ಪದ್ಯ ೬೧: ಭೀಮನು ಕೌರವರನ್ನು ಹೇಗೆ ಹಂಗಿಸಿದನು?

ಕಪಟದಲಿ ಜೂಜಾಡಿ ರಾಜ್ಯವ
ನಪಹರಿಸಿದಡೆ ಧರ್ಮ ನಿಮ್ಮದು
ಕೃಪಣತೆಯ ನಾನೇನ ಹೇಳುವೆನಾ ಸುಯೋಧನನ
ದ್ರುಪದಪುತ್ರಿಯ ಗಾಢ ಗರುವಿಕೆ
ಗುಪಹತಿಯ ಮಾಡುವುದು ಧರ್ಮದ
ವಿಪುಳ ಪಥ ನಿಮ್ಮದು ಮಹಾಧರ್ಮಜ್ಞರಹಿರೆಂದ (ಗದಾ ಪರ್ವ, ೧೧ ಸಂಧಿ, ೬೧ ಪದ್ಯ)

ತಾತ್ಪರ್ಯ:
ಕಪಟದ ಜೂಜನ್ನಾಡಿ ರಾಜ್ಯವನ್ನು ಅಪಹರಿಸಿದುದು ನಿಮ್ಮ ಧರ್ಮ, ದುರ್ಯೋಧನನ ತುಚ್ಛ ವರ್ತನೆಯನ್ನು ಏನೆಂದು ಹೇಳಲಿ? ದ್ರೌಪದಿಯ ಮಾನವನ್ನು ಭಂಗ ಮಾಡುವ ಉತ್ತಮ ಧರ್ಮಮಾರ್ಗ ನಿಮ್ಮದು, ನೀವು ಮಹಾಧರ್ಮಜ್ಞರು ಎಂದು ಗಾಂಧಾರಿಗೆ ಹೇಳಿದನು.

ಅರ್ಥ:
ಕಪಟ: ಮೋಸ; ಜೂಜು: ದ್ಯೂತ; ರಾಜ್ಯ: ರಾಷ್ಟ್ರ; ಅಪಹರಿಸು: ಕಳ್ಳತನ, ಎಗರಿಸು; ಧರ್ಮ: ಧಾರಣೆ ಮಾಡಿದುದು, ಸನ್ಮಾರ್ಗ; ಕೃಪಣ: ದೈನ್ಯದಿಂದ ಕೂಡಿದುದು; ಪುತ್ರಿ: ಮಗಳು; ಗಾಢ: ಹೆಚ್ಚಳ, ಅತಿಶಯ; ಗರುವಿಕೆ: ದೊಡ್ಡಸ್ತಿಕೆ; ಉಪಹತಿ: ಹೊಡೆತ, ತೊಂದರೆ; ವಿಪುಳ: ಬಹಳ, ವಿಸ್ತಾರ; ಪಥ: ಮಾರ್ಗ; ಮಹಾ: ಶ್ರೇಷ್ಠ; ಧರ್ಮಜ್ಞ: ಧರ್ಮವನ್ನು ತಿಳಿದವ;

ಪದವಿಂಗಡಣೆ:
ಕಪಟದಲಿ +ಜೂಜಾಡಿ +ರಾಜ್ಯವನ್
ಅಪಹರಿಸಿದಡೆ +ಧರ್ಮ+ ನಿಮ್ಮದು
ಕೃಪಣತೆಯ +ನಾನೇನ +ಹೇಳುವೆನ್+ಆ+ ಸುಯೋಧನನ
ದ್ರುಪದಪುತ್ರಿಯ +ಗಾಢ +ಗರುವಿಕೆಗ್
ಉಪಹತಿಯ +ಮಾಡುವುದು +ಧರ್ಮದ
ವಿಪುಳ +ಪಥ +ನಿಮ್ಮದು +ಮಹಾಧರ್ಮಜ್ಞರಹಿರೆಂದ

ಅಚ್ಚರಿ:
(೧) ಗ ಕಾರದ ಜೋಡಿ ಪದ – ಗಾಢ ಗರುವಿಕೆಗುಪಹತಿಯ
(೨) ಧರ್ಮ, ಧರ್ಮದ ವಿಪುಳ ಪಥ, ಮಹಾಧರ್ಮಜ್ಞರು – ಧರ್ಮ ಪದದ ಬಳಕೆ

ಪದ್ಯ ೯೩: ದತ್ತಾಪಹಾರ ಮಾಡಿದರೇನಾಗುತ್ತದೆ?

