ಪದ್ಯ ೫: ಧರ್ಮಜನು ತನ್ನ ತಮ್ಮಂದಿರ ಬಗ್ಗೆ ಏನು ಯೋಚಿಸಿದ?

ನೃಪತಿ ನಿಶ್ಚೈಸಿದನು ಮತ್ಸ್ಯಾ
ಧಿಪನ ನಗರಿಯೊಳಲ್ಲಿ ಸೈರಿಸಿ
ಕೃಪಣತನದಲಿ ನೂಕಬೇಹುದು ನುಡಿದ ವತ್ಸರವ
ಗುಪಿತವೆಂತಳವಡುವುದಾಶ್ರಯ
ದಪದೆಸೆಯನೆಂತಾನುವಿರಿ ನಿ
ಷ್ಕೃಪೆಯೊಳೆಂತಾನೆಂಬೆನೆಂದನು ಧರ್ಮನಂದನನು (ವಿರಾಟ ಪರ್ವ, ೧ ಸಂಧಿ, ೫ ಪದ್ಯ)

ತಾತ್ಪರ್ಯ:
ಧರ್ಮಜನು ಮತ್ಸ್ಯನಗರದಲ್ಲಿ ವಿರಾಟನ ಆಶ್ರಯದಲ್ಲಿ ಒಂದು ವರ್ಷ ದೈನ್ಯದಿಂದಿರುವುದನ್ನು ನಿಶ್ಚಯಿಸಿ ತಮ್ಮಂದಿರಿಗೆ ನಾವು ಗುಪ್ತವಾಗಿರುವುದಾದರೂ ಹೇಗೆ? ನಿಮ್ಮಂತಹ ವೀರರು ಇನ್ನೊಬ್ಬರ ಆಶ್ರಯದಲ್ಲಿರುವ ಅಪದೆಸೆಯನ್ನು ಹೇಗೆ ಸೈರಿಸೀರಿ? ಕರುಣೆಯಿಲ್ಲದೆ ಹೀಗಿರಬೇಕೆಂದು ನಾನು ನಿಮಗೆ ಹೇಗೆ ತಾನೆ ಅಪ್ಪಣೆನೀಡಲಿ ಎಂದನು.

ಅರ್ಥ:
ನೃಪತಿ: ರಾಜ; ನಿಶ್ಚೈಸು: ನಿರ್ಧರಿಸು; ಅಧಿಪ: ರಾಜ; ನಗರ: ಊರು; ಸೈರಿಸು: ತಾಳು, ಸಹಿಸು; ಕೃಪಣ: ದೀನ, ದೈನ್ಯದಿಂದ ಕೂಡಿದುದು; ನೂಕು: ತಳ್ಳು; ನುಡಿ: ಮಾತು; ವತ್ಸರ: ವರ್ಷ; ಗುಪಿತ: ಗುಪ್ತ; ಆಶ್ರಯ: ಆಸರೆ, ಅವಲಂಬನ; ಅಪದೆಸೆ: ದುರ್ವಿಧಿ, ದುರದೃಷ್ಟ; ನಿಷ್ಕೃಪೆ: ಕರುಣೆ ಇಲ್ಲದ; ನಂದನ: ಮಗ;

ಪದವಿಂಗಡಣೆ:
ನೃಪತಿ +ನಿಶ್ಚೈಸಿದನು+ ಮತ್ಸ್ಯಾ
ಧಿಪನ +ನಗರಿಯೊಳಲ್ಲಿ+ ಸೈರಿಸಿ
ಕೃಪಣ+ತನದಲಿ +ನೂಕಬೇಹುದು +ನುಡಿದ +ವತ್ಸರವ
ಗುಪಿತವೆಂತ್+ಅಳವಡುವುದ್+ಆಶ್ರಯದ್
ಅಪದೆಸೆಯನ್+ಎಂತಾನುವಿರಿ+ ನಿ
ಷ್ಕೃಪೆಯೊಳ್+ಎಂತಾನೆಂಬೆನ್+ಎಂದನು +ಧರ್ಮ+ನಂದನನು

ಅಚ್ಚರಿ:
(೧) ಒಂದು ವರ್ಷವನ್ನು ಕಳೆಯುವ ಪರಿ – ಕೃಪಣತನದಲಿ ನೂಕಬೇಹುದು ನುಡಿದ ವತ್ಸರವ

ಪದ್ಯ ೫೬: ಧರ್ಮರಾಯನ ಸ್ಥಿತಿ ಹೇಗಿತ್ತು?

