ಪದ್ಯ ೫: ದ್ರೌಪದಿ ಯಾರ ಬಳಿ ಬಂದು ತನ್ನ ಮನೋರಥವನ್ನು ಹೇಳಿದಳು?

ಅರಸನಲಿ ಮೇಣ್ ನಕುಲ ಸಹದೇ
ವರಲಿ ತನ್ನ ಮನೋರಥಕೆ ವಿ
ಸ್ತರಣವಾಗದು ನುಡಿವಡಿಲ್ಲರ್ಜುನ ಸಮೀಪದಲಿ
ಅರಿಭಯಂಕರ ಭೀಮನೇ ಗೋ
ಚರಿಸುವನಲಾಯೆನುತಲಾತನ
ಹೊರೆಗೆ ಬಂದಳು ನಗುತ ನುಡಿದಲು ಮಧುರ ವಚನದಲಿ (ಅರಣ್ಯ ಪರ್ವ, ೧೧ ಸಂಧಿ, ೫ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ಆ ಸುಗಂಧ ಹೂವಿನ ಪರಿಮಳ ಆಕರ್ಷಿಸಿತು. ಅದನ್ನು ನೋಡಲು ಬಯಸಿದ ಆಕೆ, ಧರ್ಮಜ, ನಕುಲ ಅಥವ ಸಹದೇವರಿಂದ ನನ್ನ ಆಶೆಯು ಪೂರೈಸಲಾಗುವುದಿಲ್ಲ ಎಂದು ಅರಿತು, ಅರ್ಜುನನು ಸಮೀಪದಲ್ಲಿರದ ಕಾರಣ, ವೈರಿಗಳಲ್ಲಿ ಭಯವನ್ನುಂಟುಮಾಡುವ ಭೀಮನೇ ಈ ಕಾರ್ಯಕ್ಕೆ ಸರಿಯೆಂದು ತಿಳಿದು ದ್ರೌಪದಿಯು ಆತನ ಬಳಿಗೆ ಹೋಗಿ ಮಧುರ ವಚನದಿಂದ ಹೀಗೆ ಹೇಳಿದಳು.

ಅರ್ಥ:
ಅರಸ: ರಾಜ; ಮೇಣ್: ಅಥವ; ಮನೋರಥ: ಕಾಮನೆ, ಆಸೆ; ವಿಸ್ತರಣ: ಹರಡು, ವಿಸ್ತಾರ; ನುಡಿ: ಮಾತು; ಸಮೀಪ: ಹತ್ತಿರ; ಅರಿ: ವೈರಿ; ಭಯಂಕರ: ಸಾಹಸಿ, ಗಟ್ಟಿಗ; ಗೋಚರಿಸು: ತೋರು; ಹೊರೆ: ಆಶ್ರಯ,ರಕ್ಷಣೆ; ಬಂದು: ಆಗಮಿಸು; ನಗು: ಸಂತಸ; ನುಡಿ: ಮಾತಾಡು; ಮಧುರ: ಸಿಹಿ; ವಚನ: ನುಡಿ, ಮಾತು;

ಪದವಿಂಗಡಣೆ:
ಅರಸನಲಿ +ಮೇಣ್ +ನಕುಲ +ಸಹದೇ
ವರಲಿ +ತನ್ನ +ಮನೋರಥಕೆ +ವಿ
ಸ್ತರಣವಾಗದು +ನುಡಿವಡಿಲ್ಲ್+ಅರ್ಜುನ +ಸಮೀಪದಲಿ
ಅರಿ+ಭಯಂಕರ+ ಭೀಮನೇ +ಗೋ
ಚರಿಸುವನಲಾ+ಎನುತಲ್+ಆತನ
ಹೊರೆಗೆ +ಬಂದಳು +ನಗುತ +ನುಡಿದಲು +ಮಧುರ +ವಚನದಲಿ

ಅಚ್ಚರಿ:
(೧) ಭೀಮನನ್ನು ಪರಿಚಯಿಸುವ ಪರಿ – ಅರಿಭಯಂಕರ
(೨) ಕೋರಿಕೆಯನ್ನು ತಿಳಿಸುವ ಮುನ್ನ – ಆತನ ಹೊರೆಗೆ ಬಂದಳು ನಗುತ ನುಡಿದಲು ಮಧುರ ವಚನದಲಿ

ಪದ್ಯ ೭೭: ದ್ರೌಪದಿಯು ಭೀಮನನ್ನು ನೋಡಲೇಕೆ ಅಂಜಿದಳು?

