ಮತ್ತೆ ಹೊಕ್ಕುದು ಭಟರಮಮ ದಿಗು
ಭಿತ್ತಿ ಬಿರಿಯಲು ಮೊರೆವ ಭೇರಿಯ
ಕಿತ್ತು ನೆಲ ಹೊಡೆಮರಳೆ ಮೊಳಗುವ ಪಟಹ ಡಿಂಡಿಮದ
ಹತ್ತು ಸಾವಿರ ನೃಪರು ರಿಪುಗಳ
ಮುತ್ತಿದರು ಮುಸುಕಿದರು ಮೆಯ್ಯಲಿ
ಮೆತ್ತಿದರು ಮೊನೆಗಣೆಗಳನು ಪಾಂಡವರ ಬಲದೊಳಗೆ (ದ್ರೋಣ ಪರ್ವ, ೧೫ ಸಂಧಿ, ೩೬ ಪದ್ಯ)
ತಾತ್ಪರ್ಯ:
ಕೌರವ ಭಟರು ಮತ್ತೆ ನುಗ್ಗಿದರು. ಭೇರಿಯ ಬಡಿತಕ್ಕೆ ದಿಕ್ಪಟಗಳು ಬಿರಿದವು. ನೆಲ ಮಗ್ಗುಲಾಗಿ ಬೀಳುವಂತೆ ಡಿಂಡಿಮ ಪಟಹಗಳನ್ನು ಬಡಿದರು. ಹತ್ತು ಸಾವಿರ ರಾಜರು ಮುತ್ತಿ ಬಾಣಗಳಿಂದ ಪಾಂಡವರ ಸೈನ್ಯದ ಯೋಧರ ಮೈಗಳನ್ನು ಮೆತ್ತಿದರು.
ಅರ್ಥ:
ಹೊಕ್ಕು: ಸೇರು; ಭಟ: ಸೈನಿಕ; ದಿಗು: ದಿಕ್ಕು; ಭಿತ್ತಿ: ಗೋಡೆ; ಬಿರಿ: ಬಿರುಕು, ಸೀಳು; ಮೊರೆ: ಧ್ವನಿ ಮಾಡು, ಝೇಂಕರಿಸು; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ; ಕಿತ್ತು: ಕಳಚು; ನೆಲ: ಭೂಮಿ; ಹೊಡೆಮರಳು: ಹಿಂದಕ್ಕೆ ತಿರುಗಿಸು; ಮೊಳಗು: ಧ್ವನಿ, ಸದ್ದು; ಪಟಹ: ನಗಾರಿ; ಡಿಂಡಿಮ: ಒಂದು ಬಗೆಯ ಚರ್ಮವಾದ್ಯ; ಸಾವಿರ: ಸಹಸ್ರ; ನೃಪ: ರಾಜ; ರಿಪು: ವೈರಿ; ಮುತ್ತು: ಆವರಿಸು; ಮುಸುಕು: ಹೊದಿಕೆ; ಯೋನಿ; ಮೆಯ್ಯಲಿ: ತನುವಿನಲ್ಲಿ; ಮೆತ್ತು: ಬಳಿ, ಲೇಪಿಸು; ಮೊನೆ: ತುದಿ, ಕೊನೆ; ಕಣೆ: ಬಾಣ; ಬಲ: ಸೈನ್ಯ;
ಪದವಿಂಗಡಣೆ:
ಮತ್ತೆ +ಹೊಕ್ಕುದು +ಭಟರ್+ಅಮಮ +ದಿಗು
ಭಿತ್ತಿ+ ಬಿರಿಯಲು +ಮೊರೆವ +ಭೇರಿಯ
ಕಿತ್ತು +ನೆಲ +ಹೊಡೆಮರಳೆ+ ಮೊಳಗುವ +ಪಟಹ +ಡಿಂಡಿಮದ
ಹತ್ತು +ಸಾವಿರ +ನೃಪರು +ರಿಪುಗಳ
ಮುತ್ತಿದರು +ಮುಸುಕಿದರು +ಮೆಯ್ಯಲಿ
ಮೆತ್ತಿದರು +ಮೊನೆಗಣೆಗಳನು +ಪಾಂಡವರ +ಬಲದೊಳಗೆ
ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮುತ್ತಿದರು ಮುಸುಕಿದರು ಮೆಯ್ಯಲಿ ಮೆತ್ತಿದರು ಮೊನೆಗಣೆಗಳನು