ಹಣುಗಿತರಸನ ವದನ ತಾಳಿಗೆ
ಯೊಣಗಿತವನಿಗೆ ನಟ್ಟದಿಟ್ಟಿಯ
ಮಣಿದ ನೆನಹಿನ ಮುರಿದ ಮಹಿಮೆಯ ತಾಗಿದಪದೆಸೆಯ
ಜುಣುಗಿದುಬ್ಬಿನ ಸತ್ಯದಲಿ ಕೇ
ವಣಿಸಿದರಿವಿನ ವಿಕೃತ ಕರ್ಮದ
ಕುಣಿಕೆಗೊಲೆದೊಲೆದರಸನಿದ್ದನು ಹೊತ್ತ ದುಗುಡದಲಿ (ಸಭಾ ಪರ್ವ, ೧೭ ಸಂಧಿ, ೫೬ ಪದ್ಯ)

ತಾತ್ಪರ್ಯ:
ಧರ್ಮರಾಯನ ಮುಖವು ಬಾಡಿತು, ಗಂಟಲು ಒಣಗಿತು, ದೃಷ್ಟಿಯು ಭೂಮಿಯ ಕಡೆಗೇ ಇತ್ತು. ಅವನ ಆಲೋಚನೆ ತಲೆಕೆಳಗಾಗಿತ್ತು. ಅವನ ಹಿರಿಮೆಯು ಮುರಿದು ಬಿದ್ದಿತ್ತು. ದುರ್ದೆಸೆಯು ಆವರಿಸಿತ್ತು. ಉತ್ಸಾಹವು ಜಾರಿಹೋಗಿತ್ತು. ಸತ್ಯಪಾಲನೆಯಲ್ಲಿಯೇ ನಟ್ಟ ಮನಸ್ಸಿನ ಪಾಪಕರ್ಮದ ಕುಣಿಕೆಗೆ ಸಿಕ್ಕು ಅತ್ತಿತ್ತ ಓಲಾಡುತ್ತಿದ್ದ ಅವನು ದುಃಖವನ್ನು ಹೊತ್ತು ಕುಳಿತಿದ್ದನು.

ಅರ್ಥ:
ಹಣುಗು: ಹಿಂಜರಿ, ಹೊಂಚು; ಅರಸ: ರಾಜ; ವದನ: ಮುಖ; ತಾಳಿಗೆ: ಗಂಟಲು; ಒಣಗು: ಬಾಡು, ನೀರಿಲ್ಲದ ಸ್ಥಿತಿ; ನಟ್ಟ: ನಡು, ಒಳಹೊಕು; ದಿಟ್ಟಿ: ಲಕ್ಷ್ಯ, ಗಮನ, ಕಣ್ಣು; ಮಣಿ: ಬಾಗು; ನೆನಹು: ಯೋಚನೆ; ಮುರಿ: ಸೀಳು; ಮಹಿಮೆ: ಹಿರಿಮೆ; ತಾಗು: ಸೋಕು; ಅಪದೆಸೆ: ದುರ್ದಸೆ; ಜುಣುಗು: ನುಣುಚಿಕೊಳ್ಳುವಿಕೆ, ಜಾರಿಕೊಳು; ಉಬ್ಬು: ಹಿಗ್ಗು; ಸತ್ಯ: ನಿಜ, ದಿಟ; ಕೇವಣಿ: ಮೆಟ್ಟುವುದು; ಅರಿವು: ತಿಳಿವು; ವಿಕೃತ: ಮನಸ್ಸಿನ ವಿಕಾರ, ವಿಚಿತ್ರ; ಕರ್ಮ: ಕಾರ್ಯ; ಕುಣಿಕೆ: ಹಗ್ಗದ ತುದಿಯಲ್ಲಿ ಹಾಕಿದ ಗಂಟು; ಒಲೆ: ತೂಗಾಡು; ಅರಸ: ರಾಜ; ಹೊತ್ತು: ಬೆಂದು ಹೋಗು; ದುಗುಡ: ದುಃಖ;

