ಹೊಗೆಯನೊದೆದೊಳಬಿದ್ದು ಕಿಡಿಗಳ
ನುಗಿದು ದಳ್ಳುರಿದುರುಗಲನು ತನಿ
ಬಿಗಿದು ಭೀಮನ ರಥದ ಸುತ್ತಲು ಸೂಸಿ ತೆರೆ ಮಸಗೆ
ಹಗೆಯನೆನಗಿದಿರೊಡ್ಡಿ ಜುಣುಗಲು
ಬಗೆದರೇ ಖಂಡೆಯದ ಮೊನೆಯಲಿ
ಮಗುಳಿಚುವರೇ ತನ್ನನೆನುತುರವಣಿಸಿತಮಳಾಸ್ತ್ರ (ದ್ರೋಣ ಪರ್ವ, ೧೯ ಸಂಧಿ, ೪೭ ಪದ್ಯ)
ತಾತ್ಪರ್ಯ:
ವರುಣಾಸ್ತ್ರವು ಹೊಗೆಯನ್ನು ಭೇದಿಸಿ ಒಳಹೊಕ್ಕು, ಭೀಮನ ರಥದ ಸುತ್ತಲೂ ನೀರಿನ ತೆರೆಯನ್ನು ನಿರ್ಮಿಸಿತು. ವರುಣಾಸ್ತ್ರದ ನೀರನ್ನು ಇದಿರು ಬಿಟ್ಟು ಜಾರಿಕೊಳ್ಳಲು ನೋಡುತ್ತಿದ್ದಾರೆ. ನನ್ನ ಕತ್ತಿಯ ಅಲುಗು ಕತ್ತರಿಸುವುದನ್ನು ಇವರು ತಪ್ಪಿಸುವರೋ ಎನ್ನುತ್ತಾ ನಾರಾಯಣಾಸ್ತ್ರವು ಮುನ್ನುಗ್ಗಿತು.
ಅರ್ಥ:
ಹೊಗೆ: ಧೂಮ; ಒದೆ: ನೂಕು; ಕಿಡಿ: ಬೆಂಕಿ; ಉಗಿ: ಹೊರಹಾಕು; ದಳ್ಳುರಿ: ದೊಡ್ಡಉರಿ; ತನಿ: ಹೆಚ್ಚಾಗು; ಬಿಗಿ: ಭದ್ರವಾಗಿರುವುದು; ರಥ: ಬಂಡಿ; ಸುತ್ತಲು: ಎಲ್ಲಾ ಕಡೆ; ಸೂಸು: ಎರಚು, ಚಲ್ಲು; ತೆರೆ: ತೆಗೆ, ಬಿಚ್ಚು; ಮಸಗು: ರೇಗು, ಸಿಟ್ಟುಗೊಳ್ಳು; ಹಗೆ: ವೈರಿ; ಜುಣುಗು: ಜಾರು; ಬಗೆ: ತಿಳಿ; ಖಂಡೆಯ: ಕತ್ತಿ, ಖಡ್ಗ; ಮೊನೆ: ತುದಿ, ಕೊನೆ; ಮಗುಳು: ಪುನಃ, ಮತ್ತೆ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಅಮಳ: ನಿರ್ಮಲ; ಅಸ್ತ್ರ: ಶಸ್ತ್ರ;
ಪದವಿಂಗಡಣೆ:
ಹೊಗೆಯನೊದೆದ್+ಒಳಬಿದ್ದು +ಕಿಡಿಗಳನ್
ಉಗಿದು +ದಳ್ಳುರಿದ್+ಉರುಗಲನು +ತನಿ
ಬಿಗಿದು +ಭೀಮನ +ರಥದ +ಸುತ್ತಲು +ಸೂಸಿ +ತೆರೆ +ಮಸಗೆ
ಹಗೆಯನ್+ಎನಗ್+ಇದಿರೊಡ್ಡಿ +ಜುಣುಗಲು
ಬಗೆದರೇ +ಖಂಡೆಯದ +ಮೊನೆಯಲಿ
ಮಗುಳಿಚುವರೇ +ತನ್ನನ್+ಎನುತ್+ಉರವಣಿಸಿತ್+ಅಮಳಾಸ್ತ್ರ
ಅಚ್ಚರಿ:
(೧) ಹೊಗೆ, ಹಗೆ, ಬಗೆ – ಪ್ರಾಸ ಪದಗಳು