ಪತಿಕರಿಸಿದನು ನಮ್ಮನಹಿತ
ಸ್ಥಿತಿಯನೆಲ್ಲವ ತಿಳಿದನಮರಾ
ವತಿಯ ಸತಿಯರ ಸೋಂಕಿನಲಿ ಸೇರಿದನು ನಿಮಿಷದಲಿ
ಕ್ಷಿತಿಪನಂತ್ಯದೊಳಲ್ಲಿ ಶಸ್ತ್ರ
ಚ್ಯುತಿಯಮಾಡಿ ವಿರಾಗದಲಿ ವನ
ಗತಿಕರಾವೈತಂದೆವೆಂದರು ಗುರುಸುತಾದಿಗಳು (ಗದಾ ಪರ್ವ, ೧೧ ಸಂಧಿ, ೨೪ ಪದ್ಯ)
ತಾತ್ಪರ್ಯ:
ಅಶ್ವತ್ಥಾಮನೇ ಮೊದಲಾದವರು, ನಾವು ಶತ್ರು ಸಂಹಾರ ಮಾಡಿದುದನ್ನು ಕೇಳಿ ಅರಸನು ನಮ್ಮನ್ನು ಮನ್ನಿಸಿ ಸ್ವರ್ಗಸ್ಥನಾದನು. ದೊರೆಯು ಮರಣ ಹೊಂದಲು, ನಾವು ಶಸ್ತ್ರ ತ್ಯಾಗ ಮಾಡಿ, ವೈರಾಗ್ಯವನ್ನು ತಳೆದು ಕಾಡಿನಲ್ಲಿ ಅಲೆಯುತ್ತಾ ಬಂದೆವು ಎಂದರು.
ಅರ್ಥ:
ಪತಿಕರಿಸು: ಅನುಗ್ರಹಿಸು; ಅಹಿತ: ವೈರಿ, ಶತ್ರು; ಸ್ಥಿತಿ:ಇರವು, ಅಸ್ತಿತ್ವ; ತಿಳಿ: ಅರಿ; ಅಮರಾವತಿ: ಸ್ವರ್ಗ; ಸತಿ: ಹೆಣ್ಣು; ಸೋಂಕು: ಮುಟ್ಟುವಿಕೆ, ಸ್ಪರ್ಶ; ಸೇರು: ಜೊತೆಗೂಡು; ನಿಮಿಷ: ಕ್ಷಣಮಾತ್ರ; ಕ್ಷಿತಿಪ: ರಾಜ; ಅಂತ್ಯ: ಕೊನೆ; ಶಸ್ತ್ರ: ಆಯುಧ; ಚ್ಯುತಿ: ಜಾರುವುದು; ವಿರಾಗ: ವಿರಕ್ತಿ, ವೈರಾಗ್ಯ; ವನ: ಕಾಡು; ಗತಿ: ಗಮನ, ಸಂಚಾರ; ಐತಂದೆ: ಬಂದು ಸೇರು; ಗುರುಸುತ: ಅಶ್ವತ್ಥಾಮ; ಸುತ: ಮಗ; ಆದಿ: ಮುಂತಾದ;
ಪದವಿಂಗಡಣೆ:
ಪತಿಕರಿಸಿದನು +ನಮ್ಮನ್+ಅಹಿತ
ಸ್ಥಿತಿಯನ್+ಎಲ್ಲವ +ತಿಳಿದನ್+ಅಮರಾ
ವತಿಯ +ಸತಿಯರ +ಸೋಂಕಿನಲಿ +ಸೇರಿದನು +ನಿಮಿಷದಲಿ
ಕ್ಷಿತಿಪನ್+ಅಂತ್ಯದೊಳ್+ಅಲ್ಲಿ+ ಶಸ್ತ್ರ
ಚ್ಯುತಿಯಮಾಡಿ +ವಿರಾಗದಲಿ +ವನ
ಗತಿಕರಾವ್+ಐತಂದೆವ್+ಎಂದರು +ಗುರುಸುತಾದಿಗಳು
ಅಚ್ಚರಿ:
(೧) ಅಪ್ಸರೆ ಎಂದು ಹೇಳುವ ಪರಿ – ಅಮರಾವತಿಯ ಸತಿ
(೨) ಮರಣ ಹೊಂದಿದನು ಎಂದು ಹೇಳುವ ಪರಿ – ಕ್ಷಿತಿಪನಂತ್ಯ