ತಾಯೆ ಹದುಳಿಸು ದೇವಲೋಕದ
ಲಾಯದಲಿ ಸಲಿಸಾ ಕುಮಾರರ
ನಾಯುಷದ ಲಿಪಿ ಹಣೆಯಲೊರಸಿದಡಾರ ವಶವಿದಕೆ
ರಾಯನಲಿ ಸೊಸೆಯರಿಗೆ ಮಿಕ್ಕಬು
ಜಾಯತಾಕ್ಷಿಯರಿಗೆ ವಿಶೋಕದ
ಬಾಯಿನವ ಕೊಡಿಸೆಂದನಾ ಮುನಿ ಸುಬಲನಂದನೆಗೆ (ಗದಾ ಪರ್ವ, ೧೧ ಸಂಧಿ, ೧೪ ಪದ್ಯ)
ತಾತ್ಪರ್ಯ:
ವ್ಯಾಸರು ಗಾಂಧಾರಿಯನ್ನುದ್ದೇಶಿಸಿ, ತಾಯಿ, ಹಣೆಯ ಮೇಲೆ ಬರೆದ ಆಯುಷ್ಯದ ಲಿಪಿ ಅಳಿಸಿ ಹೊದರೆ ಯಾರು ಮಾಡುವುದೇನು? ಸಮಾಧಾನದಿಮ್ದ ನಿನ್ನ ಮಕ್ಕಳ ಪಿತೃ ಕಾರ್ಯವನ್ನು, ಅವರನ್ನು ದೇವಲೋಕಕ್ಕೆ ಹೋಗಲು ಏನು ಮಾಡಿಸಬೇಕೋ ಅದನ್ನು ಮಾಡಿಸು. ನಿನ್ನ ಸೊಸೆಯರ ಶೋಕವನ್ನು ಸಮಾಧಾನ ಪಡಿಸಿದರೆ ಅದು ಅವರಿಗೆ ಬಾಗಿನ ಎಂದು ಹೇಳಿದನು.
ಅರ್ಥ:
ತಾಯೆ: ಮಾತೆ; ಹದುಳಿಸು: ಸಮಾಧಾನಗೊಳ್ಳು, ನೆಮ್ಮದಿಗೊಳ್ಳು; ದೇವಲೋಕ: ಸ್ವರ್ಗ; ಲಾಯ: ಅಶ್ವಶಾಲೆ; ಸಲಿಸು: ದೊರಕಿಸಿ ಕೊಡು, ಪೂರೈಸು; ಕುಮಾರ: ಮಕ್ಕಳು; ಆಯುಷ: ಜೀವಿತಾವಧಿ; ಲಿಪಿ: ಬರಹ; ಹಣೆ: ಲಲಾಟ; ಒರಸು: ಅಳಿಸು; ವಶ: ಅಧೀನ, ಅಂಕೆ; ರಾಯ: ರಾಜ; ಸೊಸೆ: ಮಗನ ಹೆಂಡತಿ; ಮಿಕ್ಕ: ಉಳಿದ; ಅಬುಜಾಯತಾಕ್ಷಿ: ಕಮಲದಂತ ಕಣ್ಣುಳ್ಳವಳು (ಹೆಣ್ಣು); ವಿಶೋಕ: ದುಃಖ; ಬಾಯಿನ: ಬಾಗಿನ, ಉಡುಗೊರೆ; ಕೊಡು: ನೀದು; ಮುನಿ: ಋಷಿ; ನಂದನೆ: ಮಗಳು;
ಪದವಿಂಗಡಣೆ:
ತಾಯೆ +ಹದುಳಿಸು +ದೇವಲೋಕದ
ಲಾಯದಲಿ +ಸಲಿಸ್+ಆ +ಕುಮಾರರನ್
ಆಯುಷದ +ಲಿಪಿ +ಹಣೆಯಲ್+ಒರಸಿದಡ್+ಆರ+ ವಶವಿದಕೆ
ರಾಯನಲಿ+ ಸೊಸೆಯರಿಗೆ +ಮಿಕ್ಕ್+ಅಬು
ಜಾಯತಾಕ್ಷಿಯರಿಗೆ+ ವಿಶೋಕದ
ಬಾಯಿನವ +ಕೊಡಿಸೆಂದನಾ +ಮುನಿ +ಸುಬಲ+ನಂದನೆಗೆ
ಅಚ್ಚರಿ:
(೧) ಗಾಂಧಾರಿಯನ್ನು ತಾಯೆ, ಸುಬಲನಂದನೆ ಎಂದು ಕರೆದಿರುವುದು
(೨) ಸ್ವರ್ಗವೆಂದು ಹೇಳಲು – ದೇವಲೋಕದ ಲಾಯ ಪದದ ಬಳಕೆ
(೩) ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳುವ ಪರಿ – ಕುಮಾರರ ನಾಯುಷದ ಲಿಪಿ ಹಣೆಯಲೊರಸಿದಡಾರ ವಶವಿದಕೆ