ಲೇಸನಾಡಿದೆ ಮಗನೆ ಧರ್ಮದ
ಮೀಸಲಲ್ಲಾ ಮತಿ ಬಳಿ
ಕೈಸಲೇಯೆನುತವರು ಬಂದರು ಭೂಪತಿಯ ಹೊರೆಗೆ
ಆ ಸುಯೋಧನ ನಿನ್ನ ಮಗನ
ಲ್ಲೀ ಸಮಂಜಸ ಧರ್ಮಜನ ಹಿಡಿ
ದೀಸುವುದು ಭವಜಲನಿಧಿಯನೆಂದಮಳಮುನಿ ನುಡಿದ (ಗದಾ ಪರ್ವ, ೧೧ ಸಂಧಿ, ೩೩ ಪದ್ಯ)
ತಾತ್ಪರ್ಯ:
ವ್ಯಾಸರು ಮಾತನಾಡುತ್ತಾ, ಮಗೂ, ಧರ್ಮಜ, ನಿನ್ನ ಮತಿಯು ಧರ್ಮಕ್ಕೆ ಮೀಸಲಾದುದಲ್ಲವೇ! ಅದಕ್ಕೆ ಇಂತಹ ಒಳ್ಳೆಯ ಮಾತನ್ನಾಡಿದೆ ಎಂದನು. ಅವರು ಧೃತರಾಷ್ಟ್ರನ ಬಳಿಗೆ ಬಂದರು. ವ್ಯಾಸರು, ಧೃತರಾಷ್ಟ್ರ, ದುರ್ಯೋಧನನು ನಿನ್ನ ಮಗನಲ್ಲವೆಂದು ಭಾವಿಸು, ಧರ್ಮಜನನ್ನು ಸ್ವೀಕರಿಸಿ ಸಂಸಾರ ಸಮುದ್ರವನ್ನು ಈಜು ಎಂದು ಉಪದೇಶಿಸಿದನು.
ಅರ್ಥ:
ಲೇಸು: ಒಳಿತು; ಮಗ: ಪುತ್ರ; ಧರ್ಮ: ಧಾರಣೆ ಮಾಡಿದುದು; ಮೀಸಲು: ಮುಡಿಪು, ಪ್ರತ್ಯೇಕ; ಮತಿ: ಬುದ್ಧಿ; ಬಳಿಕ: ನಂತರ; ಐಸಲೇ: ಅಲ್ಲವೇ; ಬಂದು: ಆಗಮಿಸು; ಭೂಪತಿ: ರಾಜ; ಹೊರೆ: ಆಶ್ರಯ, ಹತ್ತಿರ; ಸಮಂಜಸ: ಯೋಗ್ಯವಾದುದು; ಹಿಡಿ: ಧರಿಸು; ಈಸು: ಬಾಳು; ಪೂರೈಸು; ಭವ: ಸಂಸಾರ; ಜಲನಿಧಿ: ಸಾಗರ; ಅಮಳ: ನಿರ್ಮಲ, ಪರಿಶುದ್ಧ; ಮುನಿ: ಋಷಿ; ನುಡಿ: ಮಾತಾಡು;
ಪದವಿಂಗಡಣೆ:
ಲೇಸನಾಡಿದೆ +ಮಗನೆ +ಧರ್ಮದ
ಮೀಸಲಲ್ಲಾ +ಮತಿ +ಬಳಿಕ್
ಐಸಲೇ+ ಎನುರ್+ಅವರು +ಬಂದರು +ಭೂಪತಿಯ +ಹೊರೆಗೆ
ಆ +ಸುಯೋಧನ +ನಿನ್ನ +ಮಗನ
ಲ್ಲೀ+ ಸಮಂಜಸ +ಧರ್ಮಜನ +ಹಿಡಿದ್
ಈಸುವುದು +ಭವಜಲನಿಧಿಯನ್+ಎಂದ್+ಅಮಳ+ಮುನಿ+ ನುಡಿದ
ಅಚ್ಚರಿ:
(೧) ವ್ಯಾಸರ ಸಲಹೆ – ಧರ್ಮಜನ ಹಿಡಿದೀಸುವುದು ಭವಜಲನಿಧಿಯನೆಂದಮಳಮುನಿ ನುಡಿದ
(೨) ಧರ್ಮಜನನ್ನು ಹೊಗಳಿದ ಪರಿ – ಲೇಸನಾಡಿದೆ ಮಗನೆ ಧರ್ಮದ ಮೀಸಲಲ್ಲಾ ಮತಿ