ತನ್ನ ದಾನವನಪಹರಿಸಿ ಕೊಂ
ಡನ್ಯರಿತ್ತುದಕಡ್ಡ ಬೀಳುವ
ಕುನ್ನಿಜನರರವತ್ತು ಸಾವಿರ ವರುಷ ಪರಿಯಂತ
ಭಿನ್ನವಿಲ್ಲದೆ ವಿಷ್ಠೆಯೊಳು ಕ್ರಿಮಿ
ಜನ್ಮದಲ್ಲಿಹರಿದನರಿದು ನೀ
ನಿನ್ನು ಕೊಟ್ಟುದನುಳುಹಿಕೊಳ್ವುದು ಧರ್ಮವಲ್ಲೆಂದ (ಉದ್ಯೋಗ ಪರ್ವ, ೪ ಸಂಧಿ, ೯೩ ಪದ್ಯ)

ತಾತ್ಪರ್ಯ:
ನಾವು ದಾನಕೊಟ್ಟದ್ದನ್ನು ಹಿಂಪಡೆಯುವುದು, ಬೇರೆಯವರು ನೀಡುವ ದಾನವನ್ನು ತಡೆಯುವುದು ಇವೆರಡನ್ನು ಮಾಡುವ ನಾಯಿಸಮಾನನಾದ ಮನುಷ್ಯನು ೬೦ ಸಾವಿರ ವರ್ಷಗಳ ಪರಿಯಂತ ಅವಿಚ್ಛಿನ್ನವಾಗಿ ಕ್ರಿಮಿಯಾಗಿರುತ್ತಾರೆ. ಇದನ್ನರಿತು ನೀನು ದತ್ತಾಪಹಾರ ಮಾಡಬೇಡ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ತನ್ನ: ಅವನ; ದಾನ: ಕೊಡುಗೆ; ಅಪಹರಿಸು: ತೆಗೆದುಕೊ; ಅನ್ಯರು: ಬೇರೆಯವರು; ಅಡ್ಡ: ಅಡಚಣೆ; ಕುನ್ನಿ: ನಾಯಿ; ಜನ: ಮನುಷ್ಯ; ಸಾವಿರ: ಸಹಸ್ರ; ವರುಷ: ಸಂವತ್ಸರ; ಪರಿ: ನಡೆ, ಸಾಗು; ಭಿನ್ನ: ತುಂಡು, ಭೇದ; ವಿಷ್ಥೆ: ಆಮೇಧ್ಯ; ಕ್ರಿಮಿ: ಕೀಟ; ಜನ್ಮ: ಜನನ; ಅರಿ: ತಿಳಿ; ಕೊಟ್ಟು: ನೀಡಿದ; ಅಳುಹು: ಬಯಸು, ಅಪೇಕ್ಷಿಸು; ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ಉಳುಹು: ಕಾಪಾಡು, ಸಂರಕ್ಷಿಸು;

ಪದವಿಂಗಡಣೆ:
ತನ್ನ ದಾನವನ್+ಅಪಹರಿಸಿ +ಕೊಂಡ್
ಅನ್ಯರ್+ಇತ್ತುದಕ್+ಅಡ್ಡ+ ಬೀಳುವ
ಕುನ್ನಿ+ಜನರ್+ಅರವತ್ತು +ಸಾವಿರ +ವರುಷ +ಪರಿಯಂತ
ಭಿನ್ನವಿಲ್ಲದೆ +ವಿಷ್ಠೆಯೊಳು +ಕ್ರಿಮಿ
ಜನ್ಮದಲ್ಲಿಹರ್+ಇದನ್+ಅರಿದು +ನೀ
ನಿನ್ನು +ಕೊಟ್ಟುದನ್+ಉಳುಹಿಕೊಳ್ವುದು +ಧರ್ಮವಲ್ಲೆಂದ

ಅಚ್ಚರಿ:
(೧) ಈ ಸಂಸ್ಕೃತ ಶ್ಲೋಕವನ್ನು ಉಚ್ಚರಿಸುವ ಪದ್ಯ
ಸ್ವದತ್ತತ್ ದ್ವಿಗುಣಂ ಪುಣ್ಯಂ ಪರದತ್ತನುಪಲನಂ
ಪರದತ್ತಪಹರನೇಣ ಸ್ವದತ್ತಂ ನಿಷ್ಫಲಂ ಭವೇತ್
ಸ್ವದತ್ತಂ ಪರದತ್ತಂ ವ ಯೋ ಹರೇತ ವಸುಂಧರಂ
ಷಷ್ಠಿವರ್ಷಸಹಸ್ರಾಣಿ ವಿಷ್ಟಂ ಜಾಯತೇ ಕ್ರಿಮಿಃ
(೨) ಕುಮಾರವ್ಯಾಸ ಬಯ್ಯುವ ರೀತಿ – ಕುನ್ನಿಜನರು