ಬರುತ ಕಂಡಳು ಭೀಮಸೇನನ
ಧುರಪರಾಕ್ರಮವಹ್ನಿ ಭುಗಿಲೆಂ
ದರಿ ಭಯಂಕರ ರೌದ್ರರೂಪಿನೊಳಿರಲು ಬರಲಂಜಿ
ತಿರುಗೆ ಕಂಡನು ಪವನಸುತ ಪಂ
ಕರುಹಮುಖಿಯನು ಕರೆದು ನಿನ್ನಯ
ಭರದ ಬಯಕೆಯಿದಾಯ್ತೆ ದಿಟ ನೋಡೆಂದು ತೋರಿಸಿದ (ಕರ್ಣ ಪರ್ವ, ೧೯ ಸಂಧಿ, ೭೭ ಪದ್ಯ)

ತಾತ್ಪರ್ಯ:
ಬರಬರುತ್ತಾ ದ್ರೌಪದಿಯು ಪರಾಕ್ರಮಾಗ್ನಿಯು ಭುಗಿಲೆಂದು ವೈರಿಗಳಿಗೆ ಭಯಂಕರ ರೂಪದಲ್ಲಿದ್ದ ಭೀಮನ ಬಳಿಗೆ ಬರಲು ಅಂಜಿ ಹಿಂದಿರುಗಿದಳು, ಇದನ್ನು ಕಂಡ ಭೀಮನು ದ್ರೌಪದಿಯನ್ನು ಕರೆದು ನಿನ್ನ ಬಯಕೆಯು ದಿಟವಾಯಿತಲ್ಲವೇ, ನೋಡು ಎಂದು ದುಶ್ಯಾಸನನನ್ನು ತೋರಿಸಿದನು.

ಅರ್ಥ:
ಬರುತ: ಆಗಮಿಸುತ್ತಾ; ಕಂಡು: ನೋಡು; ಧುರ: ಯುದ್ಧ; ಪರಾಕ್ರಮ: ವೀರ; ವಹ್ನಿ: ಬೆಂಕಿ; ಭುಗ್: ಬೆಂಕಿಯನ್ನು ಸೂಚಿಸುವ ಶಬ್ದ; ಅರಿ: ವೈರಿ; ಭಯಂಕರ: ಸಾಹಸಿ, ಗಟ್ಟಿಗ; ರೌದ್ರರೂಪ: ಕಾಳರುದ್ರನ ಪರಿ ತೋರುವ; ಬರಲು: ಆಗಮಿಸಲು; ಅಂಜಿ: ಹೆದರಿ; ತಿರುಗು: ಹಿಂದಿರುಗು; ಕಂಡು: ನೋಡು; ಪವನಸುತ: ಭೀಮ; ಪಂಕರುಹಮುಖಿ: ಕಮಲದ ಮುಖವುಳ್ಳವಳು (ದ್ರೌಪದಿ); ಕರೆ: ಬರೆಮಾಡು; ಭರದ: ಹೊರೆ, ಭಾರ, ಹೊಣೆ; ಬಯಕೆ: ಆಸೆ; ದಿಟ: ಸತ್ಯ; ತೋರಿಸು: ಪ್ರದರ್ಶಿಸು;

ಪದವಿಂಗಡಣೆ:
ಬರುತ +ಕಂಡಳು +ಭೀಮಸೇನನ
ಧುರ+ಪರಾಕ್ರಮ+ವಹ್ನಿ+ ಭುಗಿಲೆಂದ್
ಅರಿ +ಭಯಂಕರ+ ರೌದ್ರ+ರೂಪಿನೊಳ್+ಇರಲು +ಬರಲ್+ಅಂಜಿ
ತಿರುಗೆ +ಕಂಡನು +ಪವನಸುತ +ಪಂ
ಕರುಹಮುಖಿಯನು +ಕರೆದು+ ನಿನ್ನಯ
ಭರದ +ಬಯಕೆಯಿದಾಯ್ತೆ +ದಿಟ +ನೋಡೆಂದು +ತೋರಿಸಿದ

ಅಚ್ಚರಿ:
(೧) ಭೀಮನ ಸ್ವರೂಪ – ಧುರಪರಾಕ್ರಮವಹ್ನಿ ಭುಗಿಲೆಂದರಿ ಭಯಂಕರ ರೌದ್ರರೂಪಿನೊಳಿರಲು