ಪದವಿಂಗಡಣೆ:
ಹಣುಗಿತ್+ಅರಸನ +ವದನ +ತಾಳಿಗೆ
ಒಣಗಿತ್+ಅವನಿಗೆ +ನಟ್ಟ+ದಿಟ್ಟಿಯ
ಮಣಿದ +ನೆನಹಿನ +ಮುರಿದ+ ಮಹಿಮೆಯ +ತಾಗಿದ್+ಅಪದೆಸೆಯ
ಜುಣುಗಿದ್+ಉಬ್ಬಿನ +ಸತ್ಯದಲಿ+ ಕೇ
ವಣಿಸಿದ್+ಅರಿವಿನ +ವಿಕೃತ +ಕರ್ಮದ
ಕುಣಿಕೆಗ್+ಒಲೆದೊಲೆದ್+ಅರಸನಿದ್ದನು +ಹೊತ್ತ +ದುಗುಡದಲಿ

ಅಚ್ಚರಿ:
(೧) ಧರ್ಮರಾಯನ ಸ್ಥಿತಿ – ಕೇವಣಿಸಿದರಿವಿನ ವಿಕೃತ ಕರ್ಮದ ಕುಣಿಕೆಗೊಲೆದೊಲೆದರಸನಿದ್ದನು ಹೊತ್ತ ದುಗುಡದಲಿ

ಪದ್ಯ ೨೮: ಯುಧಿಷ್ಠಿರನ ಮನಸ್ಥಿತಿ ಹೇಗಾಯಿತು?

ಬೆರಗು ಬೆಳೆದುದು ಮನದ ಮಿಡುಕಿನ
ಮರುಕ ಮುಂದಲೆಗೊಟ್ಟುದರಿವಿನ
ಸೆರಗು ಹಾರಿತು ಲಜ್ಜೆ ಬೆಳಗಿತು ಬಿಟ್ಟಬೀದಿಯಲಿ
ಉರುಬಿತಪದೆಸೆ ರಾಜ್ಯಲಕ್ಷ್ಮಿಯ
ತುರುಬು ಕೈದೊಳಸಾಯ್ತು ಹಗೆಗಾ
ನರಿಯೆನರಸನ ವಿರಸ ಚೀತೋಭಾವ ಭಂಗಿಗಳ (ಸಭಾ ಪರ್ವ, ೧೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಆಶ್ಚರ್ಯವು ಹೆಚ್ಚಾಯಿತು, ಮನಸ್ಸನ್ನು ಆವರಿಸಿದ ದುಗುಡವು ಅವನ ತಲೆಯ ಮುಂಭಾಗವನ್ನು ಹಿಡಿಯಿತು, ಜ್ಞಾನದ ಸೆರಗು ಕಳಚಿತು, ನಡುಬೀದಿಯಲ್ಲಿ ಮಾನವು ಅಪಹರಣವಾಯಿತು. ದುರಾದೃಷ್ಟವು ಅವನನ್ನು ಆಕ್ರಮಿಸಿತು. ಅವನ ರಾಜ್ಯಲಕ್ಷ್ಮಿಯ ತುರುಬನ್ನು ಶತ್ರುವು ಹಿಡಿದನು. ಅವನ ಅರಿವಿನ ಭಾವಗಳ ಬಗೆಯನ್ನು ನಾನು ತಿಳಿಯೆ ಜನಮೇಜಯ ಎಂದು ವೈಶಂಪಾಯನರು ಹೇಳಿದರು.

