ಎವಗೆ ದೈವವು ನೀನು ಗುರು ನೀ
ನೆವಗೆ ತಾತನು ನೀನು ಮಹದಾ
ಹವದೊಳಗೆ ಪತಿಕರಿಸಿ ರಕ್ಷಿಸಲೊಡೆಯ ನೀನೆಮಗೆ
ಅವನಿಯಭಿಲಾಷೆಯಲಿ ತೆತ್ತುದು
ಬವರವೆಮಗಿನ್ನೇನು ಗತಿ ಕೌ
ರವ ಜಯೋಪಾಯಕ್ಕೆ ಹದನೇನೆಂದು ನೃಪ ನುಡಿದ (ಭೀಷ್ಮ ಪರ್ವ, ೨ ಸಂಧಿ, ೩೨ ಪದ್ಯ)
ತಾತ್ಪರ್ಯ:
ಧರ್ಮಜನು ಆಚಾರ್ಯ ದ್ರೋಣರಿಗೆ ವಂದಿಸಿ, ನೀವೇ ನಮಗೆ ದೈವಸ್ವರೂಪರು, ನಮಗೆ ಆಚಾರ್ಯರು, ತಂದೆಯೂ ಸಹ ನೀವೆ, ಈ ಯುದ್ಧದಲ್ಲಿ ನಮ್ಮನ್ನು ರಕ್ಷಿಸ್ವುಅ ಒಡೆಯನೂ ನೀನೆ, ಭೂಮಿಯ ಮೇಲಿನ ಆಶೆಯಿಂದ ಈ ಯುದ್ಧವು ಘಟಿಸಿದೆ, ಕೌರವನನ್ನು ಜಯಿಸುವ ಬಗೆಯೇನು, ಎಂದು ದ್ರೋಣನನ್ನು ಕೇಳಿದನು.
ಅರ್ಥ:
ದೈವ: ಭಗವಂತ; ಗುರು: ಆಚಾರ್ಯ; ತಾತ: ತಂದೆ; ಆಹವ: ಯುದ್ಧ; ಪತಿಕರಿಸು: ಅನುಗ್ರಹಿಸು; ರಕ್ಷಿಸು: ಕಾಪಾಡು; ಒಡೆಯ: ದೊರೆ; ಅವನಿ: ಭೂಮಿ; ಅಭಿಲಾಷೆ: ಇಚ್ಛೆ; ತೆತ್ತು: ಒಡ್ದು; ಬವರ: ಯುದ್ಧ; ಗತಿ: ಅವಸ್ಥೆ; ಜಯ: ಗೆಲುವು; ಹದ: ಸ್ಥಿತಿ; ನೃಪ: ರಾಜ; ನುಡಿ: ಮಾತಾಡು;
ಪದವಿಂಗಡಣೆ:
ಎವಗೆ +ದೈವವು +ನೀನು +ಗುರು+ ನೀನ್
ಎವಗೆ +ತಾತನು +ನೀನು +ಮಹದ್
ಆಹವದೊಳಗೆ+ ಪತಿಕರಿಸಿ+ ರಕ್ಷಿಸಲ್+ಒಡೆಯ +ನೀನೆಮಗೆ
ಅವನಿ+ಅಭಿಲಾಷೆಯಲಿ +ತೆತ್ತುದು
ಬವರವ್+ಎಮಗಿನ್ನೇನು +ಗತಿ+ ಕೌ
ರವ+ ಜಯೋಪಾಯಕ್ಕೆ +ಹದನೇನೆಂದು +ನೃಪ +ನುಡಿದ
ಅಚ್ಚರಿ:
(೧) ಆಹವ, ಬವರ – ಸಮನಾರ್ಥಕ ಪದಗಳು