ಖಳನ ಮನದಿಂಗಿತವನಾಗಳೆ
ತಿಳಿದು ಕಾಮಿನಿ ಬೆದರಿದಳು ಕಳ
ವಳಿಗ ಸೋತನು ಕೆಟ್ಟೆನೆಂದಳು ತನ್ನ ಮನದೊಳಗೆ
ತೊಲಗಿ ಹಿಂದಡಿಯಿಡಲು ಕೀಚಕ
ನಳುಕದೈತಂದಬುಜವದನೆಯ
ಬಳಿಗೆ ಬಂದನು ನುಡಿಸಲಾಗದೆ ತರಳೆ ನೀನೆಂದ (ವಿರಾಟ ಪರ್ವ, ೨ ಸಂಧಿ, ೧೮ ಪದ್ಯ)
ತಾತ್ಪರ್ಯ:
ಕೀಚಕನ ಮನಸ್ಸಿನ ಇಂಗಿತವನ್ನು ದ್ರೌಪದಿ ತಿಳಿದಳು. ಇವನು ಕಾಮದ ಕಳವಳಕ್ಕೆ ಗುರಿಯಾಗಿದ್ದಾನೆ, ನಾನು ಕೆಟ್ಟೆ ಎಂದು ಯೋಚಿಸಿ, ಹಿಂದಕ್ಕೆ ಹೆಜ್ಜೆಯಿಟ್ಟಳು, ಅವನು ಹೆದರದೆ ಅವಳ ಬಳಿಗೆ ಬಂದು, ತರಳೆ ನನ್ನನ್ನು ಮಾತನಾಡಿಸಬಾರದೇ ಎಂದು ಕೇಳಿದನು.
ಅರ್ಥ:
ಖಳ: ದುಷ್ಟ; ಮನ: ಮನಸ್ಸು; ಇಂಗಿತ: ಆಶಯ, ಅಭಿಪ್ರಾಯ; ತಿಳಿ: ಅರಿ; ಕಾಮಿನಿ: ಹೆಣ್ಣು; ಬೆದರು: ಹೆದರು; ಕಳವಳ: ಗೊಂದಲ; ಸೋತು: ಪರಾಭವ; ಕೆಟ್ಟೆ: ನಾಶ, ಕೆಡು; ಮನ: ಮನಸ್ಸು; ತೊಲಗು: ದೂರ ಸರಿ; ಹಿಂದಡಿ: ಹಿಮ್ಮೆಟ್ಟು; ಅಳುಕು: ಹೆದರು; ಐತಂದು: ಬಂದು ಸೇರು; ಅಬುಜವದನೆ: ಕಮಲದಂತಹ ಮುಖ; ಬಳಿ: ಹತ್ತಿರ; ನುಡಿಸು: ಮಾತನಾಡು; ತರಳೆ: ಹೆಣ್ಣು;
ಪದವಿಂಗಡಣೆ:
ಖಳನ+ ಮನದ್+ಇಂಗಿತವನ್+ಆಗಳೆ
ತಿಳಿದು +ಕಾಮಿನಿ +ಬೆದರಿದಳು+ ಕಳ
ವಳಿಗ +ಸೋತನು +ಕೆಟ್ಟೆನೆಂದಳು +ತನ್ನ +ಮನದೊಳಗೆ
ತೊಲಗಿ +ಹಿಂದಡಿಯಿಡಲು+ ಕೀಚಕನ್
ಅಳುಕದ್+ಐತಂದ್+ಅಬುಜವದನೆಯ
ಬಳಿಗೆ +ಬಂದನು +ನುಡಿಸಲಾಗದೆ+ ತರಳೆ +ನೀನೆಂದ
ಅಚ್ಚರಿ:
(೧) ಕಾಮಿನಿ, ಅಬುಜವದನೆ, ತರಳೆ – ದ್ರೌಪದಿಯನ್ನು ಕರೆದ ಪರಿ