ಅರ್ಥ:
ಬೆರಗು: ಆಶ್ಚರ್ಯ; ಬೆಳೆದು: ಹೆಚ್ಚಾಗು; ಮನ: ಮನಸ್ಸು; ಮಿಡುಕು: ಅಲುಗಾಟ, ಚಲನೆ, ನಡುಕ; ಮರುಕ: ಬೇಗುದಿ, ಅಳಲು; ಮುಂದಲೆ: ತಲೆಯ ಮುಂಭಾಗ; ಅರಿವು: ತಿಳುವಳಿಕೆ; ಸೆರಗು: ಬಟ್ಟೆಯ ತುದಿಯ ಭಾಗ; ಹಾರು: ಎಗರು, ಜಿಗಿ; ಲಜ್ಜೆ: ಬೆಳಗು: ಹೊಳಪು, ಕಾಂತಿ; ಬೀದಿ: ಮಾರ್ಗ, ದಾರಿ; ಬಿಟ್ಟಬೀದಿ: ನಡುರಸ್ತೆ; ಉರುಬು: ಅತಿಶಯವಾದ ವೇಗ; ಅಪದೆಸೆ: ದುರದೃಷ್ಟ; ತುರುಬು: ಕೂದಲಿನ ಗಂಟು, ಮುಡಿ; ಕೈ: ಹಸ್ತ; ಹಗೆ: ವೈರಿ; ಅರಿ: ತಿಳಿ; ಅರಸ: ರಾಜ; ವಿರಸ: ಸತ್ವವಿಲ್ಲದ, ವಿರೋಧ; ಚೇತಸ್ಸು: ಪ್ರಜ್ಞೆ, ಬುದ್ಧಿ ಶಕ್ತಿ; ಭಂಗಿ: ಠೀವಿ, ಗತ್ತು;

ಪದವಿಂಗಡಣೆ:
ಬೆರಗು +ಬೆಳೆದುದು +ಮನದ +ಮಿಡುಕಿನ
ಮರುಕ +ಮುಂದಲೆ+ಕೊಟ್ಟುದ್+ಅರಿವಿನ
ಸೆರಗು +ಹಾರಿತು +ಲಜ್ಜೆ +ಬೆಳಗಿತು+ ಬಿಟ್ಟಬೀದಿಯಲಿ
ಉರುಬಿತ್+ಅಪದೆಸೆ +ರಾಜ್ಯಲಕ್ಷ್ಮಿಯ
ತುರುಬು +ಕೈದೊಳಸಾಯ್ತು +ಹಗೆಗ್
ಆನ್+ಅರಿಯೆನ್+ಅರಸನ+ ವಿರಸ +ಚೀತೋಭಾವ +ಭಂಗಿಗಳ

ಅಚ್ಚರಿ:
(೧) ಯುಧಿಷ್ಠಿರನ ಸ್ಥಿತಿ: ಅರಿವಿನ ಸೆರಗು ಹಾರಿತು ಲಜ್ಜೆ ಬೆಳಗಿತು ಬಿಟ್ಟಬೀದಿಯಲಿ
(೨) ಅರಸ, ವಿರಸ – ಪ್ರಾಸ ಪದ
(೩) ರಾಜ್ಯವು ಕಳಚಿತು ಎಂದು ಹೇಳಲು – ರಾಜ್ಯಲಕ್ಷ್ಮಿಯ ತುರುಬು ಕೈದೊಳಸಾಯ್ತು ಹಗೆಗ್

ಪದ್ಯ ೧೯: ಶಕುನಿಯು ಹೇಗೆ ಜಯವನ್ನು ಪಡೆಯುತ್ತೇನೆ ಎಂದನು?

