ಪದ್ಯ ೬೯: ಮಂದೇಹರುಗಳೆಂಬುವರು ಯಾರು?

ವರಕುಮಾರಕ ನೀನು ಕೇಳೈ
ಪಿರಿಯಲೋಕಾಲೋಕವೆಂಬಾ
ಗಿರಿಯ ಬಳಸಿದ ಕಾಳಕತ್ತಲೆಯೊಳಗೆ ಮೆರೆದಿಪ್ಪ
ಧರೆಯೊಳರುಣದ್ವೀಪವದರೊಳು
ನೆರೆದ ಮಂದೇಹರುಗಳೆಂಬ
ಚ್ಚರಿಯದಲಿ ಸರಸಿರುಹ ಸಂಭವನಿಂದ ಜನಿಸಿದರು (ಅರಣ್ಯ ಪರ್ವ, ೮ ಸಂಧಿ, ೬೯ ಪದ್ಯ)

ತಾತ್ಪರ್ಯ:
ಎಲೈ ಶ್ರೇಷ್ಠನಾದ ಅರ್ಜುನನೇ ಕೇಳು, ದೊಡ್ಡದಾದ ಲೋಕಾಲೋಕವೆಂಬ ಗಿರಿಯತ್ತಣ ಕಾಳಕತ್ತಲೆಯಲ್ಲಿ ಅರುಣ ದ್ವೀಪವಿದೆ. ಅದರಲ್ಲಿ ಬ್ರಹ್ಮನಿಂದ ಜನಿಸಿದ ಮಂದೇಹರೆಂಬ ಆಶ್ಚರ್ಯಕರರಾದ ಅಸುರರಿದ್ದಾರೆ.

ಅರ್ಥ:
ವರ: ಶ್ರೇಷ್ಠ; ಕುಮಾರ: ಮಗ; ಕೇಳು: ಆಲಿಸು; ಪಿರಿಯ: ದೊಡ್ಡ; ಲೋಕ: ಜಗತ್ತು; ಗಿರಿ: ಬೆಟ್ಟ; ಬಳಸು: ಆವರಿಸು; ಕಾಳಕತ್ತಲೆ: ಅಂಧಕಾರ; ಮೆರೆ:ಹೊಳೆ, ಪ್ರಕಾಶಿಸು; ಧರೆ: ಭೂಮಿ; ಅರುಣ: ಕೆಂಪು; ದ್ವೀಪ: ನೀರಿನಿಂದ ಆವರಿಸಿದ ಭೂಮಿ; ನೆರೆದ: ಒಟ್ಟುಗೂಡು; ಅಚ್ಚರಿ: ಆಶ್ಚರ್ಯ; ಸರಸಿರುಹ: ಕಮಲ; ಸಂಭವ: ಹುಟ್ಟು; ಜನಿಸು: ಹುಟ್ಟು; ಸರಸಿರುಹಸಂಭವ: ಬ್ರಹ್ಮ;

ಪದವಿಂಗಡಣೆ:
ವರ+ಕುಮಾರಕ +ನೀನು +ಕೇಳೈ
ಪಿರಿಯ+ಲೋಕಾಲೋಕವೆಂಬಾ
ಗಿರಿಯ +ಬಳಸಿದ+ ಕಾಳಕತ್ತಲೆಯೊಳಗೆ +ಮೆರೆದಿಪ್ಪ
ಧರೆಯೊಳ್+ಅರುಣ+ದ್ವೀಪವ್+ಅದರೊಳು
ನೆರೆದ+ ಮಂದೇಹರುಗಳೆಂಬ್
ಅಚ್ಚರಿಯದಲಿ +ಸರಸಿರುಹ ಸಂಭವನಿಂದ +ಜನಿಸಿದರು

ಅಚ್ಚರಿ:
(೧) ಅರುಣ ದ್ವೀಪ, ಲೋಕಾಲೋಕ ಗಿರಿ – ಸ್ಥಳಗಳ ವಿವರ
(೨) ಬ್ರಹ್ಮನನ್ನು ಸರಸಿರುಹಸಂಭವ ಎಂದು ಕರೆದಿರುವುದು