಕೂಡೆ ಕುರುಸೇನೆ (ವಿರಾಟ ಪರ್ವ, ೯ ಸಂಧಿ, ೪೭ ಪದ್ಯ)
ತಾತ್ಪರ್ಯ:
ಕೌರವನ ಸೇನೆಯವರು ಮಾತಾಡಿಕೊಳ್ಳುತ್ತಿದ್ದರು. ಎಲಾ ಕರ್ಣ, ದ್ರೋಣ, ಅಶ್ವತ್ಥಾಮ, ಕೃಪ ಇವರೆಲ್ಲರೂ ಅರ್ಜುನನೊಡನೆ ಸೆಣಸಿ ಸೋತು ಹೋದರು. ಅರ್ಜುನನ ಹಿರಿಮೆಯು ಎಷ್ಟಿದೆಯೋ ಏನೋ? ಗೆಲ್ಲುವವನು ಅವನೊಬ್ಬನು. ನಮ್ಮ ಸೈನ್ಯದ ವೀರರು ಅವನನ್ನೆದುರಿಸಿ ಹಿಂಜರಿಯುವವರು. ಆಹಾ ನಮಗೆ ಸೋಲು ಎಂಬುದು ಎಷ್ಟು ಸುಲಭ ಎಂದು ಮಾತಾಡಿಕೊಂಡರು.
ಅರ್ಥ:
ಅಲಘು: ಭಾರವಾದ; ಭುಜಬಲ: ಪರಾಕ್ರಮ; ಹೊಕ್ಕು: ಸೇರು; ಇರಿ: ಚುಚ್ಚು; ಅಳುಕು: ಹೆದರು, ನಡುಗು; ಮಝ: ಭಲೇ; ಭಾಪು: ಕೊಂಡಾಟದ ಒಂದು ಮಾತು; ಅಗ್ಗಳಿಕೆ: ಶ್ರೇಷ್ಠತೆ; ಗೆಲುವು: ಜಯ; ಬಲ: ಶಕ್ತಿ; ನಿಲುಕು: ಚಾಚುವಿಕೆ; ಹಿಂಗು: ಹಿಂದಕ್ಕೆ ಹೋಗು, ಹಿಂದೆ ಸರಿ; ಭಟ: ಸೈನಿಕ; ಇನಿಬರು: ಇಷ್ಟುಜನ; ಸುಲಭ: ನಿರಾಯಾಸ; ಸೋಲು: ಪರಾಭವ; ಕೂಡು: ಸೇರು, ಈಡೇರು;
ಪದವಿಂಗಡಣೆ:
ಎಲೆಲೆ +ಕರ್ಣ+ದ್ರೋಣ +ಗುರುಸುತರ್
ಅಲಘು +ಭುಜಬಲ+ ಕೃಪನು +ಹೊಕ್ಕಿರಿದ್
ಅಳುಕಿದರು +ಮಝ +ಭಾಪುರೆಂತುಟೊ+ ಪಾರ್ಥನ್+ಅಗ್ಗಳಿಕೆ
ಗೆಲುವನ್+ಒಬ್ಬನೆ +ನಮ್ಮ +ಬಲದಲಿ
ನಿಲುಕಿ +ಹಿಂಗುವ +ಸುಭಟರ್+ಇನಿಬರು
ಸುಲಭವ್+ಎಮಗೀ +ಸೋಲವೆಂದುದು +ಕೂಡೆ +ಕುರುಸೇನೆ
ಅಚ್ಚರಿ:
(೧) ಕೌರವ ಸೇನೆಯವರ ಸ್ಥಿತಿ – ನಮ್ಮ ಬಲದಲಿ ನಿಲುಕಿ ಹಿಂಗುವ ಸುಭಟರಿನಿಬರು ಸುಲಭವೆಮಗೀ ಸೋಲು