ಕಪಟವನು ನೆರೆ ಮಾಡಿ ಜೂಜಿನೊ
ಳು ಪರಿಕಾರ್ಯವ ಜೈಸಿ ಕೊಡುವೆನು
ನಿಪುಣರೆನ್ನಂದದಲಿ ಲೋಕದೊಳಿಲ್ಲ ಕೈತವದ
ಅಪದೆಸೆಗೆ ಭಯಗೊಳ್ಳದಿರು ನಿ
ಷ್ಕೃಪೆಯಲಿರು ಗುರು ಭೀಷ್ಮ ವಿದುರಾ
ದ್ಯಪಸದರ ಕೈಕೊಳ್ಳದಿರು ನೀನೆಂದನಾ ಶಕುನಿ (ಸಭಾ ಪರ್ವ, ೧೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ಶಕುನಿಯು ತನ್ನ ಮಾತನ್ನು ಮುಂದುವರಿಸುತ್ತಾ, ದುರ್ಯೋಧನ ಜೂಜಿನಲ್ಲಿ ಕಪಟವನ್ನು ಮಾಡಿ ನಾನು ನಿನಗೆ ಜಯವನ್ನು ದೊರಕಿಸಿಕೊಡುತ್ತೇನೆ. ಮೋಸದಲ್ಲಿ ನನ್ನಷ್ಟು ನಿಪುಣರಾದವರು ಈ ಲೋಕದಲ್ಲೇ ಇಲ್ಲ. ಅಪಕೀರ್ತಿಗೆ ನೀನು ಹೆದರಬೇಡ. ನಿಷ್ಕರುಣೆಯಿಂದ ವರ್ತಿಸು. ಭೀಷ್ಮ ವಿದುರ ಮೊದಲಾದ ಅಯೋಗ್ಯರನ್ನು ನೀನು ಅನುಸರಿಸಬೇಡ ಎಂದನು.

ಅರ್ಥ:
ಕಪಟ: ಮೋಸ; ನೆರೆ: ಹೆಚ್ಚು; ಜೂಜು: ದ್ಯೂತ ಕ್ರೀಡೆ; ಪರಿ: ಪರಿಹರಿಸು, ನಾಶಮಾಡು, ಚಲಿಸು; ಕಾರ್ಯ: ಕೆಲಸ; ಜೈಸಿ: ಗೆದ್ದು; ನಿಪುಣ: ಚಾಣಾಕ್ಷ; ಲೋಕ: ಜಗತ್ತು; ಕೈತವ: ಕಪಟ, ವಂಚನೆ; ಅಪದೆಸೆ: ದುರದೃಷ್ಟ; ಭಯ: ಅಂಜಿಕೆ; ನಿಷ್ಕೃಪೆ; ದಯೆಯಿಲ್ಲದ; ಗುರು: ಆಚಾರ್ಯ; ಆದಿ: ಮುಂತಾದ; ಸದರ: ಸಲಿಗೆ, ಸಸಾರ; ಕೈಕೊಳ್ಳು: ಪಡೆ, ದೊರಕು, ಸ್ವೀಕರಿಸು;

ಪದವಿಂಗಡಣೆ:
ಕಪಟವನು +ನೆರೆ +ಮಾಡಿ +ಜೂಜಿನೊ
ಳು +ಪರಿಕಾರ್ಯವ +ಜೈಸಿ +ಕೊಡುವೆನು
ನಿಪುಣರೆನ್ನಂದದಲಿ+ ಲೋಕದೊಳಿಲ್ಲ+ ಕೈತವದ
ಅಪದೆಸೆಗೆ+ ಭಯಗೊಳ್ಳದಿರು +ನಿ
ಷ್ಕೃಪೆಯಲಿರು+ ಗುರು +ಭೀಷ್ಮ +ವಿದುರಾ
ದ್ಯಪ+ಸದರ+ ಕೈಕೊಳ್ಳದಿರು +ನೀನೆಂದನಾ +ಶಕುನಿ

ಅಚ್ಚರಿ:
(೧) ಶಕುನಿಯ ನಿಪುಣತೆ – ನಿಪುಣರೆನ್ನಂದದಲಿ ಲೋಕದೊಳಿಲ್ಲ ಕೈತವದ

ಪದ್ಯ ೧೩: ಕೃಷ್ಣನು ಕರ್ಣನಿಗೆ ಏನು ಹೇಳಿದ?

