ಪದ್ಯ ೧೬: ಕೌರವ ಸೈನ್ಯದ ಸ್ಥಿತಿ ಹೇಗಿತ್ತು?

ಜರಿದುದಬ್ಜವ್ಯೂಹ ನೂಕಿದ
ಕರಿ ತುರಗ ಕಾಲಾಳು ತೇರಿನ
ಮರಳುದಲೆ ತಾನಿಲ್ಲ ನೆರೆ ನುಗ್ಗಾಯ್ತು ಕುರುಸೇನೆ
ದೊರೆಗಳಹ ದ್ರೋಣಾದಿಗಳು ಕೈ
ಮರೆದು ಕಳೆದರು ಪಾರ್ಥತನಯನ
ಸರಿಯೊರೆಗೆ ಭಟನಾವನೆಂದನು ಕೌರವರ ರಾಯ (ದ್ರೋಣ ಪರ್ವ, ೫ ಸಂಧಿ, ೧೬ ಪದ್ಯ
)

ತಾತ್ಪರ್ಯ:
ದುರ್ಯೋಧನನು ಕೌರವ ಸೈನ್ಯವನ್ನು ನೋಡಿ, ಪದ್ಮವ್ಯೂಹವು ಆಕಾರ ಕೆಟ್ಟು ಪಲಾಯನ ಮಾಡಿತು. ಆನೆ ಕುದುರೆ ರಥ ಕಾಲಾಳುಗಳು ಯುದ್ಧಮಾಡಿ ಬದುಕಿ ಬರಲಿಲ್ಲ. ಕೌರವ ಸೈನ್ಯವು ಪುದಿಪುಡಿಯಾಯಿತು. ನಾಯಕರಾದ ದ್ರೋಣನೇ ಮೊದಲಾದವರು ತಮ್ಮ ಕೈಯ ಚಾತುರ್ಯವನ್ನೇ ಮರೆತರು. ಅಭಿಮನ್ಯುವಿಗೆ ಸರಿಸಮಾನ ವೀರನಾರು ಎಂದು ಉದ್ಗರಿಸಿದರು.

ಅರ್ಥ:
ಜರಿ: ಓಡಿಹೋಗು, ಪಲಾಯನ ಮಾಡು; ಅಬ್ಜ: ತಾವರೆ; ವ್ಯೂಹ: ಗುಂಪು; ನೂಕು: ತಳ್ಳು; ಕರಿ: ಆನೆ; ತುರಗ: ಅಶ್ವ; ಕಾಲಾಳು: ಸೈನಿಕ; ತೇರು: ಬಂಡಿ, ರಥ; ಮರಳು: ಹಿಂದಿರುಗು; ನೆರೆ: ಪಕ್ಕ, ಪಾರ್ಶ್ವ, ಮಗ್ಗುಲು; ನುಗ್ಗು: ತಳ್ಳು; ದೊರೆ: ರಾಜ; ಆದಿ: ಮುಂತಾದ; ಮರೆ: ನೆನಪಿನಿಂದ ದೂರ ಮಾಡು; ಕಳೆ: ವ್ಯಯಿಸು; ತನಯ: ಮಗ; ಒರೆ: ಗುಣ, ಉಜ್ಜು, ತಿಕ್ಕು; ಭಟ: ಸೈನಿಕ; ರಾಯ: ರಾಜ;

ಪದವಿಂಗಡಣೆ:
ಜರಿದುದ್+ಅಬ್ಜವ್ಯೂಹ +ನೂಕಿದ
ಕರಿ +ತುರಗ +ಕಾಲಾಳು +ತೇರಿನ
ಮರಳುದಲೆ+ ತಾನಿಲ್ಲ +ನೆರೆ +ನುಗ್ಗಾಯ್ತು +ಕುರುಸೇನೆ
ದೊರೆಗಳಹ+ ದ್ರೋಣಾದಿಗಳು +ಕೈ
ಮರೆದು +ಕಳೆದರು+ ಪಾರ್ಥ+ತನಯನ
ಸರಿಯೊರೆಗೆ +ಭಟನಾವನ್+ಎಂದನು +ಕೌರವರ+ ರಾಯ

ಅಚ್ಚರಿ:
(೧) ಸೋತರು ಎಂದು ಹೇಳುವ ಪರಿ – ದೊರೆಗಳಹ ದ್ರೋಣಾದಿಗಳು ಕೈಮರೆದು ಕಳೆದರು