ಏನು ಹೇಳೈ ಕರ್ಣ ಚಿತ್ತ
ಗ್ಲಾನಿಯಾವುದು ಮನಕೆ ಕುಂತೀ
ಸೂನುಗಳ ಬೆಸಕೈಸಿ ಕೊಂಬುದು ಸೇರದೇ ನಿನಗೆ
ಹಾನಿಯಿಲ್ಲೆನ್ನಾಣೆ ನುಡಿ ದು
ಮ್ಮಾನವೇತಕೆ ಮರುಳುತನ ಬೇ
ಡಾನು ನಿನ್ನಪದೆಸೆಯ ಬಯಸುವನಲ್ಲ ಕೇಳೆಂದ (ಉದ್ಯೋಗ ಪರ್ವ, ೧೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕರ್ಣನು ಚಿಂತಾಕ್ರಾಂತನಾಗಿರುವುದನ್ನು ಕಂಡು ಕೃಷ್ಣನು, ಕರ್ಣ ಚಿತ್ತದಲ್ಲಿ ಏನು ದುಗುಡವಾಗಿದೆ ಏಕೆ ಸುಮ್ಮನೆ ಮೌನವಾಗಿದ್ದೀಯ? ಪಾಂಡವರನ್ನು ಓಲೈಸುವುದು ನಿನಗೆ ಇಷ್ಟವಲ್ಲವೇ? ಬೇಡವಾದರೆ ಏನೂ ಹಾನಿಯಿಲ್ಲ, ದುಃಖವೇಕೆ? ಮರುಳನಂತೆ ನೀನು ವರ್ತಿಸಬೇಡ, ನಿನ್ನ ಅಪದೆಸೆಯನ್ನು ನಾನು ಬಯಸುವವನಲ್ಲ ಎಂದು ಕೃಷ್ಣನು ಕರ್ಣನಿಗೆ ಹೇಳಿದನು.

ಅರ್ಥ:
ಹೇಳು: ಮಾತಾಡು; ಚಿತ್ತ: ಮನಸ್ಸು; ಗ್ಲಾನಿ:ಬಳಲಿಕೆ, ದಣಿವು, ನೋವು; ಮನ: ಮನಸ್ಸು; ಸೂನು: ಮಕ್ಕಳು; ಬೆಸ:ವಿಚಾರಿಸುವುದು; ಸೇರು: ಕೂಡು; ಹಾನಿ: ನಷ್ಟ; ಆಣೆ: ಪ್ರಮಾಣ; ನುಡಿ: ಮಾತು; ದುಮ್ಮಾನ: ದುಗುಡ, ದುಃಖ; ಮರುಳು:ಬುದ್ಧಿಭ್ರಮೆ, ಹುಚ್ಚು; ಬೇಡ: ಸಲ್ಲದು, ಕೂಡದು; ಅಪದೆಸೆ: ದುರ್ದಶೆ, ಕೆಟ್ಟ ಯೋಗ; ಬಯಸು: ಇಷ್ಟಪಡು; ಕೇಳು: ಆಲಿಸು;

ಪದವಿಂಗಡಣೆ:
ಏನು +ಹೇಳೈ +ಕರ್ಣ +ಚಿತ್ತ
ಗ್ಲಾನಿಯಾವುದು +ಮನಕೆ+ ಕುಂತೀ
ಸೂನುಗಳ +ಬೆಸಕೈಸಿ+ ಕೊಂಬುದು +ಸೇರದೇ +ನಿನಗೆ
ಹಾನಿಯಿಲ್+ಎನ್ನಾಣೆ +ನುಡಿ +ದು
ಮ್ಮಾನವೇತಕೆ +ಮರುಳುತನ +ಬೇಡ್
ಆನು +ನಿನ್+ಅಪದೆಸೆಯ +ಬಯಸುವನಲ್ಲ+ ಕೇಳೆಂದ

ಅಚ್ಚರಿ:
(೧) ಏನು, ಆನು – ಪ್ರಾಸ ಪದಗಳ ಬಳಕೆ
(೨) ಕರ್ಣನನ್ನು ಉತ್ತೇಜಿಸುವ ಮಾತು – ಹಾನಿಯಿಲ್ಲೆನ್ನಾಣೆ, ನಿನ್ನಪದೆಸೆಯ ಬಯಸುವವನಲ್ಲ